"ಸುಮ್ನೆ ಎಲ್ರೂ ಪ್ಯಾನ್ ಇಂಡಿಯಾ ಅಂದ್ಬಿಡ್ತಾರೆ, ದರ್ಶನ್ ಅಣ್ಣನಿಗೆ ಸಿಕ್ಕ ಯಶಸ್ಸು ಕನ್ನಡಕ್ಕೆ ಸಿಕ್ಕಿದ್ದು": ರಾಘು
ಪ್ಯಾನ್ ಇಂಡಿಯಾ ಹಿಂದೆ ಬಿದ್ದು ಕೆಲವರು ಒಳ್ಳೆ ಸಿನಿಮಾ ಮಾಡ್ತಿಲ್ಲ ಎನ್ನುವ ಗೊಣಗಾಟ ಚಿತ್ರರಂಗದಲ್ಲಿ ಶುರುವಾಗಿದೆ. ಮೊದಲು ಒಳ್ಳೆ ಸಿನಿಮಾ ಮಾಡಿ. ಅದು ತಾನಾಗಿಯೇ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ. 5 ಭಾಷೆಯಲ್ಲಿ ಡಬ್ಬಿಂಗ್ ಮಾಡೋದು, ಎಲ್ಲಾ ಕಡೆ ಪ್ರಚಾರ ಮಾಡೋದು ಅಷ್ಟೇ ಅಲ್ಲ, ಒಳ್ಳೆ ಸಿನಿಮಾ ಮಾಡುವುದು ಅಗತ್ಯ.
'ಕಾಂತಾರ' ಹಾಗೂ 'ಕಾಟೇರ' ಯಶಸ್ಸು ಪ್ಯಾನ್ ಇಂಡಿಯಾ ಗುಂಗಿನಲ್ಲಿ ಇರುವವರನ್ನು ಬಡಿದೆಬ್ಬಿಸಿದಂತೆ ಕಾಣುತ್ತಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿದ್ದ 'ಕಾಂತಾರ' ಸಿನಿಮಾ ತಾನಾಗಿಯೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಸದ್ಯ 'ಕಾಟೇರ' ಸಿನಿಮಾ ಕೂಡ ಅದೇ ಹಾದಿಯಲ್ಲಿದೆ. ಕನ್ನಡದಲ್ಲಿ ಮಾತ್ರವೇ 190 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ನಡೀತಿದೆ. ನಮ್ಮದೇ ಮಣ್ಣಿನ ಕಥೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪರಭಾಷೆಯಿಂದ 'ಕಾಟೇರ' ಚಿತ್ರವನ್ನು ಡಬ್ ಮಾಡಿ ಕೊಡುವಂತೆ ಬೇಡಿಕೆ ಶುರುವಾಗಿದೆ. ಈಗಾಗಲೇ ತಮಿಳು, ತೆಲುಗು ಡಬ್ಬಿಂಗ್ ಕೆಲಸಗಳು ಭರದಿಂದ ಸಾಗಿದೆ. ಶೀಘ್ರದಲ್ಲೇ ಹೊರ ರಾಜ್ಯಗಳಲ್ಲಿ 'ಕಾಟೇರ'ನ ಕಾರುಬಾರು ನಡೆಯಲಿದೆ. ಇನ್ನು ರಾಜ್ಯದಲ್ಲಿ 25ನೇ ದಿನದತ್ತ 'ಕಾಟೇರ' ನಾಗಾಲೋಟ ಮುಂದುವರೆದಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ತೆರೆಕಂಡು ಪ್ರೇಕ್ಷಕರ ಮನಗೆದ್ದಿದೆ.
ನಟ ವಿಜಯ ರಾಘವೇಂದ್ರ 'ಕಾಟೇರ' ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. 'ಕನ್ನಡ ಪಿಕ್ಚರ್' ಯೂಟ್ಯೂಬ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. "ದರ್ಶನ್ ಅವರನ್ನು ನಾನು ಅಣ್ಣ ಎನ್ನುತ್ತೇನೆ. ಅವರ ಸಹೋದರನಾಗಿ ಹೇಳ್ತೀನಿ. 'ಕಾಟೇರ' ಸಿನಿಮಾ ಕನ್ನಡಕ್ಕೆ ಅಗತ್ಯವಾಗಿ ಬೇಕಾಗಿದ್ದ ಬೆಳವಣಿಗೆ. ಯಾವ ಕಡೆ ತಿರುಗಿದರೂ ಸುಮ್ಮನೆ ಪ್ಯಾನ್ ಇಂಡಿಯಾ, ಪ್ಯಾನ್ ಇಂಡಿಯಾ ಅಂತಾರೆ. ಪ್ಯಾನ್ ಇಂಡಿಯಾ ಅನ್ನೋದು ಅಷ್ಟು ಸುಲಭವಾದ ವಿಚಾರ ಅಲ್ಲ. ಅಷ್ಟು ಹಗರುವಾಗಿ ಬಳುವಂತ ಪದ ಅಲ್ಲ. ಒಂದು ಸಿನಿಮಾ ನಮ್ಮ ಸಿನಿಮಾ ಆಗಬೇಕು. ನಮ್ಮ ಊರಿನ ಜನ ನೋಡಬೇಕು, ನಮ್ಮ ಊರಲ್ಲಿ ಅದರ ಗಳಿಕೆ ಹೆಚ್ಚಾಗಿರಬೇಕು. ಕಾಟೇರ ಆ ರೀತಿ ಸದ್ದು ಮಾಡ್ತಿದೆ"

"ಕಾಟೇರ ರೀತಿಯ ಸಿನಿಮಾ ಮಾಡಿದ ರಾಕ್ಲೈನ್ ಸರ್ಗೆ ಅಭಿನಂದನೆ ಹೇಳ್ತೀನಿ. ಇದನ್ನು ಸಾಧ್ಯ ಮಾಡಿದ ತರುಣ್ ಸುಧೀರ್ಗೆ ಥ್ಯಾಂಕ್ಸ್ ಹೇಳ್ತೀನಿ. ತರುಣ್ ಸುಧೀರ್ ಬಗ್ಗೆ ಅಪಾರವಾದ ನಂಬಿಕೆ ಇದೆ. ಕೆಲಸದ ಮೇಲಿನ ಆತನ ಶ್ರದ್ಧೆ, ಕಲಾವಿದರನ್ನು ತೆರೆಮೇಲೆ ಹೇಗೆ ತೋರಿಸಬೇಕು ಎನ್ನುವುದನ್ನು ಆತ ತಿಳಿದುಕೊಂಡಿದ್ದಾನೆ. ಜೊತೆಗೆ ದರ್ಶನ್ ಅಣ್ಣ, ಇತ್ತೀಚೆಗೆ ಮಾಡುತ್ತಿರುವ ಸಿನಿಮಾಗಳು. ಒಂದೊಂದು ಚಿತ್ರದಲ್ಲೂ ಒಂದೊಂದು ವಿಚಾರಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. 'ಕಾಟೇರ' ಚಿತ್ರದಲ್ಲಿ ನಮ್ಮದೇ ಮಣ್ಣಿನ ವಿಚಾರ ಇದೆ. ದರ್ಶನ್ ಅಣ್ಣನಿಗೆ ಸಿಕ್ಕ ಈ ಯಶಸ್ಸು, ಕನ್ನಡಿಗರಿಗೆಲ್ಲರಿಗೂ ಸಿಕ್ಕ ಯಶಸ್ಸು" ಎಂದಿದ್ದಾರೆ.
ಇನ್ನು ವಿಜಯ್ ರಾಘವೇಂದ್ರ ನಟನೆಯ 'ಕೇಸ್ ಆಫ್ ಕೊಂಡಾಣ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜಾಕಿ ಭಾವನಾ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ವಿಶ್ವ ಜಿತ್ ರಾವ್ ಛಾಯಾಗ್ರಹಣ, ಗಗನ್ ಬಡೇರಿಯಾ ಸಂಗೀತ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಈ ಚಿತ್ರಕ್ಕಿದೆ. 'ಕೊಂಡಾಣ' ಎನ್ನುವ ಕಾಲ್ಪನಿಕ ಸ್ಥಳದಲ್ಲಿ ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ.
ಜನವರಿ 26ಕ್ಕೆ 'ಕೇಸ್ ಆಫ್ ಕೊಂಡಾಣ' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. 'ಸೀತಾರಾಮ್ ಬೆನೊಯ್' ನಂತರ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.


Click it and Unblock the Notifications











