ಸೋನು ನಿಗಮ್ಗೆ ಮುಖದ ಮೇಲೆ ಮೀಸೆ ಬಂದಿರಲಿಲ್ಲ ಆಗ ಚಾನ್ಸ್ ಕೊಟ್ಟಿದ್ದು ಕನ್ನಡಿಗರು - ಕಿಡಿ ಕಾರಿದ ದೊಡ್ಡಣ್ಣ..!
ಕನ್ನಡ .. ಕನ್ನಡ .. ಕನ್ನಡ .. ಎಂದು ಕನ್ನಡಿಗರನ್ನು ಸೋನು ನಿಗಮ್ ಕೆಣಕಿದ್ದಾರೆ. ಮೊನ್ನೆ ಮೊನ್ನೆವರೆಗೆ ಕನ್ನಡ ಚಿತ್ರರಂಗದ ಕುರಿತು ಅಭಿಮಾನದ ಮಾತುಗಳನ್ನಾಡುತ್ತಿದ್ದ, ಕಾಲ..ಕಾಲಕ್ಕೆ.. ತಮ್ಮ ಕನ್ನಡಾಭಿಮಾನದ ಪ್ರದರ್ಶನವನ್ನು ಮಾಡುತ್ತಿದ್ದ ಇದೇ ಸೋನು ನಿಗಂ ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರದಲ್ಲಿ ಆದ ಘಟನೆಗೆ ಹೋಲಿಸಿದ್ದಾರೆ. ಕನ್ನಡಿಗರು ಭಯೋತ್ಪಾದಕರು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಾವಾಡಿದ ಮಾತುಗಳಿಗೆ ಕ್ಷಮೆಯನ್ನು ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಕನ್ನಡಿಗರ ಆಕ್ರೋಶ ಇನ್ನೂ ಹೆಚ್ಚಿಸಿದ್ದಾರೆ.
ಸೋನು ನಿಗಂ ಎಸಗಿದ ಈ ಅಪಚಾರಕ್ಕೆ ಕರುನಾಡಿನೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸೋನು ನಿಗಂ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಕೂಗು ಕೂಡ ಕೇಳಿ ಬರುತ್ತಿದೆ. ಇನ್ನು ಸೋನು ನಿಗಂ ವಿರುದ್ಧ ಕನ್ನಡ ಪರ ಹೋರಾಟಗಾರರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

ವಾಟಾಳ್ ನಾಗರಾಜ್ ಅವರು ಕೂಡ ಸೋನು ನಿಗಂ ಅವರನ್ನು ಈ ಕೂಡಲೇ ಬಂಧಿಸಬೇಕು, ಕನ್ನಡ ಸಿನಿಮಾಗಳಲ್ಲಿ ಹಾಡಲು ಅವರಿಗೆ ಅವಕಾಶ ಕೊಡಬಾರದು ಎಂದಿದ್ದಾರೆ. ಇದರ ನಡುವೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಸೋನು ನಿಗಂ ವಿರುದ್ಧ ಕಿಡಿ ಕಾರಿದ್ದಾರೆ.
ಹೌದು, ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿರುವ ದೊಡ್ಡಣ್ಣ ಸೋಲಿಲ್ಲದ ಸರದಾರ ಚಿತ್ರಕ್ಕೆ ಸೋನು ನಿಗಂ ಅವಕಾಶ ಪಡೆದಿದ್ದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಇತ್ತು ಆಗ ನಾನು ಕೂಡ ಅಲ್ಲಿಯೇ ಇದ್ದೇ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಸೋನು ನಿಗಮ್ ಎಂಬ ಗಾಯಕನ ಮುಖದಲ್ಲಿ ಸರಿಯಾಗಿ ಮೀಸೆ ಕೂಡ ಬಂದಿರಲಿಲ್ಲ ಎಂದು ಹೇಳಿದ್ದಾರೆ.
ಕನ್ನಡ ನನ್ನ ತಾಯಿ, ಜಗತ್ತಿನ ಮೂರೇ ಮೂರು ಶ್ರೇಷ್ಠ ಭಾಷೆಗಳಲ್ಲಿ ಕನ್ನಡ ಕೂಡ ಒಂದು ಎಂದಿರುವ ದೊಡ್ಡಣ್ಣ ಮಾತನಾಡಿದಂತೆ ಬರೆಯಲು, ಬರೆದಂತೆ ಮಾತನಾಡುವ ಶಕ್ತಿಯುಳ್ಳ ಸಂಧಿ ಮತ್ತು ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಭಾಷೆ ಯಾವುದಾದರೂ ಇದ್ದರೆ ಅದು ಕನ್ನಡ ಎಂದು ಹೇಳಿದ್ದಾರೆ. ಕನ್ನಡ ಅಲ್ಲ ಅದು ಕಸ್ತೂರಿ ಕನ್ನಡ ಪಾಪ ಅದು ಸೋನು ನಿಗಮ್ಗೆ ಗೊತ್ತಿಲ್ಲ ಹೀಗಾಗಿ ನಾವು ಸೋನು ನಿಗಮ್ನನ್ನು ಅವಿವೇಕಿ ಎಂದು ಪರಿಗಣಿಸಬೇಕು ಎಂದು ಹೇಳಿರುವ ದೊಡ್ಡಣ್ಣ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ನನಗ್ಯಾಕೋ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ಕನ್ನಡ ಪರ ಹೋರಾಟಗಾರರ ಹೋರಾಟವನ್ನು ಮೆಚ್ಚಿರುವ ದೊಡ್ಡಣ್ಣ, ಕನ್ನಡ ಪರ ಹೋರಾಟಗಾರರೇನಾದರೂ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ಕನ್ನಡದ ಕೊಲೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅವರ ಹೆಂಡತಿ, ಮಕ್ಕಳನ್ನು ಬಿಟ್ಟು ರಸ್ತೆಗೆ ಬಂದು ಕೂಗಾಡಿ ಪ್ರತಿಭಟನೆಗಳನ್ನು ಮಾಡಿ, ಅರೆಸ್ಟ್ ಆಗಿ ಮೂವತ್ತು, ನಲವತ್ತು ಕೇಸುಗಳನ್ನು ಹಾಕಿಸಿಕೊಳ್ಳದೇ ಇದ್ದಿದ್ದರೆ ಕನ್ನಡ ಇಲ್ಲಿಯವರೆಗೆ ಬರ್ತಾನೆ ಇರಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಕನ್ನಡದ ಹೋರಾಟಗಾರರಲ್ಲಿ, ಚಳುವಳಿಗಾರರಲ್ಲಿ ನಾನು ವಿನಂತಿ ಮಾಡಿಕೊಳ್ಳುವುದು ಇಷ್ಟೇ, ಯಾವುದೇ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡುವುದು ಬೇಡ, ಈ ವಿಚಾರವನ್ನು ನಾವೆಲ್ಲ ಸಂಧಾನದ ಮೂಲಕ ಬಗೆಹರಿಸಿಕೊಳ್ಳೋಣ, ನಾವೆಲ್ಲ ಭಾರತೀಯರು ಎನ್ನುವ ವಿಚಾರ ತಲೆಯಲ್ಲಿ ಇರಲಿ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.
ಇನ್ನುಳಿದಂತೆ ವಿವಾದದ ನಂತರ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದ ಸೋನು ನಿಗಂ ಕನ್ನಡಿಗರು ತುಂಬಾನೇ ಒಳ್ಳೆಯವರು, ಯಾರೋ ನಾಲ್ಕೈದು ವ್ಯಕ್ತಿಗಳು ದುರ್ವತನೆ ತೋರಿದ್ದಕ್ಕೆ ಕನ್ನಡಿಗರನ್ನು ದೂಷಿಸುವುದು ತಪ್ಪು ಎಂದು ಹೇಳಿದ್ದರು. ನಾಲ್ಕು ಜನ ನನ್ನನ್ನೇ ಗುರಾಯಿಸುತ್ತಿದ್ದರು, ಕನ್ನಡ ಹಾಡು ಹಾಡುವಂತೆ ಅವರು ಬೇಡಿಕೆಯನ್ನಿಡುತ್ತಿರಲಿಲ್ಲ ಬದಲಿಗೆ ಹಾಡು ಹಾಡಬೇಕೆಂದು ಬೆದರಿಕೆಯನ್ನು ಹಾಕುತ್ತಿದ್ದರು ಎಂದು ಹೇಳಿದ್ದರು.


Click it and Unblock the Notifications











