ರಾಜ್ ಕುಟುಂಬದ ಕಷ್ಟದ ದಿನದಲ್ಲಿ ಕೈ ಹಿಡಿದಿದ್ದ ಸಿದ್ಧಾರ್ಥ್
Recommended Video
A lot can happen over a coffee... ಇದು ಕೆಫೆ ಕಾಫಿ ಡೇ ಟ್ಯಾಗ್ ಲೈನ್. ಕಾಫಿ ಕುಡಿಯುವಾಗ ಏನು ಬೇಕಾದರೂ, ಆಗಬಹುದು, ಆದರೆ, ಜೀವನದಲ್ಲಿ ಏನೇನೋ ಆಗಿಬಿಡುತ್ತದೆ.
ಕಾಫಿ ದೊರೆ, ಉದ್ಯಮಿ ಸಿದ್ದಾರ್ಥ್ ವಿಧಿವಶರಾಗಿದ್ದಾರೆ. ಸಾವಿರಾರೂ ಜನರಿಗೆ ತಮ್ಮ ಕೆಫೆ ಕಾಫಿ ಸಂಸ್ಥೆಯ ಮೂಲಕ ಕೆಲಸ ನೀಡಿದ್ದ, ಇವರು ಈಗ ಬಾರದ ಲೋಕಕ್ಕೆ ಹೋಗಿದ್ದಾರೆ.
ಅಂದಹಾಗೆ, ಡಾ ರಾಜ್ ಕುಮಾರ್ ಕುಟುಂಬ ಹಾಗೂ ಸಿದ್ದಾರ್ಥ್ ನಡುವೆ ಒಳ್ಳೆಯ ಒಡನಾಟ ಇತ್ತು. ಅದಕ್ಕೆ ಕಾರಣ, ರಾಜ್ ಕುಟುಂಬದ ಕಷ್ಟದ ಸಮಯದಲ್ಲಿ ಸಿದ್ದಾರ್ಥ್ ನೆರವಿಗೆ ಬಂದಿದ್ದರು. ರಾಜ್ ಅಪಹರಣ ಆದಾಗ ವೀರಪ್ಪನ್ ನಿಂದ ಬಿಡಿಸಲು ತಮ್ಮ ಶಕ್ತಿ ಮೀರಿ ಸಿದ್ದಾರ್ಥ್ ಪ್ರಯತ್ನ ಮಾಡಿದ್ದರು.

ರಾಜ್ ಅಪಹರಣದ ಸಮಯದಲ್ಲಿ ಸಹಕಾರ
ಜುಲೈ 30, 2000 ಡಾ ರಾಜ್ ಕುಮಾರ್ ಅಪಹರಣವಾದ ದಿನ. ಈ ಸಮಯದಲ್ಲಿ ಕಾಡುಗಳ್ಳ ವೀರಪ್ಪನ್ ನಿಂದ ಅಣ್ಣಾವ್ರನ್ನ ಬಿಡಿಸಲು ಪ್ರಮುಖ ಪಾತ್ರ ವಹಿಸಿದ್ದವರು ಸಿದ್ದಾರ್ಥ್. ಆ ವೇಳೆ ಸಿದ್ದಾರ್ಥ್ ಮಾವ ಎಸ್ ಎಂ ಕೃಷ್ಣ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು. ಈ ಘಟನೆ ನಡೆದಾಗ ತಮಿಳುನಾಡಿನ ಸರ್ಕಾರದ ಸಹಾಯ ಪಡೆಯಲು ಸಿದ್ದಾರ್ಥ್ ನೆರವಾಗಿದ್ದರು.

ಕಷ್ಟದ ದಿನಗಳಲ್ಲಿ ಸಿದ್ಧಾರ್ಥ್ ಬೆಂಬಲ
ರಾಜ್ ಕುಮಾರ್ ಅಪಹರಣದ ದುಃಖದಲ್ಲಿ ಇದ್ದ ಇಡೀ ಕುಟುಂಬಕ್ಕೆ ಸಿದ್ಧಾರ್ಥ್ ಸಾಂತ್ವನ ಹೇಳಿದ್ದರು. ಪಾರ್ವತಮ್ಮ ಹಾಗೂ ರಾಜ್ ಪುತ್ರರಿಗೆ ಆ ಸಂದರ್ಭದಲ್ಲಿ ಅಗತ್ಯ ಇದ್ದ ಸಹಾಯ ಮಾಡಿದ್ದರು. ಚೆನ್ನೈಗೆ ಹೋಗಲು ಹೆಲಿಕಾಪ್ಟರ್ ವ್ಯವಸ್ಥೆ ಹಾಗೂ ರಜನಿಕಾಂತ್ ಸಹಾಯದಿಂದ ರಾಜ್ ಬಿಡುಗಡೆಗೆ ಪ್ರಯತ್ನಗಳನ್ನು ನಡೆಸಿದ್ದರು.

ಸಿದ್ಧಾರ್ಥ್ ಸುದ್ದಿ ಕೇಳಿ ಓಡಿ ಬಂದ ರಾಜ್ ಪುತ್ರರು
ನಿನ್ನೆ (ಜುಲೈ 30) ಸಿದ್ಧಾರ್ಥ್ ನಾಪತ್ತೆ ಆದ ವಿಷಯ ಬಂದಾಗ ರಾಜ್ ಪುತ್ರರು ಆಘಾತಗೊಂಡರು. ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಎಸ್ ಎಮ್ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನ ಸದಾಶಿವ ನಗರದಲ್ಲಿ ಪುನೀತ್ ರಾಜ್ ಕುಮಾರ್ ನಿವಾಸದ ಸಮೀಪದಲ್ಲೇ ಎಸ್ ಎಂ ಕೃಷ್ಣ ಅವರ ಮನೆ ಕೂಡ ಇದೆ.

ಪುನೀತ್ ರಾಜ್ ಕುಮಾರ್ ಸಂತಾಪ
ಸಿದ್ಧಾರ್ಥ್ ನಿಧನಕ್ಕೆ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. "ವಿ ಜಿ ಸಿದ್ಧಾರ್ಥ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖಿತನಾಗಿದ್ದೀನಿ. ನಮ್ಮ ಕಾಲದ ಮಹಾನ್ ಕ್ರಿಯಾತ್ಮಕ ಉದ್ಯಮಿ. ಕಾಫಿಯಿಂದ ಅನೇಕರಿಗೆ ಹೇಗೆ ಉದ್ಯೋಗವಕಾಶ ನೀಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಉದ್ಯಮಿಯಾಗಿ ಅವರ ಪಯಣ ಮತ್ತು ಚಾರಿಟಿಗಳಿಗಾಗಿ ಅವರು ಮಾಡಿದ ಕೆಲಸ ಯಾವಾಗಲು ನೆನಪಿನಲ್ಲಿ ಉಳಿಯುತ್ತೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











