ಅಜ್ಞಾತವಾಸ-ವನವಾಸ, ಎಲ್ಲಿದ್ದಾರೆ ರಥಸಪ್ತಮಿ ಅರವಿಂದ್ ? ಆ ಕಾಲದ ಖ್ಯಾತ ಖಳನಾಯಕ ಈಗ ಅವಕಾಶ ವಂಚಿತ...!
ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಅದೃಷ್ಟ-ದುರಾದೃಷ್ಟದ ಆಚೆ ಇಲ್ಲಿ ಅನೇಕರು ರಕ್ತ ಬಸಿದು ಬದುಕನ್ನ ಕಟ್ಟಿಕೊಂಡಿದ್ದಾರೆ. ಕಾಲಾನುಕಾಲದಿಂದ ಮನರಂಜನೆಯ ರಸದೌತಣವನ್ನೂ ಬಡಿಸಿದ್ದಾರೆ. ಆ ಪೈಕಿ ಅರವಿಂದ್ ಕೂಡ ಒಬ್ಬರು.
ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಕೋರ್ಸ್ ಮುಗಿಸಿಕೊಂಡು, ಹಿರಿಯ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಅವರ ಆಶೀರ್ವಾದಿಂದ ಗೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಅರವಿಂದ್. ಆದರೆ ಇವರ ಬದುಕಿನ ದಿಕ್ಕನ್ನ ಬದಲಿಸಿದ್ದು ರಥಸಪ್ತಮಿ. ಅಲ್ಲಿಂದ ಮುಂದೆ ಇವರು ರಥಸಪ್ತಮಿ ಅರವಿಂದ್ ಎಂದೇ ಜನಪ್ರಿಯರಾದರು. ಒಂದಾದ ಮೇಲೊಂದು ಸಿನಿಮಾಗಳನ್ನ ಮಾಡಿದರು. ಬಹುತೇಕ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿ ಅಬ್ಬರಿಸಿದರು. ತಮ್ಮ ಅಭಿನಯದಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವುದಲ್ಲದೆ ಹೃದಯಕ್ಕೂ ಹತ್ತಿರವಾದರು.

ಹತ್ ಹತ್ರ ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸೇವೆಯನ್ನ ಸಲ್ಲಿಸಿರುವ ಅರವಿಂದ್ ಸದ್ಯಕ್ಕೆ ನಿರುದ್ಯೋಗಿ ಅಂದರೆ ನೀವು ನಂಬ್ತೀರಾ. ನಂಬ್ಲೇಬೇಕು. ಯಾಕೆಂದರೆ ಖುದ್ದು ರಥಸಪ್ತಮಿ ಅರವಿಂದ್ ತಮ್ಮ ಮನದ ನೋವನ್ನ ಹಂಚಿಕೊಂಡಿದ್ದಾರೆ. ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಹೌದು, ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ರಥಸಪ್ತಮಿ ಅರವಿಂದ್, ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದಾರೆ. ಹೊಸಬರ ಹಾವಳಿ ಇನ್ನೆಲ್ಲಿಯ ಅವಕಾಶ ಎಂದಿದ್ದಾರೆ. ಇದೇ ಸಮಯದಲ್ಲಿ ಪುಟಿದೇಳುವ ವಿಶ್ವಾಸವನ್ನುಅರವಿಂದ್ ವ್ಯಕ್ತಪಡಿಸಿದ್ದಾರೆ. ರಥಸಪ್ತಮಿ ಅರವಿಂದ್ ಅವರ ಈ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕನ್ನಡ ಚಿತ್ರರಂಗ ಈಗ ನಡೆದುಕೊಳ್ಳಬೇಕಿದೆ. ಅವಕಾಶ ವಂಚಿತರಾದ ಅರವಿಂದ್ ಅವರಿಗೆ ಅವಕಾಶ ಕೊಡುವುದರ ಜೊತೆ ಸೂಕ್ತವಾದ ಸ್ಥಾನ ಮಾನವನ್ನೂ ನೀಡಬೇಕಿದೆ. ಯಾಕೆಂದರೆ ರಥಸಪ್ತಮಿ ಅರವಿಂದ್ ನಿಜಕ್ಕೂ ಅದ್ಭುತ ಕಲಾವಿದ. ಪಾತ್ರ ಯಾವುದೇ ಇರಲಿ, ಆ ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯ ಹೊಂದಿರುವ ಅಪ್ಪಟ ಕನ್ನಡದ ಅಸಾಧಾರಣ ಪ್ರತಿಭೆ.
2022ರಲ್ಲಿ ನೆನಪಾಗುತ್ತಿಲ್ಲ ಚಿತ್ರದಲ್ಲಿ ರಥಸಪ್ತಮಿ ಅರವಿಂದ್ ಕಾಣಿಸಿಕೊಂಡಿದ್ದರು. ಆ ನಂತರ ಹೊಸಬರೇ ಸೇರಿ ಮಾಡಿದ್ದ ಅನಾವರಣ ಚಿತ್ರದಲ್ಲಿ ಪಾತ್ರವೊಂದನ್ನ ನಿರ್ವಹಿಸಿದ್ದರು. ಆ ನಂತರ ಅರವಿಂದ್ ಅಕ್ಷರಶಃ ನಾಪತ್ತೆಯಾಗಿದ್ದರು. ಅವರೇ ಹೇಳಿದಂತೆ ಇದು ಅವರ ಪಾಲಿನ ಅಜ್ಞಾತವಾಸ.

ಒಟ್ಟಿನಲ್ಲಿ ಈ ಚಿತ್ರರಂಗದಲ್ಲಿ ಎಂತೆಂಥವರೋ ಹೇಗೇಗೋ ಬದುಕುತ್ತಿರುತ್ತಾರೆ. ಸಿನಿಮಾವನ್ನೇ ಉಸಿರಾಗಿಸಿಕೊಂಡವರಿಗೇ ಕೆಲವೊಮ್ಮೆ ಸಂಕಟಗಳು ಒದ್ದುಕೊಂಡು ಬರುತ್ತವೆ. ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ. ರಥಸಪ್ತಮಿ ಅರವಿಂದ್ ಇದಕ್ಕೆ ಮತ್ತೊಂದು ಉದಾಹರಣೆ.


Click it and Unblock the Notifications











