ಸಿನಿ ಕಾರ್ಮಿಕರ ನೆರವಿಗೆ ನಿಂತ ಹೊಂಬಾಳೆ: 32 ಲಕ್ಷ ರೂ. ನೀಡಿದ ವಿಜಯ್ ಕಿರಗಂದೂರ್
ಕೊರೊನಾ ಎರಡನೇ ಅಲೆಯಿಂದ ಭಾರತ ತತ್ತರಿಸಿ ಹೋಗಿದೆ. ಲಾಕ್ ಡೌನ್ ನಿಂದ ಅನೇಕರ ಜೀವನ ಬೀದಿಗೆ ಬಂದಿದೆ. ಅದರಲ್ಲೂ ದಿನಗೂಲಿ ಕಾರ್ಮಿಕರ ಸಂಕಷ್ಟ ಹೇಳತೀರದಾಗಿದೆ. ಕೆಲಸವಿಲ್ಲದೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಿನಿ ಕಾರ್ಮಿಕರ ಬದುಕು ಕೂಡ ಸಂಕಷ್ಟದಲ್ಲಿದೆ. ಸಿನಿಮಾ ಕೆಲಸ ಸ್ಥಗಿತವಾಗಿ ತಿಂಗಳುಗಳೇ ಆಗಿದೆ. ಕೆಲಸವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ಕಷ್ಟದಲ್ಲಿರುವ ಕನ್ನಡ ಸಿನಿಮಾ ಕಾರ್ಮಿಕರಿಗೆ ಅನೇಕರು ನೆರವು ನೀಡುತ್ತಿದ್ದಾರೆ. ಸುದೀಪ್, ಉಪೇಂದ್ರ ಮತ್ತು ಯಶ್ ನೆರವು ನೀಡಿದ ಬೆನ್ನಲೇ ಈಗ ಹೊಂಬಾಳೆ ಫಿಲಂಸ್ ಕೂಡ ಸಹಾಯಕ್ಕೆ ನಿಂತಿದೆ.
ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಕನ್ನಡ ಸಿನಿ ಕಾರ್ಮಿಕರಿಗೆ 32 ಲಕ್ಷ ರೂ. ನೀಡಿದ್ದಾರೆ. ಕಾರ್ಮಿಕ ಒಕ್ಕೂಟದ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸಹಾಯ ಆಗುವಂತೆ ಹಣ ನೀಡಿದ್ದಾರೆ. ಒಟ್ಟು 21 ವಿಭಾಗದ 3200 ಕಾರ್ಮಿಕರಿಗೆ ತಲಾ 1 ಸಾವಿರ ಸಿಗಲಿದೆ.

ವಿಜಯ್ ಕಿರಗಂದೂರ್ ಕಾರ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಾಗೂ ಚಲನಚಿತ್ರ ಒಕ್ಕೂಟದ ಕಾರ್ಯದರ್ಶಿ ರವಿಂದ್ರನಾಥ್ ಧನ್ಯವಾದ ತಿಳಿಸಿದ್ದಾರೆ. ಇನ್ನೂ ಅನೇಕರು ವಿಜಯ್ ಕಿರಗಂದೂರ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ವಿಜಯ್ ಕಿರಗಂದೂರ್ ಕೊರೊನಾ ಸಂಕಷ್ಟಕ್ಕೆ ನೆರವಾಗುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಹುಟ್ಟೂರು ಮಂಡ್ಯಗೆ 50 ಲಕ್ಷ ದೇಣಿಗೆ ನೀಡಿದ್ದರು. ಅಲ್ಲದೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸುವುದಾಗಿ ಹೇಳಿದ್ದಾರೆ. ಕೋವಿಡ್ ವಿರುದ್ಧ ಹೋರಾಡಲು ವಿಜಯ್ ಕಿರಗಂದೂರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
Recommended Video
ಇತ್ತೀಚಿಗಷ್ಟೆ ರಾಕಿಂಗ್ ಯಶ್ ಸಿನಿ ಕಾರ್ಮಿಕರಿಗೆ 5 ಸಾವಿರ ನೆರವು ನೀಡಿದ್ದಾರೆ. ಯಶ್ 5 ಸಾವಿರ ನೀಡುವುದಾಗಿ ಹೇಳಿ ಎರಡು ದಿನಗಳಲ್ಲೇ ಕಾರ್ಮಿಕರ ಖಾತೆಗೆ 5 ಸಾವಿರ ಹಣ ತಲುಪಿತ್ತು.


Click it and Unblock the Notifications











