ಬೆಂಗಳೂರಿನಲ್ಲಿ ವಾರಿಸುಗೆ 700+ ಶೋ, ತುನಿವುಗೆ 500+ ಶೋಸ್; 'ವೇದ'ಗೆ ಸಿಕ್ಕಿದ್ದು ಎರಡಂಕಿ ಪ್ರದರ್ಶನಗಳಷ್ಟೇ!
ಸಂಕ್ರಾಂತಿ ಬಂತೆಂದರೆ ಸಾಕು ಬಾಕ್ಸ್ ಆಫೀಸ್ನಲ್ಲಿ ತೆಲುಗು ಹಾಗೂ ತಮಿಳು ಚಿತ್ರಗಳ ಸುಗ್ಗಿ ಆರಂಭವಾಗಿಬಿಡುತ್ತದೆ. ತೆಲುಗು ರಾಜ್ಯಗಳು ಹಾಗೂ ತಮಿಳುನಾಡಿನಲ್ಲಿ ಸಾಲು ಸಾಲು ರಜೆಗಳಿರುವ ಕಾರಣ ಈ ದಿನಗಳಂದು ಚಿತ್ರಗಳನ್ನು ಬಿಡುಗಡೆ ಮಾಡಿದರೆ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂಬ ಯೋಜನೆ ನಿರ್ಮಾಪಕರದ್ದು.
ಹೀಗಾಗಿ ಪ್ರತಿ ಸಂಕ್ರಾಂತಿಯಂದು ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುವುದು ಕಾಮನ್. ಅದೇ ರೀತಿ ಈ ವರ್ಷವೂ ಸಹ ತೆಲುಗಿನಲ್ಲಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ( ಜನವರಿ 13 ) ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ( ಜನವರಿ 12 ) ಬಿಡುಗಡೆಯಾಗುತ್ತಿದ್ದರೆ, ತಮಿಳಿನಲ್ಲಿ ಇಂದು ( ಜನವರಿ 11 ) ಅಜಿತ್ ಕುಮಾರ್ ನಟನೆಯ ತುನಿವು ಹಾಗೂ ವಿಜಯ್ ನಟನೆಯ ವಾರಿಸು ಚಿತ್ರಗಳು ಚಿತ್ರಮಂದಿರಕ್ಕೆ ಬಂದಿವೆ.
ಎರಡೂ ಚಿತ್ರಗಳೂ ಸಹ ಮಧ್ಯರಾತ್ರಿಯಲ್ಲೇ ಪ್ರದರ್ಶನ ಆರಂಭಿಸಿದ್ದು, ಬೆಳಗಿನ ಜಾವದೊಳಗೇ ಹಲವೆಡೆ ಮೊದಲ ಪ್ರದರ್ಶನಗಳು ಮುಕ್ತಾಯಗೊಂಡಿವೆ. ತಮಿಳು ನಾಡು ಮಾತ್ರವಲ್ಲದೇ ಕೇರಳ ಹಾಗೂ ಕರ್ನಾಟಕದಲ್ಲಿಯೂ ಸಹ ಮುಂಜಾನೆಗೂ ಮುನ್ನವೇ ಪ್ರದರ್ಶನಗಳು ಆರಂಭಗೊಂಡಿವೆ. ಬೆಂಗಳೂರಿನಲ್ಲಿ ಮಧ್ಯರಾತ್ರಿ 1.30ಕ್ಕೆ ಪ್ರದರ್ಶನಗಳು ನಡೆದಿವೆ. ಇನ್ನು ಈ ಚಿತ್ರಗಳು ಬಿಡುಗಡೆಯ ದಿನ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನಗಳನ್ನೂ ಸಹ ಪಡೆದುಕೊಂಡಿವೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಇತರೆ ಚಿತ್ರಗಳು ಶೋಸ್ ಕಳೆದುಕೊಂಡಿವೆ. ಹಾಗಾದರೆ ಬೆಂಗಳೂರಿನಲ್ಲಿ ಜನವರಿ 11ರಂದು ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಯಾವ ಚಿತ್ರಕ್ಕೆ ಎಷ್ಟು ಶೋ?
ಜನವರಿ 11 ವಾರಿಸು ಹಾಗೂ ತುನಿವು ಚಿತ್ರಗಳು ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಶೋಗಳನ್ನು ಪಡೆದುಕೊಂಡಿರುವ ಚಿತ್ರಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
ವಿಜಯ್ ನಟನೆಯ ವಾರಿಸು ಚಿತ್ರ ಈ ದಿನದಂದು ಬೆಂಗಳೂರಿನಲ್ಲಿ ಬರೋಬ್ಬರಿ 757 ಪ್ರದರ್ಶನಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದೆ.
ಇನ್ನು ಅಜಿತ್ ಕುಮಾರ್ ನಟನೆಯ ತುನಿವು ಬೆಂಗಳೂರಿನಲ್ಲಿ 568 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಹಾಲಿವುಡ್ನ ಅವತಾರ್ ದ ವೇ ಆಫ್ ವಾಟರ್ ಚಿತ್ರ 90 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಶಿವ ರಾಜ್ಕುಮಾರ್ ನಟನೆಯ ವೇದ ಚಿತ್ರ ಬೆಂಗಳೂರಿನಲ್ಲಿ 39 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಡಾರ್ಲಿಂಗ್ ಕೃಷ್ಣ ನಟನೆಯ ಮಿಸ್ಟರ್ ಬ್ಯಾಚುಲರ್ ಚಿತ್ರ ಬೆಂಗಳೂರಿನಲ್ಲಿ 19 ಪ್ರದರ್ಶನಗಳನ್ನು ಪಡೆದುಕೊಂಡಿದೆ.

ತಮಿಳು ಚಿತ್ರಗಳ ಬಿಡುಗಡೆ ಹೊಡೆತ ಕನ್ನಡ ಚಿತ್ರಗಳ ಮೇಲೆ
ಇನ್ನು ಮೇಲ್ಕಂಡ ಪಟ್ಟಿಯನ್ನು ಗಮನಿಸಿದರೆ ತಮಿಳು ಚಿತ್ರಗಳ ಬಿಡುಗಡೆ ಕನ್ನಡ ಚಿತ್ರಗಳ ಮೇಲೆ ನಮ್ಮದೇ ಬೆಂಗಳೂರಿನಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಸ್ಪಷ್ಟವಾಗಿ ಅರಿಯಬಹುದಾಗಿದೆ. ಈ ಸಂಖ್ಯೆಗಳನ್ನು ನೋಡಿದ ಕನ್ನಡ ಪ್ರೇಮಿಗಳು ಮೂಲ ತಮಿಳು ಚಿತ್ರಗಳಿಗೆ ಇಷ್ಟು ಪ್ರದರ್ಶನಗಳು ದೊರಕಿದ್ದರ ಕುರಿತು ಕಿಡಿಕಾರಿದ್ದಾರೆ.

ಶುಕ್ರವಾರ ಇನ್ನಷ್ಟು ಹೆಚ್ಚಲಿದೆ ಹಾವಳಿ
ಇದು ತಮಿಳು ಚಿತ್ರಗಳ ಬಿಡುಗಡೆಯ ಕಥೆಯಾದರೆ, ನಾಳೆ ( ಜನವರಿ 12 ) ತೆಲುಗಿನ ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ ಹಾಗೂ ಶುಕ್ರವಾರ ( ಜನವರಿ 13 ) ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಬಿಡುಗಡೆಯಾಗಲಿದ್ದು, ಆಗ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ಹಾವಳಿ ಇನ್ನಷ್ಟು ಹೆಚ್ಚಾಗಲಿದ್ದು, ಕನ್ನಡ ಚಿತ್ರಗಳು ಮತ್ತಷ್ಟು ಪ್ರದರ್ಶನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.


Click it and Unblock the Notifications











