ಡಾಲಿ ಧನಂಜಯ್ ಅದ್ಧೂರಿ ಮದ್ವೆಯಾಗಿದ್ದು ತಪ್ಪಾ ? ವೀರಕಪುತ್ರ ಶ್ರೀನಿವಾಸ್ ಹೇಳಿದ್ದೇನು ..?
ಡಾಕ್ಟರ್ ಧನ್ಯತಾ ಅವರ ಜೊತೆ ಡಾಲಿ ಧನಂಜಯ್ ಅದ್ಧೂರಿಯಾಗಿ ಮದುವೆಯಾಗಿದ್ದೇ ತಡ, ಅನೇಕರ ಕಣ್ಣು ಕೆಂಪಾಗಿದೆ. ಬಡವರ ಮಕ್ಳು ಬೆಳಿಬೇಕು ಎಂದು ಹೇಳುವ ಡಾಲಿ ಧನಂಜಯ್ ಅವರ ಮದುವೆ ವೈಭವೋಪೇತವಾಗಿ ನಡೆದಿದೆ ಎಂದು ಒಂದು ವರ್ಗ ಲೊಚಗುಟ್ಟುತ್ತಿದೆ. ಡಾಲಿ ಧನಂಜಯ್ ಅವರನ್ನು ಟ್ರೋಲ್ ಮಾಡುತ್ತಿದೆ. ಬಡವರ ಮಕ್ಕಳು ಯಾವಾಗಲೂ ಬಡವರಾಗಿಯೇ ಇರಬೇಕು ಎಂಬರ್ಥದಲ್ಲಿ ವಿತ್ತಂಡ ವಾದವನ್ನು ಕೂಡ ಮಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಈ ಚರ್ಚೆಗಳನ್ನು ಗಮನಿಸಿ ಒಂದಲ್ಲ ಒಂದು ಸಮಾಜಸ್ನೇಹಿ ಕಾರ್ಯಗಳನ್ನು ನಡೆಸುತ್ತಲೇ ಬರುತ್ತಿರುವ, ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕಗೊಳಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬರುತ್ತಿರುವ ವೀರಕಪುತ್ರ ಶ್ರೀನಿವಾಸ್ ಈಗ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ವೀರಕ ಪುತ್ರ ಶ್ರೀನಿವಾಸ್ ಅವರ ಫೋಸ್ಟ್ನಲ್ಲಿ ಏನಿದೆ ಎಂದು ತಿಳಿಯಲು ಮುಂದೆ ಓದಿ

ವೀರಕಪುತ್ರ ಶ್ರೀನಿವಾಸ್ ಬರಹ
ನಿಮ್ಮ ಏರಿಯಾದಲ್ಲಿರುವ ವೀರಕಪುತ್ರ ಶ್ರೀನಿವಾಸ ಅವರು ನನಗೆ ಗೊತ್ತು ಅಂತ ನನ್ನ ಪರಿಚಯದವರೊಬ್ಬರು ನಮ್ಮ ಏರಿಯಾದ ಶ್ರೀಮಂತರೊಬ್ಬರಿಗೆ ಹೇಳಿದ್ರಂತೆ. ಅವ್ರು ಕೂಡಲೇ ʼಓಹ್ ಅವ್ನಾ, ಮೊನ್ನೆ ಮೊನ್ನೆ ತನಕ ನಮ್ಮ ಮನೆ ಮುಂದೆ ಸೈಕಲ್ ಹೊಡ್ಕೊಂಡ್ ಹೋಗ್ತಾ ಬರ್ತಾ ಇದ್ದ" ಅಂದ್ರಂತೆ! ಅವರ ಪ್ರಕಾರ ನನ್ನ ಐಡೆಂಟಿಟಿ ಅಷ್ಟೇ! ನಾನು ಬಡವನಾಗಿದ್ದೆ ಅನ್ನೋದಷ್ಟೇ ಅವರಿಗೆ ಮುಖ್ಯವಾಗಿದ್ದೆ.
ಮುಂದೆ ನಾನು ಏನೇ ಆದ್ರೂ ಅವರ ಪಾಲಿಗೆ ಮಾತ್ರ ಅಷ್ಟೇ ಆಗಿರ್ತೀನಿ. ಇದು ನಮ್ಮ ಮನಸ್ಥಿತಿ. ಬಡವ ನೀನು ಹೀಗೇ ಇರಬೇಕು ಅನ್ನೋ ಸಿದ್ದಸೂತ್ರಗಳನ್ನು ನಮ್ಮ ಮೇಲೆ ಹೇರಿಬಿಟ್ಟಿದ್ದಾರೆ. ಇದು ಡಾಲಿ ಧನಂಜಯ್ ಅವರಿಗೂ ತಪ್ಪಲಿಲ್ಲ; ಅವ್ರು ಬಡವರಾಗಿದ್ರು. ಬಡವರ ಮಕ್ಕಳು ಬೆಳೀಬೇಕು ಅಂದ್ರು. ಆದ್ರೆ ಶ್ರೀಮಂತನಂತೆ ಮದುವೆಯಾಗಿಬಿಟ್ರು ಅನ್ನೋದು ತುಂಬಾ ಜನರ ಚಿಂತೆಗೆ ಕಾರಣವಾಗಿರುವ ವಿಷಯ. ಅಷ್ಟಕ್ಕೂ ಡಾಲಿ ಅವರು ಬಡವರ ಮಕ್ಕಳು ಬೆಳೀಬೇಕು ಅಂದ್ರು ನಿಜ. ಬೆಳೆದ ಮೇಲೂ ಬಡವನಂತೆ ಬದುಕಿ ಅಂತ ಹೇಳಿದ್ರಾ?
ವಾಸ್ತವದಲ್ಲಿ...
ಬಡವನ ಮಗ ಬೆಳ್ದ ಅನ್ನೋದು ನಮ್ಮ ಖುಷಿಯಾಗಬೇಕಿತ್ತು.
ಬಡವನ ಮಗ ಇಡೀ ರಾಜ್ಯವೇ ನೋಡುವಂತೆ ಮದುವೆಯಾಗ್ತಿದ್ದಾನೆ ಅಂತ ಹೆಮ್ಮೆಪಡಬೇಕಿತ್ತು.
ಬಡವನ ಮಗ ಇಡೀ ಶಕ್ತಿಕೇಂದ್ರವನ್ನೇ ತನ್ನ ಮದುವೆಗೆ ಕರೆಸಿಕೊಂಡ ಅಂತ ಕಾಲರ್ ಏರಬೇಕಿತ್ತು.
ಬಡವನ ಮಗನ ಮದುವೆಗೆ ಸೆಲೆಬ್ರಿಟಿಗಳೂ ಕ್ಯೂ ನಿಂತ್ರು ಅನ್ನೋದು ಉದಾಹರಣೆಯಾಗ್ಬೇಕಿತ್ತು.
ಬಡವನ ಮಗ ಶ್ರೀಮಂತರನ್ನೂ ನಾಚಿಸುವಂತೆ ಮದುವೆಯಾದ ಅನ್ನೋದು ಸ್ಫೂರ್ತಿಯಾಗಬೇಕಿತ್ತು.
ನಾವೂ ಹೀಗೆ ಬೆಳೀಬೇಕು ಅನ್ನೋ ಹಠ ಹುಟ್ಟಬೇಕಿತ್ತು.
ಆದ್ರೆ ನಾವ್ ಮಾತ್ರ ಬಡವನ ಮಗ ಇಷ್ಟು ವೈಭವದಿಂದ ಮದ್ವೆಯಾಗಿಬಿಟ್ಟ ಅಂತ ಒದ್ದಾಡ್ತಿದ್ದೀವಿ. ಅದ್ಯಾಕೆ ಬಡವರ ಮಕ್ಕಳು ಖರ್ಚು ಮಾಡಬಾರದ? ದುಡಿದಿದ್ದೆಲ್ಲವನ್ನೂ ಬ್ಯಾಂಕ್ ಅಕೌಂಟಿನಲ್ಲೋ, ಬ್ಲಾಕ್ ಮನಿಯಾಗಿಸಿಕೊಂಡೋ ಕೂತಿರಬೇಕಿತ್ತಾ? ಅಯ್ಯೋ ನಾನು ಬಡವನಾಗಿದ್ದೆ. ಆದ್ದರಿಂದ ನಾನು ಶ್ರೀಮಂತನಾದ್ರೂ ಶ್ರೀಮಂತನಂತೆ ವರ್ತಿಸಬಾರದು. ಬಡವನಾಗಿಯೇ ಬದುಕಬೇಕು ಅಂತ ಯೋಚಿಸಬೇಕಿತ್ತಾ? ಅಷ್ಟಕ್ಕೂ ಡಾಲಿ ದುಡಿದ ಹಣ, ಎಲ್ಲಿಗೆ ಹೋಗ್ತಿದೆ? ಅದಕ್ಕೂ ಮೊದಲು ಇದೊಂದು ವಿಷ್ಯ ಓದಿಬಿಡಿ. ಕೇಂದ್ರ ಸರ್ಕಾರ ಪ್ರತಿ ನಾಲ್ಕುವರ್ಷಕ್ಕೊಮ್ಮೆ ತನ್ನ ನೌಕರರಿಗೆ ಎಲ್ ಟಿ ಸಿ ಸ್ಕೀಮ್ ಒದಗಿಸುತ್ತೆ. ಅದರ ಅಡಿಯಲ್ಲಿ ನೌಕರ ಮತ್ತವರ ಕುಟುಂಬ ಪ್ರವಾಸ ಹೋಗಿ ಬರಲು ಆಗುವ ಟಿಕೆಟ್ ಖರ್ಚನ್ನು ಕೇಂದ್ರ ಸರ್ಕಾರವೇ ಭರಿಸುತ್ತೆ. ಸಂಬಳ ಕೊಟ್ಮೇಲೆ, ಇದೆಲ್ಲಾ ಯಾಕೆ ಕೊಡಬೇಕು? ಸರ್ಕಾರಕ್ಕೆ ತಲೆ ಕೆಟ್ಟಿದೆಯಾ? ಇಲ್ಲ... ಸರ್ಕಾರ ಹೇಗೆ ಯೋಚನೆ ಮಾಡುತ್ತೆ ಅಂದ್ರೆ, ನೀವು ನಾಲ್ಕು ವರ್ಷ ಕೂಡಿಟ್ಟ ಹಣವನ್ನು ಬೇರೊಂದು ಕಡೆಗೆ ಪ್ರವಾಸ ಮಾಡಿ ಖರ್ಚು ಮಾಡಿ ಅನ್ನುತ್ತೆ. ಆ ನಿಮ್ಮ ಕೂಡಿಟ್ಟ ಹಣ ಆ ದೂರದೂರಿನ ಒಬ್ಬ ಟ್ಯಾಕ್ಸಿಯವನಿಗೆ, ಲಾಡ್ಜ್ ಅವನಿಗೆ, ಗೈಡಿಗೆ, ಬಟ್ಟೆ ಅಂಗಡಿಯವನಿಗೆ, ಅವರಿಗೆ, ಇವರಿಗೆ ಸೇರಲಿ ಅನ್ನುತ್ತೆ. ಅಂದರೆ ದೇಶದ ಪ್ರತಿ ಪ್ರಜೆಗೂ ಎಷ್ಟೋ ಅಷ್ಟು ಆದಾಯ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ.
ಇದು ಧನಂಜಯ್ ಅವರ ಮದುವೆಯಲ್ಲಿಯೂ ಆಗಿದೆ. ಪೆಂಡಾಲ್ ಹಾಕೋರಿಗೆ, ಕಸ ಗುಡಿಸೋರಿಗೆ, ಊಟ ಬಡಿಸೋರಿಗೆ, ಹೂ ಮಾರೋರಿಗೆ, ತರಕಾರಿಗೆ, ದವಸ ಧಾನ್ಯಕ್ಕೆ, ಪ್ರಿಂಟಿಂಗ್ ಪ್ರೆಸ್, ಫೋಟೋ, ವಿಡಿಯೋ, ಬೌನ್ಸರ್, ಟ್ರಾವೆಲ್ಸ್, ಹೋಟೆಲ್ಸ್...ಹೀಗೆ ಧನಂಜಯ್ ದುಡಿದ ಹಣ ನೂರಾರು ಬಡವರಿಗೆ ತಲುಪಿದೆ. ಈ ಎಲ್ಲದರ ಗುತ್ತಿಗೆ ಪಡೆದವರ ಕುಟುಂಬಗಳು ಚೆನ್ನಾಗಿರುತ್ತವೆ. ಅಂದ್ರೆ ಬೇಸರವೇಕೆ? ನಮ್ಮ ಕಷ್ಟವೇ ಅದು. ನಮಗೆ ಹಾಗೆಲ್ಲ ಸುಮ್ನೆಇರೋಕಾಗಲ್ಲ! ಒಂದು ಕಾಲಕ್ಕೆ ನೈತಿಕ ಪೊಲೀಸ್ ಗಿರಿ ಅನ್ನೋ ಪದ ತುಂಬಾ ಚರ್ಚೆಯಾಗ್ತಿತ್ತು. ಪ್ರತಿ ಸರ್ಕಾರವೂ ಅದನ್ನು ಖಂಡಿಸುತಿತ್ತು. ಜನಸಾಮಾನ್ಯರಂತೂ ಅದರ ವಿರುದ್ಧ ಮಾತನಾಡಿದ್ದೇ ಮಾತನಾಡಿದ್ದು. ಆದ್ರೆ ಇವತ್ತಿಗೆ ಇಡೀ ಸೊಶಿಯಲ್ ಮೀಡಿಯಾವೇ ನೈತಿಕ ಪೊಲೀಸ್ ಗಿರಿಯಲ್ಲಿ ತೊಡಗಿಸಿಕೊಂಡಿದೆ. ಸೋಶಿಯಲ್ ಮೀಡಿಯಾ ಅಂದ್ರೆ ಬೇರೇನೂ ಅಲ್ಲ ನಾವು ನೀವು! ಅವರವರ ಪಾಡಿಗೆ ಅವರನ್ನು ಬದುಕಲು ಬಿಡುವುದಕ್ಕಿಂತ ಹೆಚ್ಚಿನ ದೊಡ್ಡತನ ಯಾವುದಿದೆ ಹೇಳಿ?
ಕೊನೆಮಾತು
ಬಡವನ ಮಗ ಬೆಳ್ದ ಮತ್ತು ರಾಜ್ಯವೇ ನೋಡುವಂತೆ ಮದುವೆಯಾದ ಅನ್ನೋದು ಬೇಸರಕ್ಕೆ ಕಾರಣವಾಗಬಾರದು.ಬಡವರ ಮಕ್ಕಳಿಗೆ ಮಾದರಿಯಾಗಬೇಕು. ಆದ್ರೆ ಡಾಲಿ ತರ ಮದ್ವೆಯಾಗ್ತೀನಿ ಅಂತ ಹಠತೊಟ್ಟು ಸಾಧಿಸಬೇಕು. ಬಡವರ ಮಕ್ಕಳು ಡಾಲಿ ತರ ಆಗಲಿ. ಡಾಲಿ ಅವರ ವೈವಾಹಿಕ ಜೀವನಕ್ಕೆ ಶುಭಾಶಯಗಳು.


Click it and Unblock the Notifications










