ಸುದೀಪ್ ಅಭಿಮಾನಿಗಳ ಮೇಲೆ ಗರಂ ಆದ ವಾಲ್ಮೀಕಿ ಶ್ರೀ! ಕ್ಯಾನ್ಸಲ್ ಮಾಡ್ತೀನೆಂದು ಎಚ್ಚರಿಕೆ
ಸ್ಟಾರ್ ನಟರ ಅಬ್ಬರ ಇತ್ತೀಚೆಗೆ ಹೆಚ್ಚಾಗಿದೆ. ಸಿನಿಮಾಕ್ಕೆ ಸಂಬಂಧಿಸದ ಕಾರ್ಯಕ್ರಮಗಳಲ್ಲಿಯೂ ಕೆಲವು ನಟರ ಅಭಿಮಾನಿಗಳು ಕೂಗಾಟ-ಕಿರುಚಾಟ ಮಾಡುವ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ. ಇದರಿಂದ ಕಾರ್ಯಕ್ರಮ ಆಯೋಜಿಸಿದವರು, ವೇದಿಕೆ ಮೇಲಿದ್ದವರು ಮುಜುಗರಕ್ಕೆ ಒಳಗಾಗುವಂತಾಗಿದೆ.
ದರ್ಶನ್ ಅಭಿಮಾನಿಗಳು ಕೆಲವು ಸಿನಿಮೇತರ ಕಾರ್ಯಕ್ರಮಗಳಲ್ಲಿ ದರ್ಶನ್ ಭಾಗವಹಿಸಿದ್ದಾಗ ಹೀಗೆ ವರ್ತಿಸಿದ್ದರು, ಒಮ್ಮೆಯಂತೂ ದರ್ಶನ್ ಅಭಿಮಾನಿಗಳ ಕೂಗಾಟದ ಹೆಚ್ಚಾದ ಕಾರಣ ಸ್ವತಃ ಸಿಎಂ ಅವರು ಮೈಕ್ ಬಿಟ್ಟು ಹಿಂದೆ ಬಂದುಬಿಟ್ಟಿದ್ದರು. ಈಗ ಸುದೀಪ್ ಅಭಿಮಾನಿಗಳ ಸರದಿ.
ದಾವಣಗೆರೆಯ ಹರಿಹರದ ರಾಜನಹಳ್ಳಿಯಲ್ಲಿ ವಾಕ್ಮೀಕಿ ಜಾತ್ರೆ ನಡೆಯುತ್ತಿದ್ದು, ನಟ ಸುದೀಪ್ ಅವರು ಕಾರ್ಯಕ್ರಮಕ್ಕೆ ಬರುತ್ತಾರೆಂದು ಮೊದಲೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು, ಮಾತ್ರವಲ್ಲದೆ, ಬೇರೆ ಕಾರ್ಯಕ್ರಮ ನಡೆಯುವಾಗಲೂ ಸುದೀಪ್ ಅಭಿಮಾನಿಗಳು ನೆಚ್ಚಿನ ನಟನ ಹೆಸರು ಕೂಗಿ ಅರಚಾಟ ಮಾಡಿ ವೇದಿಕೆ ಮೇಲಿದ್ದವರಿಗೆ ಕಿರಿ-ಕಿರಿ ಉಂಟು ಮಾಡಿದರು.

ಕಿಚ್ಚ ಸುದೀಪ್ ಅವರು ಹರಿಹರ ತಾಲೂಕಿನ ರಾಜನಹಳ್ಳಿಗೆ ಬರುತ್ತಾರೆ ಎಂಬ ವಿಚಾರ ತಿಳಿದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳು ಬೆಳಿಗ್ಗೆಯಿಂದಲೂ ಕಿಚ್ಚ ಕಿಚ್ಚ ಘೋಷಣೆ ಹಾಕುತ್ತಲೇ ಇದ್ದರು. ಇದರಿಂದ ಕೆರಳಿದ ವಾಲ್ಮೀಕಿ ಪೀಠಾಧಿಪತಿ ಪ್ರಸನ್ನನಾನಂದ ಸ್ವಾಮೀಜಿ ಅವರು ಗರಂ ಆದ ಘಟನೆ ನಡೆಯಿತು.
''ಏಯ್ ಕುತ್ಕೊಳ್ರೋ. ಸುಮ್ಮನೆ ಕುಳಿತುಕೊಂಡರೆ ಸುದೀಪ್ ಬರುತ್ತಾರೆ. ಗಲಾಟೆ ಮಾಡಿದ್ರೆ ಬರೋದಿಲ್ಲ. ಸುದೀಪ್ ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇದೇ ರೀತಿ ಗಲಾಟೆ ಮುಂದುವರಿಸಿದರೆ ನಾನೇ ಬರುವುದು ಬೇಡ ಎಂದು ಸುದೀಪ್ಗೆ ಹೇಳುತ್ತೇನೆ. ಅವರು ಬರುವವರೆಗೆ ಶಾಂತಿಯಿಂದ ವರ್ತಿಸಬೇಕು. ಗಲಾಟೆ, ಕಿರಿಕಿರಿ ಮಾಡಿದರೆ ಕಾರ್ಯಕ್ರಮ ಕ್ಯಾನ್ಸಲ್ ಮಾಡ್ತೀನಿ ಎಂದು ಸಿಟ್ಟಿನಿಂದಲೇ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರು, ಇತರ ಪ್ರಮುಖ ನಾಯಕರು ವೇದಿಕೆಯಲ್ಲಿದ್ದಾಗಲೇ ಸುದೀಪ್ ಅಭಿಮಾನಿಗಳು ಕೂಗಾಟ-ಕಿರುಚಾಟ ಮಾಡಿದರು. ಇದು ವೇದಿಕೆ ಮೇಲಿದ್ದವರಿಗೆ ಕಿರಿ-ಕಿರಿ ಉಂಟು ಮಾಡಿತು.
ದಾಂಧಲೆ
ಸುದೀಪ್ ಆಗಮನ ತಡವಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ನೂರಕ್ಕೂ ಹೆಚ್ಚು ಚೇರ್ ಗಳನ್ನು ಜಖಂಗೊಳಿಸಿದ ಘಟನೆ ನಡೆಯಿತು. ಈ ವೇಳೆ ಅಭಿಮಾನಿಗಳು ಕಿಚ್ಚ ಕಿಚ್ಚ, ಅಭಿನಯ ಚಕ್ರವರ್ತಿ ಎಂಬ ಘೋಷಣೆ ಹಾಕಿದರು. ಸುದೀಪ್ ಅವರು 4.15ಕ್ಕೆ ಬರಬೇಕಿತ್ತಾದರೂ ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷವೂ ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗವಹಿಸಿದ್ದರು. ಆಗಲೂ ಸಹ ಅಭಿಮಾನಿಗಳು ಅತಿರೇಕದ ವರ್ತನೆ ಪ್ರದರ್ಶಿಸಿದ್ದ. ಸುದೀಪ್ ಹೆಲಿಕಾಪ್ಟರ್ನಲ್ಲಿ ಹೊರಡುವಾಗ, ಒಂದಿಬ್ಬರಂತೂ ಹೆಲಿಪ್ಯಾಡ್ಗೆ ನುಗ್ಗಿಬಿಟ್ಟಿದ್ದರು. ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾಗಿದ್ದರು.


Click it and Unblock the Notifications










