ವಿಜಯ ಪ್ರಕಾಶ್ ಬಳಿ ಕುಮಾರಸ್ವಾಮಿ ಬೇಡಿಕೆಯಿಟ್ಟ ಹಾಡಿದು
ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪೂರ್ಣ ಪ್ರಮಾಣದ ರಾಜಕಾರಣಿ. ರಾಜಕಾರಣಕ್ಕೆ ಬರುವ ಮುನ್ನ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ವಿತರಕರಾಗಿ, ಪ್ರದರ್ಶಕರಾಗಿ ನಂತರ ನಿರ್ಮಾಪಕರಾಗಿ ಸದಭಿರುಚಿಯ ಚಿತ್ರಗಳನ್ನ ನೀಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರಿಗೆ ಹಳೆಯ ಹಾಡುಗಳು ಅಂದ್ರೆ ತುಂಬಾ ಇಷ್ಟ. ರಾತ್ರಿ ಮಲಗುವಾಗಲೂ ಹಳೆಯ ಹಾಡುಗಳನ್ನ ಕೇಳುತ್ತಾ ಎಲ್ಲಾ ಜಂಜಾಟಗಳನ್ನ ಮರೆಯುತ್ತಾರಂತೆ.

ಇಂತಹ ಕುಮಾರಸ್ವಾಮಿಗೆ ಒಂದು ನೆಚ್ಚಿನ ಹಾಡಿದೆ. ಹಲವು ವೇದಿಕೆಗಳಲ್ಲಿ ಈ ಹಾಡನ್ನ ಸ್ವತಃ ಕುಮಾರಸ್ವಾಮಿ ಅವರೇ ಬೇಡಿಕೆಯಿಟ್ಟು ಹಾಡಿಸಿದ್ದಾರೆ. ಇದೀಗ, ಇಂತಹದ್ದೇ ಸಂದರ್ಭಕ್ಕೆ ಕಾರಣವಾಯಿತು ಮೈಸೂರಿನ ದಸರಾದ 'ಯುವ ದಸರಾ' ಕಾರ್ಯಕ್ರಮ.
ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಂದ ರಸಮಂಜರಿ ಕಾರ್ಯಕ್ರಮವಿತ್ತು. ಈಗಿನ ಸೂಪರ್ ಹಿಟ್ ಹಾಡುಗಳನ್ನ ಹಾಡಿದ ವಿಜಯ ಪ್ರಕಾಶ್ ನೆರದಿದ್ದ ಅಭಿಮಾನಿಗಳನ್ನ, ಪ್ರೇಕ್ಷಕರನ್ನ ಕುಣಿಸಿದ್ದರು. ಇದೆಲ್ಲದರ ಮಧ್ಯೆ ವಿಶೇಷವಾಗಿ ಗಮನ ಸೆಳೆದಿದ್ದು ಈ ಹಾಡು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಒತ್ತಾಯದ ಮೆರೆಗೆ ವಿಜಯ ಪ್ರಕಾಶ್ ಅವರು 'ಒಳಿತು ಮಾಡು ಮನುಸಾ, ನೀ ಇರೋದು ಮೂರು ದಿವಸ' ಹಾಡನ್ನ ಹಾಡಿದರು.

ಮೊದಲನೇ ಸಲ ವಿಜಯ ಪ್ರಕಾಶ್ ಅವರು ಈ ಹಾಡನ್ನು ಹಾಡಿದರು. ಹಾಡು ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಅವರು, ಹಾಡನ್ನು ಮತ್ತೊಮ್ಮೆ ಹಾಡುವಂತೆ ವಿಜಯ್ ಪ್ರಕಾಶ್ ಅವರಲ್ಲಿ ಮನವಿ ಮಾಡಿಕೊಂಡರು. ಅಂತೆಯೇ ವಿಜಯ್ ಪ್ರಕಾಶ್ ಮತ್ತೊಮ್ಮೆ ಸಿಎಂಗಾಗಿ ತಮ್ಮ ಸುಮಧುರ ಕಂಠದಲ್ಲಿ ಈ ಹಾಡು ಹಾಡಿದರು.

ಈ ಹಾಡು ಹಾಡುತ್ತಿದ್ದಂತೆ ಕುಮಾರಸ್ವಾಮಿ ಅವರು ಭಾವುಕರಾದರು. ಕಣ್ಣಿನ ಅಂಚಿನಲ್ಲಿ ಕಣ್ಣೀರು ಬಂದು ನಿಂತಿತ್ತು. ಈ ಹಾಡಿಗೆ ಈ ಹಿಂದೆ ಕೂಡ ಕುಮಾರಸ್ವಾಮಿ ಅವರು ಭಾವುಕರಾಗಿರುವುದುಂಟು.


Click it and Unblock the Notifications











