ದರ್ಶನ್ ಮತ್ತೆ ಜೈಲಿಗೆ ; ಎಷ್ಟೇ ದೊಡ್ಡವರಿದ್ದರೂ ಚೌಕಟ್ಟಿನಲ್ಲಿ ಇರಬೇಕು ಎಂದ ಉಮಾಶ್ರೀ !
ದರ್ಶನ್ ಈಗ ಮತ್ತೆ ಪ್ಯಾನ್ ಇಂಡಿಯಾ ಸುದ್ದಿಯಲ್ಲಿದ್ದಾರೆ. ಈ ಸುದ್ದಿಗೆ ಅವರ ಚಿತ್ರ ಕಾರಣವಾಗಿದ್ದರೆ ಅದರ ಖುಷಿಯೇ ಬೇರೆ ಇರುತ್ತಿತ್ತು. ಆದರೆ ದೌರ್ಭಾಗ್ಯ ದರ್ಶನ್ ಸುದ್ದಿಯಲ್ಲಿರುವುದು ಕೊಲೆಯ ಪ್ರಕರಣದಿಂದ. ಹೀಗಾಗಿ ಕನ್ನಡ ಚಿತ್ರರಂಗ ಮತ್ತೆ ಈಗ ಅಡ್ಡಕತ್ತರಿಗೆ ಸಿಲುಕಿದೆ. ಅತ್ತ ದರ್ಶನ್ ಪರ ಮಾತನಾಡಲು ಆಗದೇ ಇತ್ತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಚಕಾರವೂ ಎತ್ತಲಾಗದೇ, ಮುಂದೇನು ಎನ್ನುವ ಚಿಂತೆಯಲ್ಲಿ ಮುಳುಗಿದೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಅನೇಕರು ತ್ರೈವಾರ್ಷಿಕ.. ಪಂಚವಾರ್ಷಿಕ ಯೋಜನೆಯಡಿ ಚಿತ್ರಗಳನ್ನು ಮಾಡುತ್ತಿರುವ ಈ ಕಾಲದಲ್ಲಿ ವರ್ಷಕ್ಕೆ ಕಡಿಮೆ ಅಂದರೂ ಎರಡು ಚಿತ್ರಗಳನ್ನು ದರ್ಶನ್ ಮಾಡುತ್ತಿದ್ದರು. ದರ್ಶನ್ ಅವರ ಈ ನಡೆ ಮತ್ತು ನಿರ್ಧಾರದಿಂದ
ಚಿತ್ರರಂಗದಲ್ಲಿ ಹಲವರ ಬದುಕು ನಡೆಯುತ್ತಿತ್ತು. ಹಲವರಿಗೆ ಕೆಲಸ ಸಿಗುತ್ತಿತ್ತು. ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಆದರೆ ಈಗ ಎರಡು ವರ್ಷವಾಗುತ್ತಾ ಬಂದರು ಕೂಡ ದರ್ಶನ್ ಅಭಿನಯದ ಚಿತ್ರ ಬಂದಿಲ್ಲ. ಹೀಗಿರುವಾಗ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಈ ಬಾರಿ ಅದ್ಯಾವ ಕಾಲಕ್ಕೆ ಹೊರ ಬರುತ್ತಾರೋ ಗೊತ್ತಿಲ್ಲವಾದರೂ ಸದ್ಯ ಇಡೀ ಪ್ರಕರಣದ ಕುರಿತು ಕನ್ನಡ ಚಿತ್ರರಂಗದ ಹಿರಿಯ ನಟಿ ಮತ್ತು ಮಾಜಿ ಸಚಿವೆ ''ಉಮಾಶ್ರೀ'' ಮಾತನಾಡಿದ್ದಾರೆ.
ಈ ಕುರಿತು ''ಪಬ್ಲಿಕ್ ಟಿವಿ''ಯ ಜೊತೆ ಮಾತನಾಡಿರುವ ಉಮಾಶ್ರೀ ನಮಗೇನಾಗಿದೆ ಅಂದರೆ ಸುಪ್ರೀಂ ಕೋರ್ಟ್ನ ಆದೇಶವನ್ನು ಗೌರವಿಸಲೇಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ನಾಗರಿಕರಿಗೆ ಆಗಿರುವಂತೆ ನಮಗೂ ಕೂಡ ಆಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ನಾವು ಕಲಾವಿದರು, ಸಮಾಜದ ಸ್ವತ್ತು ಎಂದಿರುವ ಉಮಾಶ್ರೀ ನಮ್ಮ ನಡೆ, ನುಡಿ, ಉಡುಗೆ-ತೊಡುಗೆ ಎಲ್ಲವನ್ನು ಸಮಾಜ ನೋಡ್ತಾ ಇರುತ್ತೆ, ಅಭಿಮಾನದಿಂದ ನೋಡ್ತಾ ಇರುತ್ತೆ, ನಮ್ಮ ಪ್ರತಿಯೊಂದು ಮಾತು ಚೌಕಟ್ಟಿನಲ್ಲಿ ಇರುವುದನ್ನು ಜನ ನಿರೀಕ್ಷೆ ಮಾಡುತ್ತಾರೆ ವೈಯುಕ್ತಿಕವಾಗಿ ಅವರು ಎಷ್ಟೇ ದೊಡ್ಡವರಾದರೂ ಚೌಕಟ್ಟಿನಲ್ಲಿ ಇರಬೇಕು ಎಂದು ಹೇಳಿದ್ದಾರೆ. ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಸರೋಜಾ ದೇವಿ ಇನ್ನೂ ತುಂಬಾ ಜನರ ಉದಾಹರಣೆಗಳಿವೆ ಅವರೆಲ್ಲ ಹೇಗಿದ್ದರು ಎಂದು ಎಲ್ಲ ನೋಡಿದೇವೆ ನಾವು ಎಂದು ಹೇಳಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅಸಹ್ಯ ಅಶ್ಲೀಲ ಕಾಮೆಂಟ್ಗಳ ಬಗ್ಗೆ ಕೂಡ ಮಾತನಾಡಿರುವ ಉಮಾಶ್ರೀ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೆ ಇದೆ. ಟೀಕೆ ಇರಬಹುದು ಅಥವಾ
ಪ್ರಶಂಸೆ ಇರಬಹುದು ಅದು ಸಹಜವಾಗಿ ನಡೆಯುತ್ತಿರುತ್ತೆ ಎಂದು ಹೇಳಿದ್ದಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಈ ಅಭಿವ್ಯಕ್ತಿಯನ್ನು ವ್ಯಕ್ತ ಪಡಿಸುವಲ್ಲಿ ಭರದಲ್ಲಿ ಸಂಯಮ ಕಳೆದುಕೊಂಡಾಗ ಈ ರೀತಿಯ ಪ್ರಕರಣಗಳಾಗುತ್ತವೆ ಎಂದು ಹೇಳಿರುವ ಉಮಾಶ್ರೀ ನಾನು ನನ್ನ ಅನುಭವದಲ್ಲಿ ಡಾರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್ ಅವರ ಅಭಿಮಾನಿಗಳನ್ನು ನೋಡಿದ್ದೇನೆ ಆದರೆ ಆಗ ಸೋಶಿಯಲ್ ಮೀಡಿಯಾ ಇರಲಿಲ್ಲ. ಬಹಳ ಎಂದರೆ ಕೂಗಾಡುತ್ತಿದ್ದರು, ಕಿರುಚಾಡುತ್ತಿದ್ದರು. ಆ ಮೂಲಕ ಅಭಿಮಾನ ವ್ಯಕ್ತಪಡಿಸುತ್ತಿದ್ದರು, ಅಲ್ಲಿಗೆ ಮುಗಿಯುತ್ತಿತ್ತು ಎಂದು ಹೇಳಿದ್ದಾರೆ. ಈ ಸಾಮಾಜಿಕ ಜಾಲತಾಣ ಬಂದ ನಂತರ ಬಂದ ನಂತರ ಆ ಹಳೆಯ ಅಭಿಮಾನಿಗಳ ಜೊತೆ ಹೊಸ ಪೀಳಿಗೆಯ ಅಭಿಮಾನಿಗಳು ಬಂದು ಸೇರಿಕೊಂಡಿದ್ದಾರೆ. ಅವರು ಪ್ರಬುದ್ಧವಾದ ಚಿಂತನೆ ಇಟ್ಟುಕೊಂಡಿದ್ದರೆ ಸಾಮಾಜಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ ನನ್ನ ಅಭಿಪ್ರಾಯ ಎಂದಿದ್ದಾರೆ.
ಇನ್ನು ಆರಂಭದಲ್ಲಿ ಹೇಳಿದಂತೆ ದರ್ಶನ್ ಕನ್ನಡ ಚಿತ್ರರಂಗದ ನಂಬರ್ 1 ನಟ. ವರ್ಷಕ್ಕೆ ಎರಡು ಚಿತ್ರಗಳನ್ನು ಮಾಡುತ್ತಿದ್ದ ಸೂಪರ್ ಸ್ಟಾರ್. ಈ ವಿಚಾರದ ಕುರಿತು ಕೂಡ ಮಾತನಾಡಿರುವ ಉಮಾಶ್ರೀ, ದರ್ಶನ್ ವ್ಯಾಪಾರ ಜಗತ್ತಿನಲ್ಲಿ ಒಳ್ಳೆಯ ಕೊಡುಗೆಯನ್ನ ಕೊಟ್ಟಿದ್ದಾನೆ. ಇದರಿಂದ ಚಿತ್ರರಂಗಕ್ಕೆ ಬಹಳ ಒಳ್ಳೆಯದು ಆಗಿದೆ. ಇಲ್ಲ ಅಂತ ಹೇಳೋಕೆ ಆಗಲ್ಲ ಎಂದು ಹೇಳಿದ್ದಾರೆ. ಈಗಿನ ಬೆಳವಣಿಗೆಯಿಂದ ನಷ್ಟವೂ ಕೂಡ ಆಗಿದೆ. ಅವನಿಂದ ಬಹಳಷ್ಟು ಒಳ್ಳೆಯ ಕೆಲಸ ಆಗೋದಿತ್ತು. ಇದು ಇಷ್ಟಕ್ಕೆ ಮುಗಿದು ಹೋಗುತ್ತೆ ಎಂದು ನನಗೆ ಅನಿಸುತ್ತಿಲ್ಲ ಎಂದು ಹೇಳಿರುವ ಉಮಾಶ್ರೀ ಇನ್ನೂ ಕೇಸ್ ಆಗಬೇಕು. ಕೋರ್ಟ್ನಲ್ಲಿ ತೀರ್ಮಾನ ಆಗಬೇಕು. ಏನು ಆಗುತ್ತೋ ಗೊತ್ತಿಲ್ಲ. ಇಷ್ಟಕ್ಕೆ ನಿರಾಸೆ ಆಗೋದು ಬೇಡ. ಯಾರೋ ಒಬ್ಬರಿಗೆ ನ್ಯಾಯ ಅಂತು ಸಿಗಬೇಕಲ್ಲ ಎಂದಿದ್ದಾರೆ. ಸ್ವಲ್ಪ ಶಾಂತವಾಗಿ ಇರಿ ಎಂದು ಅಭಿಮಾನಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ. ಇದೆಲ್ಲವೂ ತುಂಬಾ ನೋವಿನ ವಿಚಾರ ಈ ರೀತಿ ಆಗಬಾರದಿತ್ತು ಎಂದು ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ.


Click it and Unblock the Notifications











