ಕೊರೊನಾ ಸಂಕಷ್ಟ: ಹುಟ್ಟೂರಿನ ನೆರವಿಗೆ ಧಾವಿಸಿದ 'KGF' ನಿರ್ಮಾಪಕ
'KGF' ಸಿನಿಮಾ ಮೂಲಕ ದೇಶ ವಿದೇಶದಲ್ಲಿ ಖ್ಯಾತಿಗಳಿಸಿರುವ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಇದೀಗ ಕೊರೊನಾ ಸಂಕಷ್ಟದ ನೆರವಿಗೆ ಧಾವಿಸಿದ್ದಾರೆ. ತಮ್ಮ ಹುಟ್ಟೂರಾದ ಮಂಡ್ಯದ ಜನರ ನೆರವಿಗೆ ನಿಂತಿದ್ದಾರೆ ವಿಜಯ್ ಕಿರಗಂದೂರು.
ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಸಹಾಯಹಸ್ತ ಚಾಚಿದ್ದಾರೆ. ಇತ್ತೀಚಿಗಷ್ಟೆ ನಟ ಶ್ರೀಮರಳಿ, ಉಪೇಂದ್ರ, ಶೋಭರಾಜ್ ಸೇರಿದಂತೆ ಅನೇಕರು ನೆರವು ನೀಡಿದ್ದಾರೆ. ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ಮಂಡ್ಯದ ಕೊರೊನಾ ಸೋಂಕಿತರಿಗೆ ಅನುಕೂಲವಾಗುವಂತೆ, 500 ಎಲ್ ಪಿ ಎಂ ಸಾಮರ್ಥ್ಯದ ಆಕ್ಸಿಜನ್ ಘಟಕ ಅಥವಾ ಸಕಲ ವ್ಯವಸ್ಥೆಯನ್ನು ಒಳಗೊಂಡ 50 ಐಸಿಯು ಬೆಡ್ ವ್ಯವಸ್ಥೆ ಮಾಡಿಸಿಕೊಡಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ತಮ್ಮ ನಿರ್ಮಾಣದ ಹೊಂಬಾಳೆ ಗ್ರೂಪ್ ಮೂಲಕ ಹುಟ್ಟೂರಿಗೆ ನೆರವಾಗುವುದಾಗಿ ಪತ್ರ ಬರೆದಿದ್ದಾರೆ. ಈ ಸೌಲಭ್ಯವನ್ನು ಮಂಡ್ಯದ ಜನರು ಉಪಯೋಗಿಸಿಕೊಳ್ಳುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಡೀ ದೇಶ ಕೊರೊನಾದಿಂದ ತತ್ತರಿಸಿ ಹೋಗಿದೆ. ಸೋಂಕಿತರು ಆಸ್ಪತ್ರೆ, ಬೆಡ್ ಮತ್ತು ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮೊದಲು ವಿಜಯ್ ಕಿರಗಂದೂರು ತಮ್ಮ ಉದ್ಯೋಗಿಗಳಿಗೆ ಅವರ ಕುಟುಂಬದವರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಇದೀಗ ಮಂಡ್ಯದ ಜನರ ನೆರವಿಗೆ ಧಾವಿಸಿದ್ದಾರೆ.
ಬಾಲಿವುಡ್ ನಲ್ಲೂ ಸಾಕಷ್ಟು ಮಂದಿ ನೆರವಿಗೆ ನಿಂತಿದ್ದಾರೆ. ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ ದಂಪತಿ, ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕರು ಕೋವಿಡ್ ಕೇಂದ್ರಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ.


Click it and Unblock the Notifications











