ಡಾ.ರಾಜ್ ಕುಮಾರ್ ಅವರ ಮಗ ರೀ ಶಿವಣ್ಣ - ಜಯಮಾಲಾ..!
ಡಾ.ರಾಜ್ ಕುಮಾರ್.. ಕನ್ನಡ ಚಲನಚಿತ್ರ ರಂಗದ ಶಿಖರ ಪ್ರಾಯ. ಅಭಿಮಾನಿಗಳಲ್ಲಿ ದೇವರನ್ನ ಕಂಡ ದೇವತಾ ಮನುಷ್ಯ. ಗೋಕಾಕ್ ಚಳುವಳಿಯನ್ನು ಒಳಗೊಂಡಂತೆ ಕನ್ನಡನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಬಂದು ಪ್ರಜಾಸತ್ತಾತ್ಮಕ ಹೋರಾಟಕ್ಕೆ ಬೆಂಬಲವಾಗುತ್ತಲೇ ಕೇಂದ್ರಶಕ್ತಿಯಾದವರು ಡಾ.ರಾಜ್ ಕುಮಾರ್. ಇನ್ನು ಡಾ. ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ.ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು.
ಅವರು ಕೆರಳಿದ್ದು ಕಡಿಮೆ, ಅರಳಿದ್ದು ಅಧಿಕ. ಇಂಥಾ ಡಾ.ರಾಜ್ ಕುಮಾರ್ ಅವರ ಮಗನಾದ ಡಾ. ಶಿವರಾಜ್ ಕುಮಾರ್ ಮೊನ್ನೆಯ ದಿವಸ ಕಮಲ್ ಹಾಸನ್ ಕನ್ನಡದ ಕುರಿತು ಮಾತನಾಡುವಾಗ ಸುಮ್ಮನೆ ಇದ್ದಿದ್ದು ಯಾಕೆ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿದಾಗ ಅಲ್ಲಿಯೇ ಶಿವಣ್ಣ ಖಂಡಿಸಬೇಕಿತ್ತು, ಪ್ರತ್ಯುತ್ತರವನ್ನು ನೀಡಬೇಕಿತ್ತು ಎನ್ನುವ ವಾದವನ್ನು ಸದ್ಯ ಅನೇಕರು ಮಾಡುತ್ತಿದ್ದಾರೆ. ಅವತ್ತು ಶಿವಣ್ಣ ಸುಮ್ಮನೆ ಕುಂತಿದ್ದು ಯಾಕೆ ? ಈ ಪ್ರಶ್ನೆಗೆ ಖುದ್ದು ಶಿವಣ್ಣ ಅವರಿಗೆ ಗೊತ್ತಾದರೂ ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಟಿ ಜಯಮಾಲಾ ಮಾತನಾಡಿದ್ದಾರೆ. ಶಿವಣ್ಣ ಅವರನ್ನು ದೂಷಿಸುವುದು ತಪ್ಪು ಎಂದು ಹೇಳಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿರುವ ಜಯಮಾಲಾ, ಶಿವಣ್ಣ ಅವರು ರಾಜ್ ಕುಮಾರ್ ಅವರ ಮಗ, ಅವರ ಜವಾಬ್ಧಾರಿಯನ್ನು ಅವರು ಮರೆಯುವರಲ್ಲ ಎಂದು ಹೇಳಿದ್ದಾರೆ.
ಕಮಲ್ ಹಾಸನ್ ಮಾತನಾಡುವಾಗ ಅಲ್ಲಿ ಶಿವಣ್ಣ ಭಾವನಾತ್ಮಕವಾಗಿ ಮಾತುಗಳನ್ನು ಕೇಳುತ್ತಾ ಕುಂತಿದ್ದರು, ಆ ಸಂದರ್ಭದಲ್ಲಿ ಕಮಲ್ ಹಾಸನ್ ಏನು ಮಾತನಾಡುತ್ತಿದ್ದಾರೆ ಎನ್ನುವುದು ಶಿವಣ್ಣ ಅವರಿಗೆ ಗೊತ್ತಾಗಲಿಲ್ಲ ಅಷ್ಟೇ ಎಂದು ಹೇಳಿದ್ದಾರೆ.
ಖಂಡಿಸುವುದಕ್ಕಿಂತ ನಾವು ನಿಮ್ಮ ಹೊಟ್ಟೆಯಲ್ಲಿ ಹುಟ್ಟಿಲ್ಲ ನಾವೆಲ್ಲ ಅಕ್ಕ-ತಂಗಿಯರು ಎಂದು ಹೇಳಿದ್ದರೆ ವಿಚಾರ ಮುಗಿದೇ ಹೋಗುತ್ತಿತ್ತು ಆದರೆ ಶಿವಣ್ಣ ಅವರಿಗೆ ಅವರ ಮಾತುಗಳು ಅರ್ಥವಾಗಲಿಲ್ಲ ಅಷ್ಟೇ ಎಂದು ಕೂಡ ಜಯಮಾಲಾ ಹೇಳಿದ್ದಾರೆ.
ವಿವಾದದ ಬಗ್ಗೆ ಶಿವಣ್ಣ ಹೇಳಿದ್ದೇನು ?
ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶಿವಣ್ಣ,"ಕಮಲ್ ಹಾಸನ್ ಕೂಡ ಕನ್ನಡಕ್ಕೆ ಗೌರವ ಕೊಡುತ್ತಾರೆ. ನಿನ್ನೆ ಬಂದಾಗಲೂ ಅಷ್ಟೇ ಚೆನ್ನಾಗಿ ಮಾತನಾಡಿದ್ದಾರೆ. ಫ್ಯಾಮಿಲಿ ಬಗ್ಗೆಯೂ ಗೌರವ ಕೊಡುತ್ತಾರೆ. ನಾವು ಅವರನ್ನು ನೋಡಿ ಬೆಳೆದವರು, ನಾನು ಅವರ ಅಭಿಮಾನಿ. ತಂದೆ ಇದ್ದು ಅವ್ರು ಹೇಗೆ ಅಭಿಮಾನಿ ಎನ್ನಬಹುದು. ತಂದೆ ಫ್ಯಾಮಿಲಿ ಆಗ್ತಾರೆ. ತಂದೆ ಸ್ಥಾನ ಬೇರೆ. ಕಮಲ್ ಅವ್ರಿಗೆ ನಾನು ಕೊಡುವ ಸ್ಥಾನ ಬೇರೆ. ನಾನು ಅವರಿಂದ ಇನ್ಸ್ಪೈರ್ ಆಗಿದ್ದೀನಿ. ಕಂಡಿತ ಅದಕ್ಕೆ ಏನು ಪ್ರತಿಕ್ರಿಯೆ ಕೊಡಬೇಕೋ ಅವ್ರು ಕೊಡ್ತಾರೆ" ಎಂದು ಹೇಳಿದ್ದರು.
ಮುಂದುವರೆದು "ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಾಗ ಗೌರವದಿಂದ ಹೋಗಿದ್ದೇವೆ. ಅದು ಏನಾಯ್ತೋ ನಮಗೂ ಗೊತ್ತಿಲ್ಲ. ನಿನ್ನೆ ಬಂದಾಗ ಇಲ್ಲೇ ಇದ್ದರು. ಎಲ್ಲರೂ ಕೇಳಬಹುದಿತ್ತು. ಕನ್ನಡ ಪ್ರೀತಿ ಎನ್ನುವುದು ಯಾರೋ ಮಾತನಾಡಿದಾಗ ಮಾತ್ರ ಬರಬಾರದು. ಯಾವಾಗಲೂ ಇರಬೇಕು. ಇಲ್ಲಿಗೆ ಬಂದಾಗ ಕನ್ನಡ ಚಿಗುರಿಸುವುದಲ್ಲ, ಯಾವಾಗಲೂ ಚಿಗುರಿಸಬೇಕು. ಕನ್ನಡಕ್ಕಾಗಿ ಹೋರಾಡುತ್ತೇವೆ, ಬೇಕಿದ್ದರೆ ಸಾಯುತ್ತೇವೆ" ಎಂದು ಹೇಳಿದ್ದರು ಶಿವಣ್ಣ.
ಇನ್ನು ''ಬರೀ ಮಾತನಾಡಿ ಪೋಸ್ ಕೊಡುವುದಲ್ಲ. ಕನ್ನಡಕ್ಕೆ ಏನು ಮಾಡ್ತೀವಿ ಅಂತ ಈಗ್ಲೇ ನೋಡಿ. ಉತ್ತರ ಸಿಗುತ್ತೆ. ಬರೀ ಸ್ಟಾರ್ಗಳ ಸಿನಿಮಾಗಳಿಗೆ ಪ್ರೋತ್ಸಾಹ ಕೊಡುವುದಲ್ಲ. ಹೊಸಬರಿಗೂ ಪ್ರೋತ್ಸಾಹ ಕೊಡಬೇಕು, ಕನ್ನಡ ಅಂದ್ರೆ ಇಷ್ಟೇ ಅಲ್ಲ, ಜವಾಬ್ದಾರಿ ಇದೆ. ದಯವಿಟ್ಟು ಬೇರೆ ಅರ್ಥ ಕೊಡಬೇಡಿ. ನಿಮ್ಮ ಮನಸ್ಸನ್ನು ಮುಟ್ಟಿ ಕೇಳಿಕೊಳ್ಳಿ. ಸರಿನಾ ತಪ್ಪಾ ಅಂತ ಉತ್ತರ ಸಿಗುತ್ತದೆ. ಕಮಲ್ ಅವರಿಗೆ ಹೇಳುವುದು ಬೇಕಿಲ್ಲ. ಅವರಿಗೆ ಗೊತ್ತು. ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಏನು ಮಾಡಬೇಕೋ ಮಾಡುತ್ತಾರೆ" ಎಂದು ಕೂಡ ವಿವಾದ ಭುಗಿಲೆದ್ದ ಬೆನ್ನಲ್ಲೇ ಶಿವಣ್ಣ ಮಾತನಾಡಿದ್ದರು.


Click it and Unblock the Notifications











