ವಕೀಲ್ ಸಾಬ್ vs ದರ್ಶನ್: ಹೊಂಬಾಳೆ ವಿರುದ್ಧ ಮುಗಿಬಿದ್ದ ಡಿ-ಅಭಿಮಾನಿಗಳು
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ವಿತರಕರು ನಿರ್ಧರಿಸಿದ್ದರು. ಪ್ರಸ್ತುತ ಸಂತೋಷ್ ಥಿಯೇಟರ್ನಲ್ಲಿ ದರ್ಶನ್ ಸಿನಿಮಾ ಪ್ರದರ್ಶನ ಕಾಣ್ತಿದೆ.
ದರ್ಶನ್ ಸಿನಿಮಾ ಎತ್ತಂಗಡಿ ಮಾಡಿ 'ವಕೀಲ್ ಸಾಬ್' ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದರು. ಆದ್ರೆ, ಡಿ ಬಾಸ್ ಚಿತ್ರವನ್ನು ತೆಗೆದುಹಾಕುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಅಭಿಮಾನಿಗಳು ವಿತರಕರ ವಿರುದ್ಧ ಮುಗಿಬಿದ್ದರು. ವಕೀಲ್ ಸಾಬ್ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್ ವಿತರಿಸುತ್ತಿದ್ದಾರೆ. ಹೀಗಾಗಿ, ಹೊಂಬಾಳೆ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ವಿರುದ್ಧ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಮುಂದೆ ಓದಿ...

ಸಂತೋಷ್ ಚಿತ್ರಕ್ಕೆ ವಕೀಲ್ ಸಾಬ್ ಎಂಟ್ರಿ?
ಕನ್ನಡ ಸಿನಿಮಾಗಳಿಗೆ ಪ್ರಮುಖ ಚಿತ್ರಮಂದಿರ ಎನಿಸಿಕೊಂಡಿರುವ ಸಂತೋಷ್ ಥಿಯೇಟರ್ನಲ್ಲಿ ದರ್ಶನ್ ಸಿನಿಮಾ ತೆಗೆದು ಹಾಕಿ, 'ವಕೀಲ್ ಸಾಬ್' ಬಿಡುಗಡೆ ಮಾಡುವ ಹೊಂಬಾಳೆ ಸಂಸ್ಥೆ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೆ ಸಂತೋಷ್ ಚಿತ್ರಮಂದಿರದಲ್ಲಿ ವಕೀಲ್ ಸಾಬ್ ಪ್ರದರ್ಶಿಸಬಾರದು ಎಂದು ಪಟ್ಟು ಹಿಡಿದರು.

ಟಾರ್ಗೆಟ್ ಮಾಡುವುದು ಸರಿಯಲ್ಲ
ಸಂತೋಷ್ ಚಿತ್ರಮಂದಿರದಲ್ಲಿ ವಕೀಲ್ ಸಾಬ್ ಪ್ರದರ್ಶಿಸುವ ತೀರ್ಮಾನಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಗೌಡ ಹಾಗೂ ಹೊಂಬಾಳೆ ಸಂಸ್ಥೆ ವಿರುದ್ಧ ಟೀಕೆಗಳು ವ್ಯಕ್ತವಾದವು. ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ದಾಳಿ ಮಾಡಿದರು. ತದನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ ಕಾರ್ತಿಕ್ ಗೌಡ, ''ವೈಯಕ್ತಿಕವಾಗಿ ಒಬ್ಬರನ್ನು ಮತ್ತು ಕುಟುಂಬವನ್ನು ಟೀಕಿಸುವುದು ಸರಿಯಲ್ಲ'' ಎಂದು ಟ್ವೀಟ್ ಮಾಡಿದರು.

ವಕೀಲ್ ಸಾಬ್ ಹಿಂದಕ್ಕೆ!
ತೀವ್ರ ವಿರೋಧದ ಬಳಿಕ ವಕೀಲ್ ಸಾಬ್ ಚಿತ್ರವನ್ನು ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಲಾಯಿತು. ಈ ಬಗ್ಗೆ ಸ್ವತಃ ಕಾರ್ತಿಕ್ ಗೌಡ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿದರು. ''ವಕೀಲ್ ಸಾಬ್ ಭೂಮಿಕೆ ಥಿಯೇಟರ್ನಲ್ಲಿ ಪ್ರದರ್ಶನವಾಗಲಿದೆ. ಸಂತೋಷ್ ಚಿತ್ರಮಂದಿರದಲ್ಲಿ ರಾಬರ್ಟ್ ಮುಂದುವರಿಯಲಿದೆ' ಎಂದು ತಿಳಿಸಿದರು.
Recommended Video

ನಿರ್ಮಾಪಕ ಉಮಾಪತಿ ಸ್ಪಷ್ಟನೆ
ಈ ಎಲ್ಲ ಬೆಳವಣಿಗೆಯ ನಂತರ ದರ್ಶನ್ ಸಿನಿಮಾದ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ''ನಮ್ಮ ಸಿನಿಮಾ ಇನ್ನು ಸ್ವಲ್ಪ ದಿನ ಸಂತೋಷ್ ಚಿತ್ರಮಂದಿರದಲ್ಲೇ ಪ್ರದರ್ಶನವಾಗುತ್ತದೆ. ದಯವಿಟ್ಟು ದರ್ಶನ್ ಅವರ ಅಭಿಮಾನಿಗಳು ಇದಕ್ಕೆ ಸಹಕರಿಸಬೇಕು'' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











