ವೀರೇಂದ್ರ ಹೆಗ್ಗಡೆ60 : ಧರ್ಮಸ್ಥಳದಲ್ಲಿ ಹಬ್ಬದ ಸಡಗರ
ಉಜಿರೆ,, ನ.24 : ಇಂದು ಅಂದರೆ ಶನಿವಾರ(ನ.24) ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರ 60ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ನಾನಾ ಕಾರ್ಯಕ್ರಮಗಳು ಜರುಗುತ್ತಿವೆ. ಇಲ್ಲೀಗ ಸಂಭ್ರಮ ಮೇಳೈಸಿದೆ.
ನ.25,1948ರಲ್ಲಿ ಜನಿಸಿದ ಹೆಗ್ಗಡೆ ತಮ್ಮ 20ನೇ ವಯಸ್ಸಿನಲ್ಲಿಯೇ ಧರ್ಮಸ್ಥಳ ದೇವಸ್ಥಾನದ 21ನೇ ಧರ್ಮಾಧಿಕಾರಿಯಾಗಿ ನೇಮಕಗೊಂಡರು. ಭಗವಾನ್ ಬಹುಬಲಿಯ ಸ್ಥಾಪನೆ, ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಸರಳ ಸಾಮೂಹಿಕ ವಿವಾಹ, ಅನ್ನ ದಾಸೋಹ, ಅಕ್ಷರ ದಾಸೋಹ, ಸಮಾಜ ಸೇವೆ ಮತ್ತಿತರ ಕಾರ್ಯಗಳಿಂದಾಗಿ ಧರ್ಮಸ್ಥಳ ಜನಮಾನಸದಲ್ಲಿ ಉಳಿಯುವಂತಾಗಲು, ವೀರೇಂದ್ರ ಹೆಗ್ಗಡೆ ಅವರ ಪಾತ್ರ ಹಿರಿದು.
ನಿರುದ್ಯೋಗಿಗಳಿಗೆ ಆಶಾಕಿರಣವಾಗಿ, ಸ್ವಯಂ ಉದ್ಯೋಗಕ್ಕೆ ಯುವಕರ ಸಜ್ಜುಗೊಳಿಸುವ ರುಡ್ ಸೆಟ್ ಸಂಸ್ಥೆ, ಕಾರು ಸಂಗ್ರಹಾಲಯ, ನಿಸರ್ಗ ಚಿಕಿತ್ಸಾಲಯ, ಅಪರೂಪದ ವಸ್ತುಗಳ ಸಂಗ್ರಹಾಲಯ ಮಂಜೂಷ, ಪುರಾತನ ದೇವಸ್ಥಾನಗಳ ಸಂರಕ್ಷಣೆಗಾಗಿ ಧರ್ಮಸ್ಥಳ ಟ್ರಸ್ಟ್ ಸೇರಿದಂತೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ವೀರೇಂದ್ರ ಹೆಗ್ಗಡೆ ಕಾರ್ಯರೂಪಕ್ಕೆ ತಂದಿದ್ದಾರೆ.
ಧರ್ಮಾಧಿಕಾರಿಯಾಗಿಯೇ ನಾಲ್ಕುದಶಕಗಳ ಪೂರ್ಣಗೊಳಿಸಿದ್ದರೂ, ಹೆಗ್ಗಡೆ ಅವರಲ್ಲಿ ಒಂದಿಷ್ಟೂ ಸುಸ್ತಿಲ್ಲ. ಅವರ ಕಣ್ಣಲ್ಲೀಗ ಇನ್ನಷ್ಟು ಹೊಸ ಹೊಸ ಕನಸುಗಳು.
ವೀರೇಂದ್ರ ಹೆಗ್ಗಡೆ ಬಗ್ಗೆ ಇನ್ನಷ್ಟು
(ದಟ್ಸ್ ಕನ್ನಡ ವಾರ್ತೆ )


Click it and Unblock the Notifications