ಸಾವಿನಲ್ಲೂ ಸಾರ್ಥಕತೆ ಮೆರೆದ 'ಅಭಿನೇತ್ರಿ': ನೇತ್ರದಾನ ಮಾಡಿದ ಜಯಂತಿ
ಕನ್ನಡದ ಲೆಜೆಂಡ್ ನಟಿ ಜಯಂತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಇಹಲೋಕ ತ್ಯಜಿಸಿದ ಹಿರಿಯ ನಟಿ ಜಯಂತಿ ನೇತ್ರದಾನ ಮಾಡುವ ಮೂಲಕ ಮತ್ತಿಬ್ಬರ ಬದುಕಿನಲ್ಲಿ ಬೆಳಕಾಗಿದ್ದಾರೆ.
Recommended Video
ಅಂತ್ಯಕ್ರಿಯೆಗೂ ಮುಂಚೆ ನಟಿ ಜಯಂತಿ ಅವರ ಕಣ್ಣುಗಳನ್ನು ವೈದ್ಯರು ತೆಗೆದುಕೊಂಡಿದ್ದಾರೆ. ಅದಕ್ಕೂ ಮುಂಚೆ ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡರು. ಇದರೊಂದಿಗೆ ಸತ್ತ ಮೇಲೂ ಒಂದೊಳ್ಳೆ ಕೆಲಸ ಮಾಡುವ ಮೂಲಕ 'ಅಭಿನಯ ಶಾರದೆ' ಮಾದರಿಯಾದರು.
ಡಾ ರಾಜ್ ಕುಮಾರ್ ಜೊತೆ ನಟಿ ಜಯಂತಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅಣ್ಣಾವ್ರ ಸಹ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ಅಣ್ಣಾವ್ರ ಹಾದಿ ಅನುಸರಿಸಿದ ನಟಿ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿ ವಿಶೇಷ ಸ್ಥಾನ ಪಡೆದುಕೊಂಡರು.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಸೋಮವಾರ ಬೆಳಗ್ಗೆ (ಜುಲೈ 26) ಬೆಂಗಳೂರಿನ ನಿವಾಸದಲ್ಲಿಯೇ ನಿಧನರಾದರು.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. 1960, 70, 80ರ ದಶಕದ ಬಹುಬೇಡಿಕೆಯ ನಟಿಯಾಗಿದ್ದರು. ಜಯಂತಿ ಅವರಿಗೆ ಆರು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ, ಎರಡು ಬಾರಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಜಯಂತಿ ನಿಧನಕ್ಕೆ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್, ದೊಡ್ಡಣ್ಣ, ಗಿರಿಜಾ ಲೋಕೇಶ್, ನಿರ್ದೇಶಕ ಭಾರ್ಗವ, ಶಿವರಾಂ ಸೇರಿದಂತೆ ಅನೇಕರು ಸಂತಾಪ ಸೂಚಿಸಿದರು.


Click it and Unblock the Notifications











