ಅವಳೇ ನನ್ನ ಹೆಂಡ್ತಿ ಖ್ಯಾತಿಯ ಹಿರಿಯ ನಿರ್ದೇಶಕ ಎಸ್ ಉಮೇಶ್ ನಿಧನ.
ಅವಳೇ ನನ್ನ ಹೆಂಡತಿ, ಪ್ರೇಮ ಪರೀಕ್ಷೆ, ಬನ್ನಿ ಒಂದ್ಸಲ ನೋಡಿ, ಸಿಡಿದೆದ್ದ ಗಂಡು, ದಾಯಾದಿ, ತುಂಬಿದ ಮನೆ, ಹೀಗೆ ಕನ್ನಡ ಚಿತ್ರರಂಗಕ್ಕೆ 24 ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕ ಎಸ್.ಉಮೇಶ್ ಇಂದು ನಿಧನರಾಗಿದ್ದಾರೆ. ಬನಶಂಕರಿಯ ಚಿತಾಗಾರದಲ್ಲಿ ಇಂದು ಇವರ ಅಂತ್ಯಕ್ರಿಯೆ ನಡೆಯಲಿದೆ.
1974ರಲ್ಲಿ ಚಿತ್ರರಂಗವನ್ನು ಪ್ರವೇಶಿಸಿದ್ದ ಎಸ್ ಉಮೇಶ್ ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಸಂಕಲನಕಾರನಾಗಿ ಕೂಡ ದುಡಿದರು. ಆ ನಂತರ 1988ರಲ್ಲಿ ಕಾಶಿನಾಥ್ ಅಭಿನಯದ ಅವಳೇ ನನ್ನ ಹೆಂಡ್ತಿ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿಯನ್ನು ಪಡೆದಿದ್ದರು ಉಮೇಶ್. ಅವಳೇ ನನ್ನ ಹೆಂಡ್ತಿ ಆ ಕಾಲಕ್ಕೆ ಜನ ಮನ ಗೆದ್ದಿತ್ತು. ಎಸ್.ಉಮೇಶ್ ಅವರಿಗೆ ಅಪಾರವಾದ ಹೆಸರನ್ನು ತಂದು ಕೊಟ್ಟಿತ್ತು. ಇಷ್ಟೇ ಅಲ್ಲದೇ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ರಿಮೇಕ್ ಕೂಡ ಆಗಿತ್ತು. ತಮಿಳಿನಲ್ಲಿ ಎಸ್ ಉಮೇಶ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದರು. ಇನ್ನು. ಹಿಂದಿಯಲ್ಲಿ ಅವಳೇ ನನ್ನ ಹೆಂಡ್ತಿ ಚಿತ್ರದ ರಿಮೇಕ್ನಲ್ಲಿ ಅಮೀರ್ ಖಾನ್, ಕಾಶಿನಾಥ್ ನಿರ್ವಹಿಸಿದ್ದ ಪಾತ್ರವನ್ನು ನಿರ್ವಹಿಸಿದ್ದರು.

ಕನ್ನಡ ಚಿತ್ರರಂಗಕ್ಕೆ ಅಖಂಡ 48 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದ ಎಸ್ ಉಮೇಶ್ ಮೂರು ಚಿತ್ರಗಳನ್ನು ಖುದ್ದು ನಿರ್ಮಾಣವನ್ನು ಮಾಡಿದ್ದರು. ಆ ಪೈಕಿ ಧೀರೇಂದ್ರ ಗೋಪಾಲ್, ವಿನೋದ್ ರಾಜ್ ಮತ್ತು ಶ್ರುತಿ ಅಭಿನಯಿಸಿದ್ದ ಬನ್ನಿ ಒಂದ್ಸಲ ನೋಡಿ ಚಿತ್ರ ಇವರ ಕೀರ್ತಿಯನ್ನು ಇನ್ನೂ ಹೆಚ್ಚಿಸಿತ್ತು. ಈ ಚಿತ್ರಕ್ಕೆ ಆ ಕಾಲದಲ್ಲಿಯೇ 7.50 ಲಕ್ಷ ಸಾಲ ಮಾಡಿಕೊಂಡಿದ್ದ ಎಸ್.ಉಮೇಶ್ ಬನ್ನಿ ಒಂದ್ಸಲ ನೋಡಿ ಚಿತ್ರವನ್ನು ಮಾರಾಟ ಮಾಡಲು ತುಂಬಾ ಕಷ್ಟವಾಯ್ತು ಎಂದು ಹಿಂದೊಮ್ಮೆ ಹೇಳಿಕೊಂಡಿದ್ದರು.
ಕೊರೊನಾ ಸಮಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಎಸ್.ಉಮೇಶ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಯಾರಾದರೂ ಸಹಾಯ ಮಾಡಿ ಎಂದು 2021ರಲ್ಲಿ ಅಂಗಲಾಚಿದ್ದರು. ಒಂದು ವರ್ಷ ಮೂರು ತಿಂಗಳಿಂದ ಡಯಾಲಿಸಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲಿಯೇ ವೈದ್ಯರು ನನ್ನನ್ನು ನೋಡಿಕೊಂಡಿದ್ದಾರೆ. ಒಂದು ವೇಳೆ ನನಗೆ ಡಯಾಲಿಸಿಸ್ ಶುರುವಾದರೆ ತುಂಬಾ ತೊಂದರೆ ಆಗುತ್ತೆ ಎಂದು ಹೇಳಿದ್ದ ಎಸ್ ಉಮೇಶ್ ಚಿತ್ರರಂಗದಲ್ಲಿ ಈಗ ಹಳಬರಿಗೆ ಬೆಲೆ ಇಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು. ಕಿಡ್ನಿ ಸಮಸ್ಯೆಯಿಂದ ನಾನು ಬಳಲಿ ಬೆಂಡಾಗಿದ್ದೇನೆ, ಐದು ದಿನಕ್ಕೆ ಒಂದು ಇಂಜೆಕ್ಷನ್ ಪಡೆಯಬೇಕಿದೆ, ಅದಕ್ಕೆ ಎರಡು ಸಾವಿರ ಖರ್ಚಾಗುತ್ತೆ ಯಾರಾದರೂ ದಾನಿಗಳು ಸಹಾಯ ಮಾಡುವುದಾದರೆ ನಾನು ಅದನ್ನು ಖಂಡಿತಾ ಸ್ವೀಕರಿಸುತ್ತೇನೆ ಎಂದು ಮನವಿಯನ್ನು ಉಮೇಶ್ ಮಾಡಿಕೊಂಡಿದ್ದರು.
ಉಮೇಶ್ ಅವರ ಸಂಕಷ್ಟಕ್ಕೆ ಆಗ ಲಹರಿ ಮ್ಯೂಸಿಕ್ ಸಂಸ್ಥೆಯ ಮನೋಹರ್ ನಾಯ್ಡು ಮತ್ತು ಲಹರಿ ವೇಲು ಉಮೇಶ್ ಅವರಿಗೆ ನೆರವಾಗಿದ್ದರು. ಒಂದು ಲಕ್ಷ ಹಣವನ್ನು ನೀಡಿದ್ದರು. ಹರ್ಷಿಕಾ ಪೊಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಕೂಡ ಸಹಾಯ ಮಾಡಿದ್ದರು. ಹೀಗೆ ಬದುಕಿನ ಸಂಧ್ಯಾಕಾಲದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಎಸ್.ಉಮೇಶ್ ಇಂದು ನಿಧನರಾಗಿದ್ಧಾರೆ. ಎಸ್, ಉಮೇಶ್ ಅವರ ನಿಧನಕ್ಕೆ ಚಿತ್ರರಂಗದ ಕೆಲವೇ ಕೆಲವರು ಸಂತಾಪವನ್ನು ಸೂಚಿಸಿದ್ದಾರೆ.


Click it and Unblock the Notifications











