RCB ಮತ್ತೆ ಚಾಂಪಿಯನ್; ಅಶ್ವಿನಿ ಪುನೀತ್ ರಾಜ್ಕುಮಾರ್ ಬಂದ್ರೆ 'ಅಶುಭ' ಅಂದವರು ಎಲ್ಲೋದ್ರಪ್ಪಾ?
ಆರ್ಸಿಬಿ ತಂಡ ಮತ್ತೊಂದು ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ. ರಜತ್ ಪಾಟೀದಾರ್ ಮತ್ತವರ ತಂಡ ಆಡಿಕೊಳ್ಳುತ್ತಿದ್ದವರ ಬಾಯಿ ಮುಚ್ಚಿಸಿದೆ. ಸತತ 17 ವರ್ಷ ಆರ್ಸಿಬಿ ತಂಡ ಟ್ರೋಫಿ ಒಂದೇ ಒಂದು ಬಾರಿ ಫೈನಲ್ ಪಂದ್ಯ ಗೆದ್ದಿರಲಿಲ್ಲ. ಇದೇ ಕಾರಣಕ್ಕೆ ಸಾಕಷ್ಟು ಟ್ರೋಲ್ ಎದುರಿಸುವಂತಾಗಿತ್ತು. ಆದರೆ ಅಭಿಮಾನಿಗಳು ಮಾತ್ರ ತಂಡದ ಕೈ ಬಿಡಲಿಲ್ಲ. ಆದರೆ ಕಳೆದ ವರ್ಷ ಆರ್ಸಿಬಿ ತಂಡ ಗೆದ್ದು ಬೀಗಿತ್ತು.
ಮತ್ತೆ ಅದೇ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ(ಮೇ 31) ಆರ್ಸಿಬಿ ತಂಡ 2ನೇ ಟ್ರೋಫಿ ಎತ್ತಿ ಹಿಡಿದಿದೆ. 'ಈ ಸಲ ಕೂಡ ಕಮ್ ನಮ್ದೇ' ಎಂದು ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಕಿಡಿಗೇಡಿಗಳು ಹುಚ್ಚಾಟ ಮರೆದಿದ್ದರು. ಆರ್ಸಿಬಿ ಅನ್ಬಾಕ್ಸ್ ಈವೆಂಟ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಅಶ್ವಿನಿ ಅವರನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಗಜಪಡೆ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಇದು ಭಾರಿ ವಿವಾದ ಎಬ್ಬಿಸಿತ್ತು. ಇದೇ ವಿಚಾರ ಪ್ರಸ್ತಾಪಿಸಿ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಹಿಂದೊಮ್ಮೆ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಭಾಗವಹಿಸಿದ್ದಾಗ, ಕೆಲವರು ಅವರ ವಿಧವೆ ಪಟ್ಟವನ್ನು ಹಿಡಿದು ಅವಮಾನಿಸಿದ್ದರು. 'ಈಕೆ ಬಂದರೆ ಅಶುಭ' ಎಂದುಬಿಟ್ಟಿದ್ದರು. ಆದರೆ ಅಶ್ವಿನಿ ಮೇಡಂ ಕಾಲಿಟ್ಟ ನಂತರ 17 ವರ್ಷ ಮರೀಚಿಕೆಯಾಗಿದ್ದ ಆರ್ಸಿಬಿ ಕನಸು ಸಾಕಾರಗೊಂಡಿದೆ. ಒಂದಲ್ಲ ಎರಡು ಸಲ ಆರ್ಸಿಬಿ ಕಪ್ ಗೆದ್ದು ಬೀಗಿದೆ. ಇದು ಕೇವಲ ಕ್ರಿಕೆಟ್ ಜಯವಲ್ಲ ಮೂಢನಂಬಿಕೆಗಳ ಮೇಲಿನ ಗೆಲುವೂ ಹೌದು. ಒಬ್ಬ ಮಹಿಳೆಯ ಮೌಲ್ಯ ಅವಳ ಮಂಗಳಸೂತ್ರದಲ್ಲಿಲ್ಲ ಅನ್ನೋದು ನಮಗೆ ಅದ್ಯಾವಾಗ ಅರ್ಥವಾಗುತ್ತೋ ಕಾಣೆ" ಎಂದು ವೀರಕಪುತ್ರ ಶ್ರೀನಿವಾಸ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಮದುವೆ, ವಿಧವೆ, ಶುಭ, ಅಶುಭ... ಇವೆಲ್ಲಾ ನಾವು ಕಟ್ಟಿಕೊಂಡ ಕಥೆಗಳು. ಆ ಎಲ್ಲದರಾಚೆ, ಆಕೆಯೂ ನಮ್ಮ ನಿಮ್ಮಂತೆಯೇ ಒಂದು ಜೀವ ಅಥವಾ ನಮಗಿಂತ ಚೂರು ಹೆಚ್ಚೇ ತೂಕದ ಜೀವ ಅನ್ನೋದು ಅರ್ಥವಾದರೆ ಅದಕ್ಕಿಂತ ಹೆಚ್ಚಿನ ಉಪಕಾರ ಆಕೆಗೆ ನಾವೇನು ಮಾಡಬೇಕಿಲ್ಲ. ಥ್ಯಾಂಕ್ಯೂ ಅಶ್ವಿನಿ ಮೇಡಂ... ಆರ್ಸಿಬಿಯ ಗೆಲುವಿಗೆ ನಿಮ್ಮ ಕಾಲ್ಗುಣವೂ ಕಾರಣ ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಮಾಡಿದ್ದಾರೆ. ಸಾಕಷ್ಟು ಜನ ಈ ಪೋಸ್ಟ್ಗೆ ರಿಪ್ಲೇ ಮಾಡಿ ಕಾಮೆಂಟ್ ಮಾಡಿದ್ದಾರೆ. ಸರಿಯಾಗಿ ಹೇಳಿದ್ದೀರಾ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಗಜಪಡೆ ಎಂದು ಟ್ವಿಟರ್ ಖಾತೆಯಿಂದ ಅಂದು ಹೀಗೆ ಕೀಳುಮಟ್ಟದಲ್ಲಿ ಪೋಸ್ಟ್ ಮಾಡಲಾಗಿತ್ತು. ದರ್ಶನ್ ಅಭಿಮಾನಿ ಈ ರೀತಿ ಮಾಡಿದ್ದಾನೆ ಎಂದು ಕೆಲವರು ಆರೋಪಿಸಿದ್ದರು. ನಿರೂಪಕಿ ಅನುಶ್ರೀ, ನಟ ಜಗ್ಗೇಶ್ ಸೇರಿದಂತೆ ತಾರೆಯರು ಈ ಬಗ್ಗೆ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸಿದ್ದರು. ಕಿಡಿಗೇಡಿಯ ಈ ಕೃತ್ಯವನ್ನು ಖಂಡಿಸಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಹಾಗೂ ಮಹಿಳಾ ಸಂಘಟನೆಗಳು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು.
ಸುದ್ದಿಗೋಷ್ಟಿಯೊಂದರಲ್ಲಿ ನೆಗೆಟಿವ್ ಕಾಮೆಂಟ್ಸ್ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮಾತನಾಡಿದ್ದರು. "ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ" ಎಂದು ಹೇಳಿದ್ದರು.


Click it and Unblock the Notifications