ತೆಲುಗಿನ ಖ್ಯಾತ ನಿರ್ದೇಶಕ ದಾಸರಿ ನಾರಾಯಣ ರಾವ್ ಇನ್ನಿಲ್ಲ
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಇಂದು (ಮೇ 30) ನಿಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಾಸರಿ ನಾರಾಯಣ ರಾವ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್ ನ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

75 ವರ್ಷದ ದಾಸರಿ ನಾರಾಯಣ ರಾವ್ ಮೇ 4, 1942 ರಲ್ಲಿ ಜನಿಸಿದ್ದರು. 1972ರಲ್ಲಿ ತೆರೆಕಂಡ 'ತಾತ ಮನವಡು' ನಾರಾಯಣ ರಾವ್ ನಿರ್ದೇಶನದ ಮೊದಲ ಚಿತ್ರ. ಇಲ್ಲಿಂದ ಶುರುವಾದ ನಾರಾಯಣ ರಾವ್ ಅವರ ಸಿನಿ ಪಯಣ 'ಪ್ರೇಮಾಭಿಷೇಕಂ', 'ಮೇಘ ಸಂದೇಶಂ', 'ಉಸೇ ರಾಮುಲಮ್ಮ', 'ಸಂಸಾರಂ ಸಾಗರಂ', 'ಸ್ವರ್ಗ ನರಕ', 'ಗೋರಿಂಟಾಕು', 'ಬೊಬ್ಬಿಲಿ ಪುಲಿ' ಸೇರಿದಂತೆ 151ಕ್ಕೂ ಅಧಿಕ ಚಿತ್ರಗಳನ್ನ ನಿರ್ದೇಶನ ಮಾಡಿದ್ದು, 53ಕ್ಕೂ ಅಧಿಕ ಚಿತ್ರಗಳನ್ನ ನಿರ್ಮಾಣ ಮಾಡಿದ್ದರು. ಸುಮಾರು 250ಕ್ಕೂ ಅಧಿಕ ಚಿತ್ರಗಳಲ್ಲಿ ಸಾಹಿತ್ಯಗಾರನಾಗಿ, ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದಾರೆ.
ನಾರಾಯಣ ರಾವ್ ಅವರ ತಮ್ಮ ಚಿತ್ರಗಳಿಗಾಗಿ ಎರಡು ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ನಂದಿ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. 2014 ರಲ್ಲಿ ಬಿಡುಗಡೆಯಾದ 'ಯರ್ರಾ ಬಸ್ಸು' ನಾರಾಯಣ ರಾವ್ ನಿರ್ದೇಶನದ ಕೊನೆಯ ಚಿತ್ರ.
ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ, ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದ ದಾಸರಿ ನಾರಾಯಣ ರಾವ್ ರಾಜ್ಯಸಭೆಗೂ ಆಯ್ಕೆ ಆಗಿದ್ದರು. ದಾಸರಿ ನಾರಾಯಣ ರಾವ್ ಅವರಿಗೆ 1986 ರಲ್ಲಿ ಆಂಧ್ರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


Click it and Unblock the Notifications











