ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ್ ನಾಗ್ ಗೈರು: ದಿಢೀರ್ ನಿರ್ಧಾರ ಬದಲಿಸಿದ್ರಾ ಹಿರಿಯ ನಟ?
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಬೇಕಿತ್ತು. ಬಿಜೆಪಿ ರಾಜ್ಯಾಧ್ಯಕ ನಳೀನ್ ಕುಮಾರ್ ಕಟೀಲ್, ಸಚಿವ ಸುಧಾಕರ್, ಮುನಿರತ್ನ ಸಮ್ಮುಖದಲ್ಲಿ ಬಿಜೆಪಿ ಕಛೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 4.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಅನಂತ್ ನಾಗ್ ಗೈರಾಗಿದ್ದರು. ಹಾಗಾಗಿ ಅವರ ಮುಂದಿನ ನಡೆ ಏನು? ಎನ್ನುವ ಕುತೂಹಲ ಮೂಡಿದೆ.
ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ಆಡಳಿತವನ್ನು ಹಿರಿಯ ನಟ ಅನಂತ್ ನಾಗ್ ಬೆಂಬಲಿಸುತ್ತಾ ಬರ್ತಿದ್ದಾರೆ. ಅನಂತ್ ಅವರಿಗೆ ಇದಗ ರಾಜಕೀಯ ಎಂಟ್ರಿ ಅಲ್ಲ. ಬದಲಿಗೆ ರೀ ಎಂಟ್ರಿ. ದಶಕಗಳ ಹಿಂದೆಯೇ ಜೆ. ಹೆಚ್ ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಜೆಡಿಎಸ್ ಪಕ್ಷದಿಂದ ರಾಮರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಬಿಟ್ಟು ಹೆಚ್ಚು ಸಿನಿಮಾಗಳತ್ತ ಮುಖ ಮಾಡಿದ್ದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಟ ಅನಂತ್ ನಾಗ್ ಬಿಜೆಪಿ ಸೇರ್ಪಡೆ ವಿಚಾರ ಕುತೂಹಲ ಮೂಡಿಸಿತ್ತು. ಸಾಕಷ್ಟು ಜನ ಅವರ ಈ ನಿರ್ಧಾರವನ್ನು ಸ್ವಾಗತಿಸಿದ್ದರು. ಬಿಜೆಪಿ ನಾಯಕರು ಪಕ್ಷಕ್ಕೆ ಅವರನ್ನು ಸ್ವಾಗತಿಸಲು ಸಿದ್ಧರಾಗಿದ್ದರು. ಅನಂತ್ ನಾಗ್ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದು ಅಚ್ಚರಿ ಮೂಡಿಸಿದೆ. ಆದರೆ ಕಾರಣಾಂತರಗಳಿಂದ ಅವರು ಇಂದು ಬಂದಿಲ್ಲ ಎನ್ನಲಾಗಿದೆ.
ಮುಂದಿನ ವಾರ ಕಾರ್ಯಕ್ರಮಕ್ಕೆ ಭಾಗಿ ಆಗಿ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ಅನಂತ್ ನಾಗ್ ಬಿಜೆಪಿ ಪಕ್ಷಕ್ಕೆ ಸಂದೇಶ ರವಾನಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. 1983ರಲ್ಲೇ ಅನಂತ್ ನಾಗ್ ಜನತಾ ದಳದ ಜೊತೆ ಗುರ್ತಿಸಿಕೊಂಡಿದ್ದರು. ಮುಂದೆ ಕೆಲ ಚುನಾವಣೆಗಳಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದರು. 1994ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದರು.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಕಳೆದ ವರ್ಷ ಅನಂತ್ ನಾಗ್ ನಟನೆಯ 4 ಸಿನಿಮಾಗಳು ಬಿಡುಗಡೆಯಾಗಿತ್ತು. 'ಗಾಳಿಪಟ- 2', 'ತಿಮ್ಮಯ್ಯ & ತಿಮ್ಮಯ್ಯ', 'ವಿಜಯಾನಂದ', 'ಮೇಡ್ ಇನ್ ಬೆಂಗಳೂರು' ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 'ಮೈಸೂರು ಮಸಾಲ' ಸಿನಿಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications











