ರಂಗಕರ್ಮಿ, ನಟ, ನಿರ್ದೇಶಕ ಸಿ.ಆರ್. ಸಿಂಹ ಇನ್ನಿಲ್ಲ
ಪ್ರಾಟೇಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ, ನಿರ್ದೇಶಕ ಹಾಗೂ ರಂಗಕರ್ಮಿ ಸಿ.ಆರ್.ಸಿಂಹ (72) ಅವರು ಶುಕ್ರವಾರ ಮಧ್ಯಾಹ್ನ 12ಕ್ಕೆ ಚಿರನಿದ್ರೆಗೆ ಜಾರಿದರು. ಕಳೆದ ನಾಲ್ಕು ದಿನಗಳಿಂದ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರು ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಾಗಿದ್ದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಅವರು ನಾಲ್ಕು ದಿನಗಳ ಹಿಂದೆ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವರ್ಷದಿಂದ ಪ್ರಾಸ್ಟೇಟ್ ಗ್ರಂಥಿ ಕ್ಯಾನ್ಸರ್ ಅವರನ್ನು ಬಹಳವಾಗಿ ಕಾಡುತ್ತಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರು ಪ್ರಜ್ಞಾಹೀನ ಸ್ಥಿತಿಗೆ ಜಾರಿ ಚಿಕಿತ್ಸೆಗೆ ಸ್ಪಂದಿಸದಂತಾಗಿದ್ದರು.[ಸಿ.ಆರ್.ಸಿಂಹ ಬಗ್ಗೆ ಯಾರು ಏನು ಹೇಳಿದರು?]

ತಮ್ಮ ವೃತ್ತಿ ಬದುಕನ್ನು 'ಪ್ರಭಾತ್ ಕಲಾವಿದರು' ತಂಡದಿಂದ ಆರಂಭಿಸಿದ ಸಿಂಹ ಬಳಿಕ ಅತ್ಯುನ್ನತ ಮಟ್ಟಕ್ಕೆ ತಲುಪಿದವರು. ಮುಂದೆ ಅವರು ತಮ್ಮದೇ ಆದಂತಹ ರಂಗತಂಡ 'ನಟರಂಗ' ಕಟ್ಟಿ ಹಲವಾರು ರಂಗಪ್ರಯೋಗಗಳನ್ನು ಮಾಡಿ ಗೆದ್ದರು. ಕಾಕನಕೋಟೆ, ತುಘಲಕ್ ಹಾಗೂ ಸಂಕ್ರಾಂತಿ ಅವರ ನಿರ್ದೇಶನದ ನಾಟಕಗಳು.[ರಂಗವೇದಿಕೆಯ ಸಿಂಹನಿಗೆ ಟ್ವೀಟ್ ನಮನ]
ತಮ್ಮ ಇಡೀ ಜೀವನವನ್ನೇ ರಂಗಭೂಮಿಗೆ ಮುಡಿಪಾಗಿಟ್ಟಿದ್ದ ಕಲಾವಿದ ಸಿ.ಆರ್.ಸಿಂಹ. ಸರಿಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಕನಕೋಟೆ, ಶಿಕಾರಿ, ಸಿಂಹಾಸನ, ಅಶ್ವಮೇಧ, ಅಂಗೈಯಲ್ಲಿ ಅಪ್ಸರೆ ಅವರ ನಿರ್ದೇಶನದ ಚಿತ್ರಗಳು. ಅದರಲ್ಲೂ ಅಶ್ವಮೇಧ ಚಿತ್ರವಂತೂ ಅವರಿಗೆ ವಿಶೇಷ ಹೆಸರನ್ನು ತಂದುಕೊಟ್ಟಿದ ಚಿತ್ರ.
ಶುಕ್ರವಾರ ಬೆಳಗ್ಗೆಯಷ್ಟೇ ನಟ, ವಿಚಾರವಾದಿ ಜಿ.ಕೆ.ಗೋವಿಂದರಾವ್ ಅವರು ಮಾತನಾಡುತ್ತಾ, ಬಹುಶಃ ನಿಮಗ್ಯಾರಿಗೂ ಗೊತ್ತಿರಲಿಕ್ಕಿಲ್ಲ. ಆ ಮನುಷ್ಯನಿಗೆ ಸಿಕ್ಕಾಪಟ್ಟೆ ಹಾಸ್ಯಪ್ರಜ್ಞೆ ಇತ್ತು. ಅವರು ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ನಮ್ಮೆಲ್ಲರನ್ನೂ ನಗಿಸಲಿ ಎಂದಿದ್ದರು. ಆದರೆ ರಂಗಭೂಮಿಯ 'ತುಘಲಕ್' ದರ್ಬಾರ್ ಮುಗಿಸಿದ್ದಾರೆ.
ಅವರ ಜೊತೆಯಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ್ದ ನಟ ಉಮೇಶ್ ಅವರು ಆದಷ್ಟು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಸಿಂಹ ಅವರು ಮತ್ತೆ ರಂಗಭೂಮಿಯಲ್ಲಿ ತೊಡಗಿಕೊಳ್ಳಬೇಕು. ಕಲಾವಿದರನ್ನು ಆ ಭುವನೇಶ್ವರಿ, ಸರಸ್ವತಿ ಯಾವತ್ತೂ ಕೈಬಿಡಲ್ಲ ಎಂದು ನೋವಿನಲ್ಲೇ ಹೇಳಿದ್ದರು. ಆದರೆ ವಿಧಿ ಲಿಖಿತ ಬಲ್ಲವರ್ಯಾರು? ಬದುಕಿನ ನಾಟಕಕ್ಕೆ ಸಿಂಹ ತೆರೆ ಎಳೆದಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











