ಲಾಕ್ಡೌನ್ ನಡುವೆ ಹಂಪಿಯಿಂದ ಬೆಂಗಳೂರು ತಲುಪಿದ ನಟಿ ಜಯಂತಿ
ಲಾಕ್ಡೌನ್ ಕಾರಣದಿಂದ ಹಂಪಿಯಲ್ಲಿಯೇ ಕಳೆದ ಒಂದು ತಿಂಗಳಿನಿಂದ ಸಿಲುಕಿಕೊಂಡಿದ್ದ ಚಿತ್ರರಂಗದ ಹಿರಿಯ ನಟಿ ಜಯಂತಿ ಒಂದು ತಿಂಗಳ ಬಳಿಕ ಕೊನೆಗೂ ಬೆಂಗಳೂರಿನ ಮನೆಗೆ ಮರಳಿದ್ದಾರೆ.
ಮಾರ್ಚ್ 22ರಂದು ಮಗನೊಂದಿಗೆ ಕಾರ್ಯನಿಮಿತ್ತ ಹಂಪಿಗೆ ಬಂದಿದ್ದ ನಟಿ ಜಯಂತಿ, ಹಂಪಿಯ ಅಂದ ಸವಿಯಲು ಆಗಮಿಸಿದ್ದ ಸಂದರ್ಭದಲ್ಲಿಯೇ ಲಾಕ್ಡೌನ್ ಘೋಷಣೆಯಾಯಿತು. ಇದರಿಂದ ಅವರು ಬೆಂಗಳೂರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಲಾಕ್ ಡೌನ್ ಕಾರಣದಿಂದಾಗಿ ಅಲ್ಲಿನ ಹೋಟೆಲ್ ನಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ಜಯಂತಿ ಮತ್ತು ಅವರ ಮಗ ಕೃಷ್ಣಕುಮಾರ್ ಇಬ್ಬರಿಗೂ ಜಿಲ್ಲಾಡಳಿತ ಅನುಮತಿ ನೀಡಿದ್ದು, ಅದರಂತೆ ಇಬ್ಬರೂ ಸೋಮವಾರ ಸಂಜೆ ಬೆಂಗಳೂರಿಗೆ ಮರಳಿದ್ದಾರೆ. ಮುಂದೆ ಓದಿ...

ಹಂಪಿ ಬೈ ನೈಟ್ ವೀಕ್ಷಣೆಗೆ ಬಂದಿದ್ದರು
"ಹಂಪಿ ಬೈ ನೈಟ್" ಯೋಜನೆ ಕಾಮಗಾರಿ ವೀಕ್ಷಣೆಗಾಗಿ ಮಾರ್ಚ್ 22ರಂದು ಹಂಪಿಗೆ ನಟಿ ಜಯಂತಿ ಹಾಗೂ ಅವರ ಮಗ ಕೃಷ್ಣಕುಮಾರ್ ಬಂದಿದ್ದರು. ಆದರೆ ಅವರು ಹಂಪಿಗೆ ಬರುತ್ತಿದ್ದಂತೆ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ಅವರಿಗೆ ವಾಪಸ್ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ ಒಂದು ತಿಂಗಳ ಕಾಲ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು.

ಹೋಟೆಲ್ನಲ್ಲಿ ವಾಸ್ತವ್ಯ
ಕೊರೊನಾ ವೈರಸ್ ಹರಡುವಿಕೆಯ ಭೀತಿ ಹಿನ್ನೆಲೆಯಲ್ಲಿ ಭಾರತವನ್ನು ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ನಟಿ ಜಯಂತಿ ಹಾಗೂ ಅವರ ಮಗ ಕೃಷ್ಣಕುಮಾರ್ ಬಳ್ಳಾರಿ ಜಿಲ್ಲೆಯ ಹಂಪಿಯ ಖಾಸಗಿ ಹೋಟೆಲ್ ನಲ್ಲೇ ಉಳಿದುಕೊಂಡರು. ಅಲ್ಲಿಯೇ ಒಂದು ತಿಂಗಳು ವಾಸ್ತವ್ಯ ಹೂಡಿದರು. ಈ ಮೂಲಕ ಲಾಕ್ ಡೌನ್ ಗೆ ಸಹಕರಿಸಿದ್ದರು.

ಲಾಕ್ಡೌನ್ ವಿಸ್ತರಣೆಯಿಂದ ಸಂಕಷ್ಟ
ಏಪ್ರಿಲ್ 14ಕ್ಕೆ ಲಾಕ್ಡೌನ್ ಅವಧಿ ಮುಗಿಯಲಿದೆ ಎಂದು ಜಯಂತಿ ಭಾವಿಸಿದ್ದರು. ಅದರ ನಂತರ ಬೆಂಗಳೂರಿಗೆ ವಾಪಸ್ ಹೋಗಬಹುದು ಎನ್ನುವುದು ಅವರ ಉದ್ದೇಶವಾಗಿತ್ತು. ಆದರೆ ಮತ್ತೆ ಲಾಕ್ ಡೌನ್ ಅನ್ನು ಮೇ 3ರವರೆಗೂ ವಿಸ್ತರಿಸಲಾಯಿತು. ಹೀಗಾಗಿ ಇನ್ನೂ ಹೆಚ್ಚು ಕಾಲ ಹೋಟೆಲ್ನಲ್ಲಿ ಉಳಿದುಕೊಳ್ಳುವುದು ಕಷ್ಟ ಎಂದು ಅವರು ಸೋಮವಾರ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಸೋಮವಾರ ಸಂಜೆ ಹಂಪಿಯಿಂದ ಹೊರಟಿದ್ದಾರೆ.

ಕಾರ್ ಜತೆ ಆಂಬುಲೆನ್ಸ್
75 ವರ್ಷದ ನಟಿ ಜಯಂತಿ ಈ ಹಿಂದೆ ತೀವ್ರ ಅನಾರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಈ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ ನಿಂದ ಹೊರಟ ಜಯಂತಿ ಅವರ ಕಾರಿನ ಹಿಂದೆ ಆಂಬುಲೆನ್ಸ್ ಅನ್ನೂ ಕಳಿಸಲಾಗಿದೆ. ಜಯಂತಿ ಅವರ ಆರೋಗ್ಯ ದೃಷ್ಟಿಯಿಂದ ಆಂಬುಲೆನ್ಸ್ ಜತೆಗೆ ಹೋಗಿರುವುದಾಗಿ ಮಗ ಕೃಷ್ಣಕುಮಾರ್ ತಿಳಿಸಿದ್ದಾರೆ.


Click it and Unblock the Notifications











