ವಿಡಿಯೋ: ಸೀತಾ ಮಾತೆ ಅಪಹರಣ ದೃಶ್ಯ ನೋಡಿ ಕಣ್ಣೀರಿಟ್ಟ 'ರಾವಣ'!
ಕೊರೊನಾ ಲಾಕ್ಡೌನ್ನಿಂದಾಗಿ ಹಳೆಯ ಧಾರವಾಹಿಗಳನ್ನು ಮತ್ತೊಮ್ಮೆ ಟಿವಿಯಲ್ಲಿ ನೋಡುವ ಅವಕಾಶ ಲಭ್ಯವಾಗಿದೆ. ಆ ಕಾಲದ ಪ್ರಸಿದ್ಧ ಧಾರವಾಹಿ ರಾಮಾಯಣ ಮತ್ತು ಮಹಾಭಾರತಗಳು ಈಗಲೂ ಜನರನ್ನು ಸೆಳೆಯುತ್ತಿವೆ.
ರಮಾನಂದ ಸಾಗರ್ ನಿರ್ದೇಶಿತ ಶ್ರೀ ರಾಮಾಯಣ ಧಾರವಾಹಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದು, ಕೋಟ್ಯಂತರ ಜನರು ಧಾರವಾಹಿಯನ್ನು ವೀಕ್ಷಿಸುತ್ತಿದ್ದಾರೆ.
1987 ರಲ್ಲಿ ಪ್ರಸಾರ ಪ್ರಾರಂಭಿಸಿದ ಈ ಧಾರವಾಹಿಯಲ್ಲಿ ನಟಿಸಿದ್ದ ಬಹುತೇಕರು ಇಂದು ಕಾಲವೇ ಆಗಿ ಹೋಗಿದ್ದಾರೆ. ಉಳಿದವರು ಹಣ್ಣು-ಹಣ್ಣಾಗಿದ್ದಾರೆ. ಧಾರವಾಹಿಯಲ್ಲಿ 'ರಾವಣ' ಪಾತ್ರ ನಿರ್ವಹಿಸಿದ್ದ ಅರವಿಂದ ತ್ರಿವೇದಿ ಸಹ.
ತೀರಾ ವಯಸ್ಸಾಗಿರುವ ಅರವಿಂದ ತ್ರಿವೇದಿ ಅವರು ಈಗ ಮತ್ತೊಮ್ಮೆ ತಮ್ಮದೇ ಅಭಿನಯದ ಧಾರವಾಹಿಯನ್ನೇ ಅದೇ ದೂರದರ್ಶನದಲ್ಲಿ ಈಗ ಮತ್ತೆ ನೋಡುತ್ತಿದ್ದಾರೆ.

ತಾಮ್ಮದೇ ದೃಶ್ಯ ನೋಡಿ ಅತ್ತ ಅರವಿಂದ ತ್ರಿವೇದಿ
ಅರವಿಂದ ತ್ರಿವೇದಿ ಅವರು ತಾವೇ ಅಭಿನಯಿಸಿದ ಧಾರವಾಹಿಯ ದೃಶ್ಯವನ್ನು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ತಮ್ಮದೇ ಅಭಿನಯದ ದೃಶ್ಯ ಹಳೆಯ ನೆನಪುಗಳು ಒತ್ತಿಬಂದು ಕಣ್ಣು ತುಂಬಿ ಬಂದಿದೆ ವೃದ್ಧ ಅರವಿಂದ ತ್ರಿವೇದಿ ಅವರಿಗೆ.
ಸೀತಾ ಮಾತೆಯನ್ನು ಅಪಹರಿಸುವ ದೃಶ್ಯ
ರಾವಣ, ಸೀತಾ ಮಾತೆಯನ್ನು ಅಪಹರಿಸುವ ದೃಶ್ಯ ನೋಡಿ ಕಣ್ಣಲ್ಲಿ ನೀರು ಹಾಕಿಕೊಂಡಿದ್ದಾ ಅರವಿಂದ ತ್ರಿವೇದಿ, ಟಿವಿಯಲ್ಲಿ ಸೀತೆ ಪಾತ್ರಧಾರಿಯನ್ನು ಎಳೆದೊಯ್ಯುತ್ತಿರುವುದು ತಾವೇ ಎಂಬ ಅರಿವು ಅವರಿಗೆ ಇದೆಯೋ ಇಲ್ಲವೋ, ಸೀತೆಯ ಅವಸ್ಥೆಯನ್ನು ಕಂಡು ಅರವಿಂದ ತ್ರಿವೇದಿ ಕೈಮುಗಿದು ಭಾವುಕರಾಗಿದ್ದಾರೆ. ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

ಅರವಿಂದ ತ್ರಿವೇದಿ ಅವರದ್ದು ಅಜಾನುಭಾಹು ನಿಲುವು
ಅರವಿಂದ ತ್ರಿವೇದಿ ಅವರದ್ದು ಅಜಾನುಭಾಹು ನಿಲುವು, ಅಟ್ಟಹಾಸದ ನಗು, ದೊಡ್ಡ ಮೀಸೆ, ಆರ್ಭಟಿಸುವ ಕಂಠ, ದೈತ್ಯ ದೇಹಾಕಾರ, ಭಯಂಕರ ನಟನೆ. ಆದರೆ ಈಗ ತೀರಾ ಹಣ್ಣಾಗಿ ಬಿಟ್ಟಿದ್ದಾರೆ. ಮಾತು ಸರಿಯಾಗಿ ಹೊರಡುತ್ತಿಲ್ಲ.

ಹಲವು ಧಾರವಾಹಿಗಳು ಪುನಃ ಪ್ರಸಾರ ಆಗುತ್ತಿವೆ
ಲಾಕ್ಡೌನ್ ನಿಂದಾಗಿ ರಾಮಾಯಣ ಧಾರಾವಾಹಿಯನ್ನು ದೂರದರ್ಶನದಲ್ಲಿ ಪುನಃ ಪ್ರಸಾರ ಮಾಡಲಾಗುತ್ತಿದೆ. ರಾಮಾಯಣ ಧಾರವಾಹಿ ಕೃಪೆಯಿಂದ ದೂರದರ್ಶನ ಮತ್ತೆ ಬಾರ್ಕ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ರಾಮಾಯಣ ಮಾತ್ರವಲ್ಲದೆ, ಮಹಾಭಾರತ, ಶಕ್ತಿಮಾನ್ ಧಾರವಾಹಿಗಳೂ ಸಹ ಪುನಃ ಪ್ರಸಾರವಾಗುತ್ತಿವೆ.


Click it and Unblock the Notifications











