ಕನ್ನಡ ಚಿತ್ರರಂಗದ ಹಿರಿಯ ನಟ ಎಂಎಸ್ ಉಮೇಶ್ ಆಸ್ಪತ್ರೆಗೆ ದಾಖಲು, ಆಗಿದ್ದೇನು ?
ಕನ್ನಡ ಚಿತ್ರರಂಗಕ್ಕೆ ಈಗ 91 ವರ್ಷ. ಈ 91 ವರ್ಷದಲ್ಲಿ ಹಲವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಬದುಕನ್ನೇ ಕಲಾಸೇವೆಗೆ ಮುಡಿಪಾಗಿಟ್ಟಿದ್ದಾರೆ. ಆ ಪೈಕಿ ಒಬ್ಬರು ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್.ಉಮೇಶ್. ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು.
ಎಳೆಯ ವಯಸ್ಸಿನಲ್ಲಿಯೇ ಕಂಪನಿ ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ಅಡಿಯಿಟ್ಟಿದ್ದು 'ಮಕ್ಕಳ ರಾಜ್ಯ' ಚಿತ್ರದ ಮೂಲಕ. ಆ ಕಾಲದಲ್ಲಿಯೇ ಪರಭಾಷೆಗಳಿಂದ ಅವಕಾಶ ಅರಸಿ ಬಂದರೂ ಕೂಡ ಹೋಗದೇ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರೆದ ಎಂಎಸ್ ಉಮೇಶ್ ಇಲ್ಲಿಯವರೆಗೆ ಹತ್ತು ಹಲವು ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ.

ಹಿಂದೊಮ್ಮೆ ''TV9 ಕನ್ನಡ''ಗೆ ನೀಡಿದ್ದ ಸಂದರ್ಶನದಲ್ಲಿ ಖುದ್ದು ಎಂಎಸ್ ಉಮೇಶ್ ಅವರೇ ಹೇಳಿದಂತೆ 800ಕ್ಕೂ ಅಧಿಕ ಚಿತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಪಾತ್ರವನ್ನು ಜೀವಿಸಿದ್ದಾರೆ. ಪ್ರೇಕ್ಷಕರನ್ನು ನಗಿಸಿದ್ದಾರೆ. ಕಥಾಸಂಗಮದ 'ಮುನಿತಾಯಿ'ಯಲ್ಲಿನ ತಿಮ್ಮರಾಯಿ ಪಾತ್ರ ಇವರ ಅಭಿನಯ ಸಾಮರ್ಥ್ಯಕ್ಕೆ ಹಿಡಿಯಬಹುದಾದ ಅತ್ಯುತ್ತಮ ಕೈಗನ್ನಡಿ. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಕೂಡ ಪಡೆದವರು ಎಂಎಸ್ ಉಮೇಶ್.
ಇನ್ನು ''ಗೋಲ್ ಮಾಲ್ ರಾಧಾಕೃಷ್ಣ'' ಚಿತ್ರದಲ್ಲಿನ ಇವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. "ಅಯ್ಯೋ ನನ್ನ ಹೆಂಡ್ತಿ ಅಂದುಕೊಂಡು ನಿಮ್ಮ ಹೆಂಡ್ತೀನಾ ತಬ್ಬುಕೊಂಡು ಬಿಟ್ಟೆನಲ್ಲಾ. ಅಪಾರ್ಥ ಮಾಡ್ಕೋಬೇಡಿ..." ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ.
ವರನಟ ಡಾ.ರಾಜ್ ಕುಮಾರ್ ಜೊತೆ 'ಶೃತಿ ಸೇರಿದಾಗ' ಚಿತ್ರದಲ್ಲಿನ "ಇದು ಬೊಂಬೆಯಾಟವಯ್ಯಾ..." ಹಾಡಿನಲ್ಲಿ ಅಮೋಘ ಅಭಿನಯವಂತೂ ಪ್ರೇಕ್ಷಕರನ್ನು ರಂಜಿಸಿತ್ತು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಉಮೇಶ್ ಅಭಿನಯದ ಕೆಲವು ಚಿತ್ರಗಳು.
ಹೀಗೆ ಕನ್ನಡ ಚಿತ್ರರಂಗದ ಬಹುಮುಖ್ಯ ಭಾಗವಾದ ಎಂಎಸ್ ಉಮೇಶ್ ಇಂದು ಮನೆಯಲ್ಲಿ ಜಾರಿ ಬಿದ್ದಿದ್ದಾರೆ. 80 ವರ್ಷದ ಉಮೇಶ್ ಬೆಳಗ್ಗೆ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿನ ತಮ್ಮ ಮನೆಯಲ್ಲಿ ಸ್ನಾನಕ್ಕೆ ಹೋಗಿದ್ದ ಸಮಯದಲ್ಲಿ ಕಾಲು ಜಾರಿದ್ದು ಎಡ ಭಾಗದಲ್ಲಿ ಪೆಟ್ಟು ಬಿದ್ದಿದೆ. ಎಂಎಸ್ ಉಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸದ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಸದ್ಯ ಪೆಟ್ಟು ಬಿದ್ದಿರುವ ಜಾಗದ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ.
ಎಂಎಸ್ ಉಮೇಶ್ ಆಸ್ಪತ್ರೆಗೆ ದಾಖಲಾದ ವಿಚಾರವನ್ನು ತಿಳಿದ ಇವರ ಅಭಿಮಾನಿಗಳು ಬೇಗ ಚೇತರಿಸಿಕೊಂಡು ತಮ್ಮ ನೆಚ್ಚಿನ ನಟ ಮನೆಗೆ ಮರಳಿ ಬರುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ರಾಜಕುಮಾರ್ ಸಮ ಕಾಲಿನ ರು, ಕಷ್ಟ ಜೀವಿ, ಬೇಗನೆ ಚೇತರಿಸಿಕೊಳ್ಳಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಕೂಡ ಎಂಎಸ್ ಉಮೇಶ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದೆ.
ಎಂಎಸ್ ಉಮೇಶ್ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ದೇವ್ರಂಥಾ ಮನುಷ್ಯ ಬಿಗ್ ಬಾಸ್ ವಿನ್ನರ್ ಪ್ರಥಮ್ ಕೂಡ ಟ್ವಿಟ್ ಮಾಡಿದ್ದು ತೀವ್ರ ದುಃಖ,ತುಂಬಾ shocking! ಒಬ್ಬ ಕಲಾವಿದ ಹೇಗೆ ಬದುಕಬೇಕು ಅನ್ನೋದಕ್ಕೆ ನನಗೆ inspiration ಇವ್ರು! ನರಸಿಂಹರಾಜು ನಂತರ ಪೂರ್ಣ ಪ್ರಮಾಣದ star comedian ಅಂದ್ರೆ ಉಮೇಶ್ ಸರ್.65 ವರ್ಷದಿಂದ ದುಡಿದು ಬದುಕುತ್ತಿರುವ ಉಮೇಶ್ ಸರ್ ಯಾವತ್ತೂ ಯಾವ ಬಳಿಯೂ ಕೈಚಾಚಿಲ್ಲ!
ಇವ್ರ ಆರೋಗ್ಯ ತೀವ್ರ ಹದಗೆಟ್ಟಿದೆ ಅನ್ನೋ ವಿಚಾರ ಸಕ್ಕತ್ ನೋವು ನೀಡಿದೆ! ದಯವಿಟ್ಟು ಈಶ್ವರನಲ್ಲಿ ಪ್ರಾರ್ಥಿಸಿ..ಶೀಘ್ರ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











