'ದರ್ಶನ್ ನಡೆ ಕಂಡು ಕಣ್ಣಿರು ಬಂತು, ಅವರು ನಡೆದು ಬಂದ ದಾರಿ ಮರೆತಿಲ್ಲ': ವೈಜನಾಥ ಬಿರಾದಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತರುಣ್ ಕಿಶೋರ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಡಿಸೆಂಬರ್ 29 ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಹಿರಿಯ ಕಲಾವಿದರ ದೊಡ್ಡ ಬಳಗವೇ ಇದ್ದು, ಅದರಲ್ಲಿ ಖ್ಯಾತ ನಟ ವೈಜನಾಥ್ ಬಿರಾದಾರ್ ಕೂಡ ಕಾಣಿಸಿಕೊಂಡಿದ್ದಾರೆ.
ಹಿರಿಯ ನಟ ವೈಜನಾಥ್ ಬಿರಾದಾರ್ ಅವರು 'ಫಸ್ಟ್ ಡೇ ಫಸ್ಟ್ ಶೋ ಕನ್ನಡ' ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದು, ಇದರಲ್ಲಿ ರಿಲೀಸ್ಗೆ ರೆಡಿ ಆಗಿರುವ 'ಕಾಟೇರ' ಸಿನಿಮಾ ಬಗ್ಗೆ ಮತ್ತು ನಟ ದರ್ಶನ್ ತೂಗುದೀಪ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಕಾಟೇರ ಬಗ್ಗೆ 'ಚೊಂಗ್ಲಾ' ಹೇಳಿದ್ದೇನು..?
70 ನೇ ವಯಸ್ಸಿನ ಅನುಭವಿ ನಟ ವೈಜನಾಥ್ ಬಿರಾದಾರ್, ಕಾಟೇರ ಸಿನಿಮಾದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 600 ಕ್ಕೂ ಹೆಚ್ಚು ಚಲನಚಿತ್ರಗಲ್ಲಿ ನಟಿಸಿರುವ ಅವರು, ಹಳ್ಳಿ ಹಿನ್ನಲೆಯ ಕಾಟೇರ ಬಗ್ಗೆ ಹೆಚ್ಚು ವಿಶ್ವಾಸದಲ್ಲಿದ್ದಾರೆ. ಚೊತ್ರದಲ್ಲಿ 'ಚೊಂಗ್ಲಾ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಇದು ವಿಶೇಷ ಪಾತ್ರ ಎಂದು ಹೇಳಿಕೊಂಡಿದ್ದಾರೆ.
"ಇದು ವಿಶೇಷ ಸಿನಿಮಾ. ದೊಡ್ಡ ಕಂಪನಿ... ದರ್ಶನ್ ಸರ್ ಜೊತೆ ನಟಿಸುತ್ತಿದ್ದಿನಿ. ಮೊದಲಿನಿಂದ ಕೊನೆಯವರೆಗೂ ನನ್ನ ಪಾತ್ರವಿರುತ್ತದೆ. ಹಾಗಾಗಿ ಹೊಸ ಲವಲವಿಕೆ ಇದೆ. 'ಚೊಂಗ್ಲಾ' ಪಾತ್ರದ ಬಗ್ಗೆ ಮಾತನಾಡುವುದಿಲ್ಲ. ಸಿನಿಮಾ ನೋಡಿದ ಮೇಲೆ ಇದರ ಬಗ್ಗೆ ತಿಳಿಯಲಿದೆ. ನಾನು ಇಲ್ಲಿಯವರೆಗೆ ಭಿಕ್ಷುಕ, ಕುಡುಕ, ಹೀರೊ ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ. ಆದರೆ, ಇದರ ಬಗ್ಗೆ ಏನು ಮಾತಾಡುವಂತಿಲ್ಲ" ಎಂದಿದ್ದಾರೆ.
ದರ್ಶನ್ ಗುಣ ಕಂಡು ಕಣ್ಣಿರು ಬಂತು: ವೈಜನಾಥ್ ಬಿರಾದಾರ್
"ದರ್ಶನ್ ಅವರಿಗೆ ಕಲೆ, ಕಲಾವಿದರು ಮಾತ್ರವಲ್ಲದೆ ಸೆಟ್ನಲ್ಲಿ ಇರುವ ಎಲ್ಲರನ್ನು ಗೌರವಿಸುವ ಗುಣವಿದೆ. ಅವರ ಜೊತೆಗೆ ನಾನು 3-4 ಸಿನಿಮಾ ಮಾಡಿದ್ದೇನೆ. ಅವರಿಗೆ ಹೊಗಳಿಕೆ ಮಾತುಗಳು ಇಷ್ಟವಿಲ್ಲ. ಆದರೂ, ನಾನು ಈ ಘಟನೆ ಹೇಳುತ್ತೇನೆ. ನಾವು ಕೆಆರ್ಎಸ್ ಹತ್ರ ಶೂಟಿಂಗ್ ಮಾಡುತ್ತಿದ್ದೇವು. ಡೈರೆಕ್ಷರ್ ಹೇಳುವ ಹಾಗೆ ನಾನು ಕೇಳುತ್ತೇನೆ. ಅವರು ಬ್ರೇಕ್ ಹೇಳಿದರೇ ಬ್ರೇಕ್ ಅಂತ ಅಲ್ಲೇ ಇರುತ್ತೇನೆ. ಅವತ್ತು ಶೂಟಿಂಗ್ ನಡೆಯುವಾಗ ತುಂಬಾ ಬಿಸಿಲಿತ್ತು".

"ಈ ವೇಳೆ ದರ್ಶನ್ ಅವರು ಎಲ್ಲೋ ದೂರದಲ್ಲಿ ಇದ್ದರು, ಅಲ್ಲಿಂದ ಅವರು ನನ್ನನ್ನು ಗಮನಿಸಿ ಅಲ್ಲಿದ್ದ ಹುಡುಗರ ಕೈಯಲ್ಲಿ ಛತ್ರಿ ಕೊಟ್ಟು ಕಳಿಸಿದರು. ನೀವ್ಯಾಕೆ ಬಂದ್ರಿ ಎಂದರೆ ಬಾಸ್ ಹೇಳಿದ್ದಾರೆ ಎಂದರು. ನನಗೆ ಕಣ್ಣಲಿ ನೀರು ಬಂತು. ಯಾರಿಗೆ ಆ ಮನಸ್ಸು ಬರುತ್ತದೆ ಹೇಳಿ. ಅವರಿಗೆ ಹೊಗಳಿಕೆ ಇಷ್ಟವಿಲ್ಲ. ಆದರೆ, ನನಗಾದ ಅನುಭವ ಹೇಳಲೇಬೇಕು ಅಲ್ವಾ?" ಎಂದು ಪ್ರಶ್ನಿಸಿದ್ದಾರೆ.
'ಸಣ್ಣ ಹುಡುಗನಿಂದ ನೋಡಿದ್ದಿನಿ ದರ್ಶನ್ ನಡೆದು ಬಂದ ದಾರಿ ಮರೆತಿಲ್ಲ'
"ದರ್ಶನ್ ನಡೆದು ಬಂದ ದಾರಿ ಮರೆತಿಲ್ಲ. 86-87 ನೇ ಇಸವಿಯಲ್ಲಿ ಒಂದು ಬಾರಿ ಮೈಸೂರಿನಲ್ಲಿ ಒಂದು ಕಾರ್ಯಕ್ರಮ ಮಾಡಿದ್ದೇವು. ಅದು ದರ್ಶನ್ ಸರ್ ಮನೆ ಹತ್ರ ಇತ್ತು. ಆಗ ಅವರ ತಾಯಿ ಬಂದಿದ್ದರು. ಅವರೇ ಬಂದು ನಾನು ತೂಗುದೀಪ ಶ್ರೀನಿವಾಸ್ ಪತ್ನಿ ಎಂದು ಪರಿಚಯಿಸಿಕೊಂಡು ಮನೆಗೆ ಕರೆದರು. ಆಗ ನನಗೆ ದರ್ಶನ್ ಸರ್ ಅವರ ಪರಿಚಯ ಮಾಡಿಸಿದರು. ಆಗ ದರ್ಶನ್ ತುಂಬಾ ಸಣ್ಣವರು" ಎಂದು ಹಳೆ ಘಟನೆ ನೆನಪಿಸಿಕೊಂಡಿದ್ದಾರೆ.
ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರಿಗೆ ರಂಗಭೂಮಿ ಕಲಾವಿದರು ಎಂದರೆ ತುಂಬಾ ಗೌರವ. ಬಿರಾದರಿ ಎಂದು ಕರೆಯುತ್ತಿದ್ದರು. ನಮಗೆ ಯಾವಾಗಲು ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಜೊತೆಗೆ ನಟರಾದ ತೂಗುದೀಪ ಶ್ರೀನಿವಾಸ್ ಅವರು, ಸುಧೀರ್ ಅಣ್ಣ, ಸುಂದರ್ ಕೃಷ್ಣ ಅರಸು, ದಿನೇಶ್ ಅವರು, ಧೀರೇಂದ್ರ ಗೋಪಾಲ್ ಅವರಿಗೆ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











