ದರ್ಶನ್ ಸಿನಿಮಾದ ಅಂದ ಹೆಚ್ಚಿಸಲಿದೆ ಬಾಲಿವುಡ್ ಸಂಸ್ಥೆ
ದರ್ಶನ್ ನಟಿಸುತ್ತಿರುವ 'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಯೋಜನೆ ಸಿನಿಮಾ ತಂಡದ್ದು.
ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೆಲವೇ ದಿನಗಳಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭಿಸಲಿದೆ. ಕೊರೊನಾ ಲಾಕ್ಡೌನ್ ನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರಕತೆಯನ್ನು ಇನ್ನಷ್ಟು ತಿದ್ದಿ-ತೀಡಿ ಕತೆಗೆ ಹೆಚ್ಚಿನ ಹೊಳಪು ನೀಡಿದ್ದಾರೆ.
ಹಾಗಾಗಿ, ಸಿನಿಮಾವನ್ನು ಹೆಚ್ಚು ರಿಚ್ ಆಗಿ ನಿರ್ಮಿಸುವ ಸಕಲ ತಯಾರಿ ನಡೆಸಿದೆ ಚಿತ್ರತಂಡ. ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿ 'ಪ್ರೆಸೆಂಟ್' ಮಾಡುವ ಯೋಚನೆಯೂ ಸಿನಿಮಾ ತಂಡಕ್ಕೆ ಇದೆ ಎನ್ನಲಾಗುತ್ತಿದೆ.

ರಾಜವೀರ ಮದಕರಿ ನಾಯಕಕ್ಕೆ ವಿಫ್ಎಕ್ಸ್
'ರಾಜವೀರ ಮದಕರಿ ನಾಯಕ' ಐತಿಹಾಸಿಕ ಸಿನಿಮಾ ಆಗಿರುವ ಕಾರಣ ಸಾಕಷ್ಟು ಯುದ್ಧ ಸನ್ನಿವೇಶಗಳು, ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿದೆ. ಗ್ರಾಫಿಕ್ಸ್ ಬಳಕೆ ಸಹ ಹೆಚ್ಚಿಗೆ ಇದೆ. ಸಿನಿಮಾಕ್ಕೆ ಗುಣಮಟ್ಟದ ವಿಎಫ್ಎಕ್ಸ್ ಪರಿಣಾಮ ನೀಡಲು ಬಾಲಿವುಡ್ನ ಪ್ರತಿಷ್ಠಿತ ಎನ್ವೈ ವಿಎಫ್ಎಕ್ಸ್ ಸಂಸ್ಥೆಯನ್ನು ಗೊತ್ತು ಮಾಡಿದ್ದಾರೆ ನಿರ್ಮಾಪಕರು.

ಹಲವು ಬಾಲಿವುಡ್ ಸಿನಿಮಾಗಳಿಗೆ ಕೆಲಸ
ಬಾಜಿರಾವ್ ಮಸ್ತಾನಿ, ಪ್ರೇಮ್ ರಥನ್ ಧನ್ ಪಾಯೋ, ಫೋರ್ಸ್ 2, ತಮಿಳಿನ ಮರ್ಸೆಲ್ ಸಿನಿಮಾಗಳಿಗೆ ವಿಎಫ್ಎಕ್ಸ್ ನೀಡಿದ್ದ ವಿಎಫ್ಎಕ್ಸ್ ವಾಲಾ ಸಂಸ್ಥೆಯು ದರ್ಶನ್ ನಟನೆಯ 'ರಾಜವೀರ ಮದಕರಿ ನಾಯಕ' ಸಿನಿಮಾಕ್ಕೆ ವಿಎಫ್ಎಕ್ಸ್ ನೀಡಲಿದೆ.

ಅಜಯ್ ದೇವಗನ್ ಒಡೆತನದ ಸಂಸ್ಥೆ
ಈ ಎನ್ವೈ ವಿಎಫ್ಎಕ್ಸ್ ವಾಲಾ ಸಂಸ್ಥೆಯು ಬಾಲಿವುಡ್ನ ಖ್ಯಾತ ನಟ ಅಜಯ್ ದೇವಗನ್ ಅವರದ್ದಾಗಿದೆ. ಹಲವು ಪ್ರಮುಖ ಸಿನಿಮಾಗಳಿಗೆ ವಿಎಫ್ಎಕ್ಸ್ ನೀಡಿರುವ ಈ ಸಂಸ್ಥೆಗೆ 2016 ರಲ್ಲಿ 'ಶಿವಾಯ' ಸಿನಿಮಾದ ವಿಎಫ್ಎಕ್ಸ್ ಗಾಗಿ ರಾಷ್ಟ್ರ ಪ್ರಶಸ್ತಿ ಸಹ ದೊರೆತಿದೆ.
Recommended Video

ಸುಮಲತಾ ಸಹ ನಟಿಸುತ್ತಿದ್ದಾರೆ
'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ನಿರ್ಮಾಣ ರಾಕ್ಲೈನ್ ವೆಂಕಟೇಶ್ ಅವರದ್ದು. ಸಿನಿಮಾದಲ್ಲಿ ಮಂಡ್ಯ ಸಂಸದೆ ಸುಮಲತಾ ಸಹ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ಇನ್ನೂ ಅಂತಿಮವಾಗಿಲ್ಲ. ಜೊತೆಗೆ ಇನ್ನೂ ಕೆಲವು ನಟರ ಪಾತ್ರಗಳು ಸಹ ಅಂತಿಮವಾಗಬೇಕಿದೆ.


Click it and Unblock the Notifications











