ಎಂಎಸ್ ಉಮೇಶ್ಗೆ ಕ್ಯಾನ್ಸರ್, 4ನೇ ಸ್ಟೇಜ್ನಲ್ಲಿ ಕಾಯಿಲೆ ; ಹುಷಾರಾಗಿ ಬರ್ತಿನಿ ಎಂದು ಹೇಳಿದ ವಿಷಯ ತಿಳಿಯದ ಹಿರಿಯ ನಟ
ವಯಸ್ಸಾಗುವುದು ದೇಹಕ್ಕೆ ಹೊರತು ಮನಸಿಗೆ ಅಲ್ಲ ಎಂದು ಹೇಳುವವರು ಕನ್ನಡ ಚಿತ್ರರಂಗದ ಪ್ರಖ್ಯಾತ ಹಿರಿಯ ನಟ ಉಮೇಶ್. ಕಳೆದ ಆರು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ, ಕೊಡುಗೆಯನ್ನು ನೀಡಿರುವ ಉಮೇಶ್ ಅವರಿಗೆ ಈಗ 80ರ ಪ್ರಾಯ. ಆದರೂ ಇವರ ಉತ್ಸಾಹ ಬತ್ತಿಲ್ಲ. ಚಂದನವನದ ಚೈತನ್ಯದ ಚಿಲುಮೆ ಇವರು.
ಇವತ್ತು ಕೂಡ ನೀಡಲಾದ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸುವ ಉಮೇಶ್ ನಿನ್ನೆ ( ಅಕ್ಟೋಬರ್ 10 ) ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಲಾಗಿತ್ತು. ಆದರೆ ಕಾಲು ಮತ್ತು ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಉಮೇಶ್ ಅವರ MRI ಹಾಗೂ CT ಸ್ಕ್ಯಾನಿಂಗ್ ಮಾಡಿದಾಗ ಆಘಾತಕಾರಿಯಾದ ವಿಚಾರ ಗೊತ್ತಾಗಿದೆ. ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಈ ಕುರಿತು ಮಾಧ್ಯಮದವರ ಜೊತೆ ಮಾಹಿತಿಯನ್ನು ಹಂಚಿಕೊಂಡಿರುವ ಆಸ್ಪತ್ರೆಯ ವೈದ್ಯರು ಉಮೇಶ್ ಅವರ ಲಿವರ್ನಲ್ಲಿ ಹಾನಿ ಉಂಟುಮಾಡುವ ಗಡ್ಡೆ ಇರುವ ವಿಚಾರ ಗೊತ್ತಾಗಿದೆ, ಅದು ಬೇರೆ ಅಂಗಗಳಿಗೆ ಸ್ಪ್ರೆಡ್ ಆಗಿದೆ. ಉಮೇಶ್ ಅವರು ನೋಡಲು ಆರೋಗ್ಯವಾಗಿಯೇ ಕಾಣಿಸಿದ್ದಾರೆ. ಆದರೆ, ಕ್ಯಾನ್ಸರ್ ಇದೆ. ಇದನ್ನು ಖಚಿತಪಡಿಸಲು ಕೆಲವು ಟೆಸ್ಟ್ ಮಾಡಬೇಕಿದೆ. ಲಿವರ್ ಒಳಗೆ ಇರೋ ಗಡ್ಡೆಯನ್ನು ತೆಗೆದು ಪರೀಕ್ಷೆಗೆ ಕಳುಹಿಸಬೇಕಿದೆ ಎಂದು ವೈದ್ಯರು ಹೇಳಿದ್ದಾರೆ. ಕ್ಯಾನ್ಸರ್ ಈಗ ನಾಲ್ಕನೇ ಸ್ಟೇಜ್ನಲ್ಲಿದೆ ಎಂದು ತಿಳಿಸಿದ್ದಾರೆ.
ಉಮೇಶ್ ಅವರಿಗೆ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ''ಕಿಮೋಥೆರಪಿ''.. ''ಇಮಿನೋಥೆರಪಿ'' ಸೇರಿ ಕೆಲವು ಪರೀಕ್ಷೆಗಳನ್ನು ಮಾಡಲು ಮುಂದಾಗಿದ್ದಾರೆ. ಇಂಜೆಕ್ಷನ್ ಮೂಲಕ ಗಡ್ಡೆ ಕರಗಿಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಹೇಳಿರುವ ವೈದ್ಯರು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ರಿಕವರಿ ಆಗುವ ಚಾನ್ಸ್ ಇದೆ ಎಂದು ಹೇಳಿದ್ದಾರೆ. ಕಿಮೋಥೆರಪಿ ಮಾಡಬೇಕಿದೆ. ಟೆಸ್ಟ್ಗಳನ್ನು ಮಾಡಿದ್ದೇವೆ. ಅದರ ರಿಪೋರ್ಟ್ ಬಂದಮೇಲೆ ಚಿಕಿತ್ಸೆ ಪ್ರಾರಂಭಿಸಲಿದ್ದೇವೆ ಎಂದು ಹೇಳಿರುವ ವೈದ್ಯರು ಈ ಚಿಕಿತ್ಸೆ ನೀಡಿದ ನಂತರವಷ್ಟೇ ಮೂಳೆ ಸರ್ಜರಿ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಮುಂದುವರೆದು ಉಮೇಶ್ ಅವರಿಗೆ ಕ್ಯಾನ್ಸರ್ ಲಕ್ಷಣಗಳಿಲ್ಲ.ಆದರೆ ಅವರಿಗೆ ಹಸಿವು ಜಾಸ್ತಿ ಆಗುತ್ತಿಲ್ಲ, ರುಚಿ ಗೊತ್ತಾಗುತ್ತಿಲ್ಲ ಎಂದು ಹೇಳಿರುವ ವೈದ್ಯರು ಸ್ವಲ್ಪ ದಿನದ ಅವರಿಗೆ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದಿಷ್ಟೇ ಅವರಿಗೆ ಕಾಣಿಸಿಕೊಂಡಿರುವ ಲಕ್ಷಣಗಳು ಎಂದು ಮಾಹಿತಿಯನ್ನು ನೀಡಿದ್ದಾರೆ.
ಇನ್ನೂ ತಮಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರವನ್ನರಿಯದ ಹಿರಿಯ ನಟ ಎಂಎಸ್ ಉಮೇಶ್, ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಬಚ್ಚಲು ಮನೆಯಲ್ಲಿ ಸ್ನಾನಕ್ಕೆ ಹೋದಾಗ ಜಾರಿ ಬಿದ್ದೆ, ಸ್ವಲ್ಪ ಪೆಟ್ಟಾಗಿದೆ ಎಂದು ಹೇಳಿರುವ ಉಮೇಶ್ ಈ ಆಸ್ಪತ್ರೆಯವರಾದ ಶಿವರಾಜ್ ಗೌಡ ಅವರು ಬಹಳ ವರ್ಷಗಳಿಂದ ನನಗೆ ಪರಿಚಯ, ಹಿಂದೆ ಒಮ್ಮೆ ತೊಂದರೆಯಾದಾಗ ತುಂಬಾ ಸಹಾಯ ಮಾಡಿದ್ದರು ಎಂದು ಹೇಳಿದ್ದಾರೆ. ಕೆಲವು ಟ್ರಿಟ್ಮೆಂಟ್ಗಳು ಬಾಕಿ ಇವೆ ಎಂದು ಹೇಳಿದ್ದಾರೆ. ಇನ್ನೇನು ನಾಳೆ ನಾಡಿದ್ದರಲ್ಲಿ ಆಪರೇಷನ್ ಮಾಡ್ತೀವಿ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ವಯಸ್ಸಾದ ಮೇಲೆ ಜಾರಿ ಬೀಳುವುದು ಸಹಜ.ಪ್ರತಿಯೊಬ್ಬರ ಬದುಕಿನಲ್ಲಿ ಏಳು ಬೀಳುಗಳು ಕೂಡ ಸಹಜ. ನಮ್ಮ ಅಭಿಮಾನಿಗಳು, ಅನ್ನದಾತರು, ನೀವೇನು ಗಾಬರಿಯಾಗಬೇಡಿ, ಸ್ವಲ್ಪ ದಿವಸ ನಾನು ಹುಷಾರಾದ ಮೇಲೆ ಮತ್ತೆ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿರುವ ಉಮೇಶ್ ನಿಮ್ಮೆಲ್ಲರ ಸೇವೆ ಮಾಡೋದು ಇನ್ನೂ ಬಾಕಿ ಇದೆ. ನೀವು ಅಪಾರ್ಥ ಮಾಡಿಕೊಂಡರೆ ಕಷ್ಟ ಆಗುತ್ತೆ ಎಂದು ನೋವಲ್ಲಿಯೂ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ತಮ್ಮ ಸ್ವಂತ ಅಣ್ಣ ತಮ್ಮನನ್ನು ನೋಡಿಕೊಂಡರೆ ವೈದ್ಯರು ನನ್ನ ಇಲ್ಲಿ ನೋಡಿಕೊಳ್ಳುತ್ತಿದ್ದಾರೆ. ನಿನ್ನೆ ಬಿದ್ದೆ ಇಂದು ಎದ್ದೆ ಮುಂದೆ ಇನ್ನೂ ಓಡಾಡಬೇಕಿದೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತೆ ಎಂದು ಹೇಳಿರುವ ಉಮೇಶ್ ಅಭಿಮಾನಿಗಳ ಆಶೀರ್ವಾದದಿಂದ 75 ವರ್ಷದಿಂದ ನಡೆದುಕೊಂಡು ಬಂದಿದ್ದೇನೆ ಸ್ವಲ್ಪ ಸೊಂಟ ಗಿಂಟ ರಿಪೇರಿ ಮಾಡಿಸಿಕೊಂಡು ಮತ್ತೆ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.


Click it and Unblock the Notifications










