"ತಪ್ಪು ಮಾಡಿದ್ದರೆ ದರ್ಶನ್ ಶಿಕ್ಷೆಗೆ ಅರ್ಹರು"; ಮುಖ್ಯಮಂತ್ರಿ ಚಂದ್ರು
ನಟ ದರ್ಶನ್ ಮತ್ತೊಮ್ಮೆ ಜೈಲು ಸೇರುವಂತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ದುಡುಕಿನ ನಿರ್ಧಾರ ಸರಿಯಲ್ಲ ಎಂದು ಬಹುತೇಕ ಹೇಳುತ್ತಿದ್ದಾರೆ. ಕೆಲವರು ಬೆಂಬಲವಾಗಿ ನಿಂತಿದ್ದಾರೆ. ಇದೀಗ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ದರ್ಶನ್ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಜೊತೆ ಮುಖ್ಯಮಂತ್ರಿ ಚಂದ್ರು ನಟಿಸಿದ್ದರು. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಜೊತೆಗೂ ಉತ್ತಮ ಒಡನಾಟ ಹೊಂದಿದ್ದರು. ಗ್ಯಾರೆಂಟಿ ಟಿವಿ ಸುದ್ದಿ ವಾಹಿನಿ ಸಂದರ್ಶನದಲ್ಲಿ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ನಟ ದರ್ಶನ್ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆಗೆ ಅರ್ಹರು ಎಂದಿದ್ದಾರೆ.

"ದರ್ಶನ್ ಅವರ ಜೀವನದಲ್ಲಿ ನಾನು ಹೆಚ್ಚು ಭಾಗಿ ಆಗಿಲ್ಲ. ಆಗಾಗ್ಗೆ ಭೇಟಿ ಆಗುವುದು, ಫೋನ್ ಮಾಡಿ ಮಾತನಾಡುವುದು ಇಲ್ಲ. ಆಗೊಮ್ಮೆ ಈಗೊಮ್ಮೆ ವೇದಿಕೆಯಲ್ಲಿ ಸಿಗುತ್ತೇವೆ. 'ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದೆ. ಅವರ ತಂದೆ ತೂಗುದೀಪ ಶ್ರೀನಿವಾಸ್ ಜೊತೆ ಹೆಚ್ಚಿನ ಒಡನಾಟ ಇತ್ತು. ನಾನು ಖಳನಾಯಕ, ಅವ್ರು ಖಳನಾಯಕನಾಗಿದ್ರು. ಆದರ ನಮ್ಮಲ್ಲಿದ್ದ ಮಾನವೀಯ ಗುಣಗಳನ್ನು ನೆನೆಪಿಸಿಕೊಂಡರೆ ಯಾಕೀಗ ಕಳೆದು ಹೋಗುತ್ತಿದೆ ಎನಿಸುತ್ತೆ"
"ಸಹವಾಸ ದೋಷ ಇರಬಹುದು. ನೀವು ಮಾಡುವ ಸ್ನೇಹ ಇರಬಹುದು. ದರ್ಶನ್ ಅವರಿಗೆ ಒಂದು ಮಾತು ಹೇಳ್ತೀನಿ. ನಾನು ಟೀಕೆ ಮಾಡಲ್ಲ. ಎಲ್ಲೋ ಒಂದು ಕಡೆ ಬಹಳ ಶ್ರಮ ಪಟ್ಟು ಬಂದವರು, ಬೆಳೆಯುತ್ತಾ ಬೆಳೆಯುತ್ತಾ ದೊಡ್ಡ ವ್ಯಕ್ತಿ ಆಗಿದ್ದೀರಾ? ನಿಮ್ಮ ತಂದೆ ಗೌರವ, ಕುಟುಂಬ, ರಾಜ್ಯದ ಗೌರವ ಎಲ್ಲಾ ಇಟ್ಟುಕೊಂಡು ಸಾರ್ವಜನಿಕವಾಗಿ ಏನಾದರೂ ಚಿಂತೆ ಮಾಡಬೇಕಿತ್ತು. ಈ ದುರಂತ ನಡೆದಿದೆ. ತಪ್ಪಾಗಿ ಅಲ್ಲ ಹೇಳಲ್ಲ. ತಪ್ಪಾಗಿದೆ"

"ಏನು ತಪ್ಪು ಮಾಡಿದ್ದೀರಾ ಎನ್ನುವುದಕ್ಕೆ ಕಾನೂನಿದೆ, ಕೋರ್ಟ್ ಇದೆ. ನಾವು ನೋಡಿಲ್ಲ. ನಾವು ಮಾಧ್ಯಮಗಳಲ್ಲೇ ನೋಡಿರೋದು. ನಿಜವೇ ಆಗಿದ್ದರೆ ನೀವು ಶಿಕ್ಷೆಗೆ ಅರ್ಹರು. ಬಲಿಷ್ಠರು, ದೊಡ್ಡವರು ಎನ್ನುವ ಕಾರಣಕ್ಕೆ ಯಾವುದೇ ಒತ್ತಡಕ್ಕೆ ಮಣಿದು ವ್ಯವಸ್ಥೆಯೂ ತಪ್ಪು ಮಾಡಬಾರದು, ಕಾನೂನು ತಪ್ಪು ಮಾಡಬಾರದು, ಪೊಲೀಸ್ ಇಲಾಖೆಯೂ ತಪ್ಪು ಮಾಡಬಾರದು. ಅವರಿಗೆ ಶಿಕ್ಷೆ ಕೊಡಬೇಕು ಎನ್ನುವ ಮನಸ್ಥಿತಿ ನನ್ನದಲ್ಲ, ಆದರೆ ತಪ್ಪು ಆಗೋಗಿದೆ. ಮಾದರಿಯಾಗಿ ಕೆಲ ದಿನ ಶಿಕ್ಷೆ ಅನುಭವಿಸಿದರೆ ಇನ್ನು ದೊಡ್ಡ ವ್ಯಕ್ತಿ ಆಗಬಹುದೇನೋ? ಹಾಗಾಗಿ ತಪ್ಪಿಸಿಕೊಳ್ಳುವುದು, ಪಲಾಯನ ವಾದ ಬೇಡ. ಎಲ್ಲರಿಗೂ ಮಾದರಿಯಾಗಲಿ" ಎಂದು ಕಿವಿಮಾತು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆಯೀ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. "ದರ್ಶನ್ ಮಾತ್ರವಲ್ಲ, ಮಾಜಿ ಪ್ರಧಾನಿ ಕುಟುಂಬದಲ್ಲಿ ಹೀಗಾಯ್ತು ಅಂದಾಗ ಅವರಿಗಿಂತ ನನಗೆ ಹೆಚ್ಚು ನೋವಾಗಿದೆ. ಅಂತಹ ದೊಡ್ಡ ಸ್ಥಾನಕ್ಕೆ ಏರಿದವರು ಅವರು. ಎಂತಹ ಮುತ್ಸದ್ದಿ ರಾಜಕಾರಣಿ. ರಾಜಕೀಯವಾಗಿ ಅವರನ್ನು ಟೀಕಿಸಬಹುದು. ವೈಯಕ್ತಿಯವಾಗಿ ಅವರ ಗುಣಗಳ ಬಗ್ಗೆ ನಾವು ಟೀಕೆ ಮಾಡೋಕೆ ಸಾಧ್ಯವಿಲ್ಲ. ಅವರ ಕುಟುಂಬದಲ್ಲಿ ಇಂತಹ ಘಟನೆ ಆಗೋಗಿದೆ. ರೇವಣ್ಣ, ಭವಾನಿಯವರು ಹೀಗೆ ದಾರಿ ತಪ್ಪುತ್ತಿರುವುದನ್ನು ತಪ್ಪಿಸಬಹುದಿತ್ತು" ಎಂದು ಹೇಳಿದ್ದಾರೆ.
"ಈಗಲೂ ಸಹ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳದೇ ಸತ್ಯವನ್ನು ಒಪ್ಪಿಕೊಂಡು ಶಿಕ್ಷೆಯನ್ನು ಅನುಭವಿಸಿ ಎಂದು ಎಲ್ಲರಿಗೂ ಹೇಳುತ್ತೇನೆ. ಅದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿ ನಡೆದ ಘಟನೆ ಇರಬಹುದು, ನಮ್ ದರ್ಶನ್ ಘಟನೆಯಲ್ಲಿ ಇರಬಹುದು. ಸಾರ್ವಜನಿಕ ಜೀವನದಲ್ಲಿ ಸಾಮಾನ್ಯರಂತೆ ವರ್ತಿಸಿ, ಸಾಮಾನ್ಯ ಜನರಿಗೆ ಮಾದರಿ ಆಗಬೇಕು ಎಂದು ಕೇಳಿಕೊಳ್ಳುತ್ತೇನೆ" ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದ್ದಾರೆ.


Click it and Unblock the Notifications











