''ಪ್ಯಾನ್ ಇಂಡಿಯಾ ನಂಬ್ಕೊಂಡು ನಿರ್ಮಾಪಕರೆಲ್ಲ ಹಾಳಾಗಿ ಹೋಗ್ತಿದ್ದೀವಿ''- ಗಂಡುಗಲಿ ಕೆ.ಮಂಜು..!
''ಪ್ಯಾನ್ ಇಂಡಿಯಾ ನಮ್ಮನ್ನು ಉದ್ಧಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡ್ತಾವ್ರೆ'' ಎಂದು ನಾಲ್ಕು ವರ್ಷದ ಹಿಂದೆ ದಾರ್ಶನಿಕರಾದ ಜಗ್ಗೇಶ್ ಅವರು ಹೇಳಿದ್ದರು. ಆಗ ಈ ಮಾತನ್ನು ಯಾರು ಒಪ್ಪಲಿಲ್ಲ.
ಯಾಕೆಂದರೆ.. ಕೆ.ಜಿ.ಎಫ್ ಭ್ರಮೆಯಲ್ಲಿ ಎಲ್ಲರೂ ವಾಲಾಡುತ್ತಿದ್ದರು. ಕನ್ನಡ ಚಿತ್ರರಂಗವನ್ನು ಇನ್ಯಾರು ತಡೆಯಲು ಸಾಧ್ಯವಾಗಲ್ಲ ಎಂದು ಕಂಡ...ಕಂಡಲ್ಲಿ..ಎದೆಯುಬ್ಬಿಸಿ ಅನೇಕರು ತಿರುಗಾಡುತ್ತಿದ್ದರು. ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಗೊತ್ತಿರದಂತೆ ಮಾತಾನಾಡಿದ್ದರು. ಆದರೆ ವಾಸ್ತವ ಯಾವತ್ತಿದ್ದರೂ ವಾಸ್ತವ. ಒಂದು ವರ್ಗದ ಜನಸಮೂಹವನ್ನು ನಂಬಿಸಿ ಭ್ರಮೆಯಲ್ಲಿ ತೇಲುವಂತೆ ಮಾಡುವುದು ಎಷ್ಟು ಸುಲಭವೋ, ವಾಸ್ತವವನ್ನೂ ಅರ್ಥ ಮಾಡಿಸುವುದು ಕೂಡ ಅಷ್ಟೇ ಕಷ್ಟ. ಇದೆಲ್ಲದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಪರಿಸ್ಥಿತಿ ಕಣ್ಮುಂದೆಯೇ ಇದೆ. ಈ ಪರಿಸ್ಥಿತಿಯ ಬಗ್ಗೆಯೇ ಮೊನ್ನೆ ಕನ್ನಡದ ನಿರ್ಮಾಪಕ ಕೆ.ಮಂಜು ಕಳವಳ ವ್ಯಕ್ತಪಡಿಸಿದ್ದಾರೆ.

ಹೌದು, ಕೆ.ಮಂಜು.. ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು . ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ಹೀರೋಗಳ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದ್ದು.
ಇಂಥಾ ಕೆ.ಮಂಜು ಇತ್ತೀಚೆಗೆ ಕನ್ನಡದ ಹಿರಿಯ ನಟಿ ಕೆ.ಮಂಜು ಚಿತ್ರದ ಟೀಸರ್ ಬಿಡುಗಡೆಯನ್ನು ಮಾಡಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಟೀಸರ್ ಮೆಚ್ಚಿ ಚಿತ್ರತಂಡಕ್ಕೆ ಶುಭವನ್ನೂ ಕೋರಿದರು. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯನ್ನೂ ಹಿಡಿದಿದ್ದಾರೆ, ಪ್ಯಾನ್ ಇಂಡಿಯಾ ಸಂಪ್ರದಾಯದ ಬಗ್ಗೆ ಕಿಡಿಯನ್ನೂ ಕಾರಿದ್ದಾರೆ.

ಹೌದು, ಅಸಲಿಗೆ ಚಿತ್ರಮಂದಿರದಲ್ಲಿ ಕೂತು ಸಿನಿಮಾ ನೋಡುವುದು ತುಂಬಾ ಸುಲಭ. ಆದರೆ ಚಿತ್ರವೊಂದರ ನಿರ್ಮಾಣದ ಹೊರೆಯ ಭಾರ ಏನೆಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತಿರುತ್ತೆ. ಚಿತ್ರ ನೋಡಿ ಸಾಂಗ್.. ಫೈಟ್.. ಕಾಮಿಡಿ.. ಎಲ್ಲದಕ್ಕೂ ಸೈ ಎನ್ನುವ ಪ್ರೇಕ್ಷಕ ಚಿತ್ರ ಗೆದ್ದಾಗ ಆ ಚಿತ್ರದ ಗಳಿಕೆಯನ್ನೂ ನೋಡಿ ಹುಬ್ಬೇರಿಸುತ್ತಾನೆ. ಆದರೆ ನಿರ್ಮಾಪಕನ ನೋವನ್ನಾಗಲಿ.. ಖರ್ಚಿನ ಬಗ್ಗೆಯಾಗಲಿ .. ಕಣ್ಣಾಯಿಸೋದಿಲ್ಲ. ಅದು ಪ್ರೇಕ್ಷಕನಿಗೆ ಬೇಕಿಲ್ಲ ಕೂಡ. ಆದರೂ.. ಅವರ ಕಷ್ಟ-ನಷ್ಟವನ್ನು ಅನೇಕ ನಿರ್ಮಾಪಕರು ಹೇಳಿಕೊಳ್ಳುತ್ತಾರೆ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ 'ಹಗ್ಗ' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಕೆ.ಮಂಜು ಪ್ಯಾನ್ ಇಂಡಿಯಾ ನಂಬ್ಕೊಂಡು ಅನೇಕ ನಿರ್ಮಾಪಕರು ಹಾಳಾಗುತ್ತಿದ್ದಾರೆ ಎಂದಿದ್ದಾರೆ. ಕೆ.ಜಿ.ಎಫ್ ಬಂದು ಹೋಗಿದ್ದೇ ಹೋಗಿದ್ದು ಇರೋ ಬರೋರೆಲ್ಲ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಕನಸು ಕಾಣಲು ಶುರು ಮಾಡಿದ್ದಾರೆ ಎಂದಿದ್ದಾರೆ. ಕನಸು ಕಾಣುವುದು ತಪ್ಪಲ್ಲ ಆದರೆ ಎಲ್ಲ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕಲ್ಲ ಎಂಬ ಪ್ರಶ್ನೆಯನ್ನು ಕೆ.ಮಂಜು ಮಾಡಿದ್ದಾರೆ. ನಂಬಬೇಡಿ ಯಾರನ್ನೂ ನಂಬಬೇಡಿ ಕನ್ನಡವನ್ನು ಮಾತ್ರ ನಂಬಿ ಎಂದಿದ್ಧಾರೆ. ಪ್ಯಾನ್ ಇಂಡಿಯಾ ಅಂದರೆ ಯಾರು ಹತ್ತು ಪೈಸೆಯನ್ನೂ ಕೊಡಲ್ಲ ಎಂದಿದ್ದಾರೆ ಕೆ,ಮಂಜು.

ಪ್ಯಾನ್ ಇಂಡಿಯಾ ಎಂಬ ಪದದಿಂದ ಅಡ್ಡ ಪರಿಣಾಮದಿಂದ ನಿರ್ಮಾಪಕರು ಹೈರಾಣಾಗಿದ್ದಾರೆ ಎನ್ನುವ ಕೆ.ಮಂಜು, ಕನ್ನಡದಲ್ಲಿ ಪ್ರತಿಯೊಬ್ಬ ಡೈರೆಕ್ಟರ್ ಮಾತ್ ಎತ್ತಿದ್ರೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀನಿ ಅಂತಾರೆ. ಆದರೆ, ಅದಕ್ಕೆ ಬಜೆಟ್ ಹಾಕೋರು ಯಾರು..? ಎಂಬ ಮರು ಪ್ರಶ್ನೆ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಎಲ್ಲ ನಿರ್ಮಾಪಕರು ತಯಾರಿರುವುದಿಲ್ಲ. ಹೀಗಾಗಿಯೇ.. ನಿರ್ಮಾಪಕರು ಸಿನಿಮಾ ಮಾಡ್ಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಾರೆ ಎಂದು ಕೂಡ ಹೇಳಿದ್ದಾರೆ.
ಇನ್ನೂ ಪ್ಯಾನ್ ಇಂಡಿಯಾ ಸಿನಿಮಾ ನಂಬ್ಕೊಂಡು ನಿರ್ಮಾಪಕರು ಹಾಳಾಗುತ್ತಿದ್ದಾರೆ ಎಂದಿರುವ ಕೆ.ಮಂಜು, ಅದೆಷ್ಟೋ ಡೈರೆಕ್ಟರ್ಗಳಿಗೆ ಕೆಲಸವೇ ಗೊತ್ತಿರೋದಿಲ್ಲ. ಆದರೂ ಸಿನಿಮಾ ಮಾಡ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ನಿರ್ದೇಶಕದ ಕಾರ್ಯಕ್ಷಮತೆಯನ್ನೂ ಪ್ರಶ್ನೆ ಮಾಡಿದ್ದಾರೆ. ಕೆಲಸ ಗೊತ್ತಿಲ್ಲದಿದ್ದಾಗ ಬಜೆಟ್ ಜಾಸ್ತಿ ಆಗುತ್ತದೆ. ಅದರ ನೇರ ಎಫೆಕ್ಟ್ ನಿರ್ಮಾಪಕರಿಗೂ ಆಗುತ್ತೆ ಎಂದು ಕೂಡ ಹೇಳಿರುವ ಕೆ.ಮಂಜು ಹೇಳಿದ ಬಜೆಟ್ ಒಂದು, ಸಿನಿಮಾ ಮುಗಿಸೋದು ಇನ್ನೂ ಒಂದು ಬಜೆಟ್ ಅಂದಾಗ, ಸಹಜವಾಗಿಯೇ ತೊಂದರೆ ಆಗುತ್ತೆ ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.

ಸದ್ಯಕ್ಕೆ ಕನ್ನಡ ಚಿತ್ರರಂಗದ ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಈ ಮನದ ಮಾತುಗಳನ್ನಾಲಿಸಿದ ನಂತರ, ಗಾಂಧಿನಗರದಲ್ಲಿ ಅನೇಕರು ಪ್ಯಾನ್ ಇಂಡಿಯಾ ಮತ್ತು ಅದರಿಂದ ಆಗುವ ಲಾಭ- ನಷ್ಟದ ವಿಚಾರವನ್ನು ತೆಗೆದುಕೊಂಡು ಚರ್ಚೆಯನ್ನು ಮಾಡುತ್ತಿದ್ದಾರೆ. ಕೆಲವರು ಕೆ.ಮಂಜು ನಿರ್ಮಾಣದ ಅವರ ಮಗ ಶ್ರೇಯಸ್ ಮಂಜು ಮತ್ತು ಮಲಯಾಳಿ ಸುಂದರಿ ಪ್ರಿಯಾ ವಾರಿಯರ್ ಅಭಿನಯದ ವಿಷ್ಣು ಪ್ರಿಯ ಚಿತ್ರ ಬಿಡುಗಡೆ ಆಯಿತಾ ಎಂದು ಪ್ರಶ್ನೆಯನ್ನೂ ಮಾಡುತ್ತಿದ್ಧಾರೆ.


Click it and Unblock the Notifications











