Second Case of Seetharam Trailer: ಮತ್ತೊಂದು ಕೇಸ್, ಮತ್ತೊಮ್ಮೆ ಸೀತಾರಾಮ್ ಥ್ರಿಲ್ಲಿಂಗ್ ಜರ್ನಿ
5 ವರ್ಷಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ 'ಸೀತಾರಾಮ್ ಬಿನೋಯ್' ಸಿನಿಮಾ ಟಿವಿಗೆ ಬಂದು ಸದ್ದು ಮಾಡಿತ್ತು. ಈಗ ಆ ಚಿತ್ರದ ಸೀಕ್ವೆಲ್ ತೆರೆಗೆ ಬರಲು ಸಜ್ಜಾಗಿದೆ. ಮತ್ತೊಮ್ಮೆ ಖಡಕ್ ಪೊಲೀಸ್ ಆಫೀಸರ್ ಸೀತಾರಾಮ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದಾರೆ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಟ್ರೈಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ.
ಈ ಬಾರಿ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ 'ಸೀತಾರಾಮ್ ಬಿನೋಯ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಬಾರಿ ಕೂಡ ಕೈಜೋಡಿಸಿದೆ. ಮತ್ತೊಂದು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ತಯಾರಾಗಿದ್ದಾರೆ. ಸಾತ್ವಿಕ್ ಹೆಬ್ಬಾರ್ ಜೊತೆ ಸೇರಿ ಸ್ವತಃ ನಿರ್ದೇಶಕರೇ ಸಿನಿಮಾ ನಿರ್ಮಾಣ ಮಾಡಿದ್ದಾರೆ.

'ಸೀತಾರಾಮ್ ಬಿನೋಯ್' ಬಳಿಕ ವಿಜಯ್ ಹಾಗೂ ದೇವಿ ಪ್ರಸಾದ್ ಶೆಟ್ಟಿ 'ಕೇಸ್ ಆಫ್ ಕೊಂಡಾಣ' ಸಿನಿಮಾ ಕಟ್ಟಿಕೊಟ್ಟಿದ್ದರು. ಆ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 3ನೇ ಬಾರಿ ಈ ಜೋಡಿ ಪ್ರೇಕ್ಷಕರಿಗೆ ಥ್ರಿಲ್ ಕೊಡಲು ಬರ್ತಿದೆ. ಟೈಟಲ್ ಹೇಳುವಂತೆ ಈ ಬಾರಿ ಮತ್ತೊಂದು ನಿಗೂಢ ಪ್ರಕರಣ ಭೇದಿಸಲು ಸೀತಾರಾಮ್ ಮುಂದಾಗಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ.
ವಿಜಯ್ ರಾಘವೇಂದ್ರ ಜೊತೆಗೆ ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಚಿತ್ರದಲ್ಲಿ ನಟಿಸಿರುವುದು ಗೊತ್ತಾಗುತ್ತಿದೆ. ಹಿಂದಿನ ಸಿನಿಮಾದಲ್ಲಿ ಹಾವೇರಿಯಿಂದ ಶಿವಮೊಗ್ಗದ ಆನೆಗಡ್ಡೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗುವ ಪೊಲೀಸ್ ಅಧಿಕಾರಿ ಸೀತಾರಾಮ್, ಅಲ್ಲಿನ ದರೋಡೆ ಮತ್ತು ಕೊಲೆಗಳ ಹಿಂದಿನ ದುಷ್ಟರ ಹೆಡೆಮುರಿ ಕಟ್ಟುವ ಕಥೆಯಿತ್ತು. ಮುಂದುವರೆದ ಭಾಗದಲ್ಲಿ ಕೂಡ ಅದೇ ಛಾಯೆ ಕಂಡು ಬರುತ್ತದೆ.
ಟ್ರೈಲರ್ ಪ್ರತಿ ಫ್ರೇಮ್ ಅದೇ ಫೀಲ್ ಕೊಡುವಂತೆ ಭಾಸವಾಗುತ್ತದೆ. ಹೋಟೆಲ್ ಜಯಣ್ಣ ಮಿಸ್ಸಿಂಗ್ ಅಂತೆ ಸರ್ ಎನ್ನುವ ಡೈಲಾಗ್ ಮೂಲಕ ಟ್ರೈಲರ್ ಶುರುವಾಗುತ್ತದೆ. ನಡುವೆ ಒಂದು ಲವ್ ಸ್ಟೋರಿ. ಸೈಕೊಪಾತ್ ಆರ್ಭಟ, ಪ್ರಕರಣ ಭೇದಿಸುವುದು ಕಗ್ಗಂಟಾಗುತ್ತಾ ಹೋಗುತ್ತದೆ. ಮುಂದೇನಾಗುತ್ತದೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಮತ್ತಷ್ಟು ಇಂಟೆನ್ಸ್ ಆಗಿ ಈ ಬಾರಿ ಕಥೆ ಹೇಳುವ ಪ್ರಯತ್ನ ನಡೀತಿದೆ.
ಫೆಬ್ರವರಿ 20ರಂದು 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಸಂಗೀತ ಚಿತ್ರಕ್ಕಿದೆ. ಕ್ರೈಂ ಸಸ್ಪೆನ್ಸ್ ಜೊತೆಗೆ ಇದು ಮ್ಯೂಸಿಕಲ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಅಷ್ಟರಮಟ್ಟಿಗೆ ಚಿತ್ರದಲ್ಲಿ ಸಂಗೀತಕ್ಕೆ ಅವಕಾಶ ಇದೆ ಎನ್ನಲಾಗ್ತಿದೆ. ರವಿಚಂದ್ರನ್ ಎಂಬುವವರು ಸಿನಿಮಾ ವಿತರಣೆಗೆ ಮುಂದಾಗಿದ್ದಾರೆ.
ಕಳೆದ ವರ್ಷ 'FIR 6 to 6', 'ಸ್ವಪ್ನ ಮಂಟಪ' ಹಾಗೂ 'ರಿಪ್ಪನ್ ಸ್ವಾಮಿ' ಎಂಬ ಸಿನಿಮಾಗಳಲ್ಲಿ ವಿಜಯ್ ರಾಘವೇಂದ್ರ ಮಿಂಚಿದ್ದರು. ಹೊಸ ವರ್ಷದ ಆರಂಭದಲ್ಲೇ ಸೀತಾರಾಮ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇನ್ನು ಎರಡ್ಮೂರು ಸಿನಿಮಾಗಳು ಅವರ ಕೈಯಲ್ಲಿದೆ. ಸೀತಾರಾಮ್ ಕೇಸ್ಗಳು ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿದೆ. ನಟಿಸೋಕೆ ನಾನು ಸಿದ್ಧ ಎಂದು ವಿಜಯ್ ರಾಘವೇಂದ್ರ ತಿಳಿಸಿದ್ದಾರೆ.
ಕನ್ನಡದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಟ್ರೆಂಡ್ ನಡೀತಿದೆ. 'ಕೇಸ್ ಆಫ್ ಕೊಂಡಾಣ', 'ಶಾಖಾಹಾರಿ', 'ಅಜ್ಞಾತವಾಸಿ', 'ರಕ್ಕಸಪುರದೋಳ್' ಕೆಲ ಸಿನಿಮಾಗಳು ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟು ಗೆದ್ದಿವೆ. ಅದೇ ಸಾಲಿಗೆ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಕೂಡ ಸೇರಿಕೊಳ್ಳುವ ಸುಳಿವು ಸಿಕ್ತಿದೆ.


Click it and Unblock the Notifications











