ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ರಾ ಕಿಚ್ಚ ಸುದೀಪ್ ಬಾಡಿಗಾರ್ಡ್?
ಸ್ಟಾರ್ ನಟರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ನಿಜಕ್ಕೂ ಕಷ್ಟ ಎನ್ನುವಂತಾಗಿದೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮುಗಿಬೀಳುವುದರಿಂದ ಸಹಜವಾಗಿಯೇ ಗೊಂದಲ ನಿರ್ಮಾಣವಾಗುತ್ತದೆ. ಹೈದರಾಬಾದ್ನಲ್ಲಿ 'ಪುಷ್ಪ'-2 ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಹೈದರಾಬಾದ್ ಘಟನೆ ಸ್ಟಾರ್ ನಟರಿಗೆ ಎಚ್ಚರಿಕೆ ಗಂಟೆ ಎನ್ನುವಂತಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಕಲಾವಿದರು, ವಿಐಪಿಗಳು ಅಂಗರಕ್ಷಕರು, ಬೌನ್ಸರ್ಗಳನ್ನು ನಿಯೋಜಿಸಿಕೊಳ್ಳುತ್ತಾರೆ. ಆದರೆ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಕೆಲವೊಮ್ಮೆ ಅಂಗರಕ್ಷಕರು, ಬೌನ್ಸರ್ಗಳು ತಾಳ್ಮೆ ಕಳೆದುಕೊಳ್ಳುತ್ತಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ 'ಮ್ಯಾಕ್ಸ್' ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು.

ದುರ್ಗದಲ್ಲಿ ಸುದೀಪ್ ಅವರನ್ನು ನೋಡಲು ದೊಡ್ಡ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾರ್ಯಕ್ರಮ ಮುಗಿಸಿ ಸುದೀಪ್ ಹೊರಟಾದ ಒಮ್ಮೆಲೆ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂ ತಳ್ಳಾಟ ನೂಕಾಟ ಉಂಟಾಗಿದೆ. ಈ ವೇಳೆ ಸುದೀಪ್ ಮೇಲೆ ಮುಗಿಬೀಳುತ್ತಿದ್ದವರನ್ನು ನಿಯಂತ್ರಿಸಲು ಬಾಡಿ ಗಾರ್ಡ್ ಕಿಚ್ಚ ಕಿರಣ್ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾದ ವೀಡಿಯೋವೊಂದು ವೈರಲ್ ಆಗುತ್ತಿದೆ.
ಸುದೀಪ್ ಅವರ ಬಾಡಿಗಾರ್ಡ್ ಆಗಿ ಬಹಳ ವರ್ಷಗಳಿಂದ ಕಿಚ್ಚ ಕಿರಣ್ ಕೆಲಸ ಮಾಡುತ್ತಿದ್ದಾರೆ. ಎಲ್ಲೇ ಹೋದರೂ ಬಂದರೂ ಅಭಿಮಾನಿಗಳನ್ನು ನಿಯಂತ್ರಿಸಿ, ಕಿಚ್ಚನಿಗೆ ದಾರಿ ಮಾಡಿಕೊಡುವುದು ಇದೇ ಕಿರಣ್. ಚಿತ್ರದುರ್ಗದ ಕಾರ್ಯಕ್ರಮಕ್ಕೆ ಸಾವಿರಾರು ಜನ ಜಮಾಯಿಸಿದ್ದರು. ಸಾಕಷ್ಟು ಬೌನ್ಸರ್ಸ್ ಕೂಡ ಸುದೀಪ್ ಬೆಂಗಾವಲಿಗೆ ಇದ್ದರು. ಆದರೂ ಅಭಿಮಾನಿಗಳನ್ನು ನಿಯಂತ್ರಿಸಲು ಕೊಂಚ ಕಷ್ಟ ಆಗಿರುವಂತೆ ಕಾಣುತ್ತಿದೆ.
ಹೀಗೆ ಬಾಡಿಗಾರ್ಡ್ಗಳು ತಾಳ್ಮೆ ಕಳೆದುಕೊಳ್ಳುವುದು ಹೊಸದೇನು ಅಲ್ಲ. ಅವರಿಗೆ ತಮ್ಮ ಜವಾಬ್ದಾರಿ ನಿಭಾಯಿಸುವುದು ಮಾತ್ರ ಮನಸ್ಸಿನಲ್ಲಿ ಇರುತ್ತದೆ. ಆದರೂ ಕೆಲವೊಮ್ಮೆ ಮಾನವೀಯತತೆ ಮರೆಯಬಾರದು. ತಮ್ಮ ಅಂಗರಕ್ಷಕರು ಮಾಡುವ ಇಂತಹ ಎಡವಟ್ಟುಗಳ ಬಗ್ಗೆ ಸ್ಟಾರ್ ಕಲಾವಿದರೇ ಕ್ಷಮೆ ಕೇಳಿರುವ ಉದಾಹರಣೆ ಕೂಡ ಇದೆ.
ಬೌನ್ಸರ್ಸ್ ಅಥವಾ ಬಾಡಿಗಾರ್ಡ್ಸ್ ಎಲ್ಲೆ ಮೀರಬಾರದು, ಒಂದು ವೇಳೆ ಈ ರೀತಿ ನಡೆದರೆ ಅವರನ್ನು ನಿಯೋಜಿಸಿಕೊಂಡವರದ್ದೇ ಜವಾಬ್ದಾರಿ ಎಂದು ಇತ್ತೀಚೆಗೆ ಹೈದರಾಬಾದ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 'ಪುಷ್ಪ'-2 ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ದುರಂತ ನಡೆದಿತ್ತು. ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟು ಆಕೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಾಲ್ತುಳಿತ ಪ್ರಕರಣ ಸಂಬಂಧ ನಟ ಅಲ್ಲು ಅರ್ಜುನ್ ಜೈಲಿಗೂ ಹೋಗಿ ಮಧ್ಯಂತರ ಜಾಮೀನು ಪಡೆದುಬಂದಿದ್ದಾರೆ. ಅಂದು ಸಾವಿರಾರು ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು. ಅವರನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸ್ ಸಿಬ್ಬಂದಿಯಿಂದ ಸಾಧ್ಯವಾಗಿರಲಿಲ್ಲ. ಇನ್ನು ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬಂದಾಗ ಒಂದಷ್ಟು ಬೌನ್ಸರ್ಸ್ ಜೊತೆಗೆ ಬಂದಿದ್ದರು.
ಗುಂಪಿನಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ ಸದಸ್ಯರಿಗೆ ರಕ್ಷಣೆ ನೀಡಲು ಬೌನ್ಸರ್ಸ್ ಪ್ರಯತ್ನಿಸಿದ್ದರು. ಈ ವೇಳೆ ತಳ್ಳಾಟ ನೂಕಾಟ ಜೋರಾಗಿತ್ತು. ಪೊಲೀಸರು ಕರ್ತವ್ಯ ನಿಭಾಯಿಸಲು ಕೂಡ ಬೌನ್ಸರ್ಸ್ ಅವಕಾಶ ಕೊಡದೇ ವರ್ತಿಸಿದರು ಎನ್ನುವ ಆರೋಪ ಕೇಳಿಬಂದಿದೆ. ಆಂಟೋನಿ ಎಂದು ಬೌನ್ಸರ್ ಬಂಧನವೂ ಆಗಿದೆ. ಒಟ್ಟಾರೆ ಸ್ಟಾರ್ ನಟರು ಇಂತಹ ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ.
ಸದ್ಯ ಕಿಚ್ಚ ಕಿರಣ್ ಅಭಿಮಾನಿಗಳನ್ನು ಚದುರಿಸಲು ಅವರ ಮೇಲೆ ಹಲ್ಲೆ ನಡೆಸಿದ್ರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ವೀಡಿಯೋ ವೈರಲ್ ಆಗಿ ಸದ್ದು ಮಾಡ್ತಿದೆ. ಈ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ. ಕೆಲವರು ಈ ವೀಡಿಯೋ ವೈರಲ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಭಿಮಾನಿಗಳೇ ದೇವರು ಎನ್ನುವ ಚಿತ್ರರಂಗದಲ್ಲಿ ಇದು ಸರೀನಾ? ಎಂದು ಕೇಳುತ್ತಿದ್ದಾರೆ.


Click it and Unblock the Notifications











