ಡಾ ವಿಜಯ ಸಂಕೇಶ್ವರ ಬಯೋಪಿಕ್: ಫಸ್ಟ್ ಲುಕ್ ಜೊತೆ ನಾಯಕನ ಪರಿಚಯ
ಕನ್ನಡದಲ್ಲಿ ಬಯೋಪಿಕ್ ಚಿತ್ರಗಳು ಬಹಳ ಕಡಿಮೆ ಎಂಬ ಮಾತಿದೆ. ಕನ್ನಡದ ಯಾವ ನಿರ್ದೇಶಕ-ನಿರ್ಮಾಪಕರೂ ಯಶಸ್ವಿ ವ್ಯಕ್ತಿಗಳು, ಮಾದರಿ ವ್ಯಕ್ತಿಗಳ ಜೀವನವನ್ನು ಸಿನಿಮಾ ಮಾಡಲು ಮನಸ್ಸು ಮಾಡ್ತಿಲ್ಲ. ಈ ಕುರಿತು ಫಿಲ್ಮಿಬೀಟ್ ಕನ್ನಡ ವೆಬ್ಸೈಟ್ ವರದಿ ಸಹ ಮಾಡಿತ್ತು. ಇದೀಗ, ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಕುರಿತು ಸಿನಿಮಾ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಕರ್ನಾಟಕದ ಖ್ಯಾತ ಉದ್ಯಮಿ, ಪತ್ರಕರ್ತ ಡಾ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿ ಸಿನಿಮಾ ಮಾಡಬಹುದು ಎಂಬ ಚರ್ಚೆ ಬಹಳ ವರ್ಷಗಳಿಂದಲೂ ಸುದ್ದಿಯಲ್ಲಿತ್ತು. ಕೊನೆಗೂ ವಿಜಯ ಸಂಕೇಶ್ವರ ಜೀವನವನ್ನು ಸಿನಿಮಾ ಮಾಡುವ ಸಮಯ ಹತ್ತಿರ ಬಂದಿದೆ. ಸಂಕೇಶ್ವರ ಬಯೋಪಿಕ್ ಸಿನಿಮಾ ಅಧಿಕೃತವಾಗಿ ಪ್ರಕಟವಾಗಿದ್ದು, ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಸಂಕೇಶ್ವರವರು ಚಿತ್ರಕ್ಕೆ 'ವಿಜಯಾನಂದ' ಎಂದು ನಾಮಕರಣ ಮಾಡಿದ್ದು, ನಾಯಕನಟನ ಪರಿಚಯ ಸಹ ಆಗಿದೆ.
ಆಗಸ್ಟ್ 2 ರಂದು ವಿಜಯ ಸಂಕೇಶ್ವರ ಅವರು ಹುಟ್ಟುಹಬ್ಬ. ಈ ವಿಶೇಷ ದಿನದ ಪ್ರಯುಕ್ತ ವಿಜಯಾನಂದ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣಗೊಂಡಿದೆ. ವಿಶೇಷ ಅಂದ್ರೆ ಈ ಚಿತ್ರವನ್ನು ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. 'ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್' ಸಂಸ್ಥೆಯೊಂದಿಗೆ ನಿರ್ಮಾಪಕರಾಗಿ ಆನಂದ್ ಸಂಕೇಶ್ವರ ಸ್ಯಾಂಡಲ್ವುಡ್ಗೆ ಪರಿಚಯ ಆಗ್ತಿದ್ದಾರೆ. ಮುಂದೆ ಓದಿ...

ವಿಜಯ ಸಂಕೇಶ್ವರ ರೋಚಕ ಕಥೆ
1976ರಲ್ಲಿ ಒಂದು ಟ್ರಕ್ನಿಂದ ತಮ್ಮ ಜೀವನ ಆರಂಭಿಸಿದ ವಿಜಯ ಸಂಕೇಶ್ವರ (ವಿಆರ್ಎಲ್) ಇಂದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಾಮಾನ್ಯ ಯುವಕನೊಬ್ಬ ಮಾಧ್ಯಮ, ಸಾರಿಗೆ ಉದ್ಯಮ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿ ವ್ಯಕ್ತಿಯಾಗಿ ಹೇಗೆ ಬೆಳೆದು ನಿಂತರು ಎನ್ನುವುದನ್ನು ತೆರೆಮೇಲೆ ತರಲು ವಿಆರ್ಎಲ್ ಸಂಸ್ಥೆ ಮುಂದಾಗಿದೆ. ವಿಜಯವಾಣಿ ಪತ್ರಿಕೆ, ವಿಆರ್ಎಲ್ ಸಾರಿಗೆ ಸಂಸ್ಥೆ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ಸ್ಥಾಪಿಸಿದ್ದು ಇವರೇ.

ರಿಷಿಕಾ ಶರ್ಮಾ ನಿರ್ದೇಶನ
ಕಳೆದ ಎಂಟು ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿರುವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಟ್ರಂಕ್ ಎಂಬ ಹಾರರ್ ಥ್ರಿಲ್ ಸಿನಿಮಾ ಗಮನ ಸೆಳೆದಿದ್ದರು ರಿಷಿಕಾ. ಮೇಕಿಂಗ್ ಹಾಗೂ ರೋಚಕ ಸ್ಕ್ರಿಪ್ಟ್ ಮೂಲಕ ರಿಷಿಕಾ ಸಿನಿಮಾ ಮಾಡುವ ಶೈಲಿ ವಿಶೇಷವಾಗಿ ಆಕರ್ಷಿತವಾಗಿತ್ತು. ಇದೀಗ, ಎರಡನೇ ಸಿನಿಮಾದಲ್ಲೇ ವಿಜಯ ಸಂಕೇಶ್ವರರ ಜೀವನ ಕಥೆ ಹೇಳಲು ಹೊರಟಿರುವ ರಿಷಿಕಾ ಬಹುದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಂಕೇಶ್ವರ ಪಾತ್ರದಲ್ಲಿ ನಿಹಾಲ್
ತೆರೆಮೇಲೆ ವಿಜಯ ಸಂಕೇಶ್ವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲಕ್ಕೂ ಉತ್ತರ ಸಿಕ್ಕಾಗಿದೆ. ರಿಷಿಕಾ ಶರ್ಮಾ ನಿರ್ದೇಶಿಸಿದ್ದ 'ಟ್ರಂಕ್' ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದ ನಿಹಾಲ್, ವಿಜಯಾನಂದ ಚಿತ್ರದಲ್ಲಿ ವಿಜಯಸಂಕೇಶ್ವರ ಆಗಿ ಬಣ್ಣ ಹಚ್ಚುತ್ತಿದ್ದಾರೆ. ಗಂಗಾ, ಭಾರತಿ ಧಾರಾವಾಹಿಗಳಲ್ಲಿ ನಟಿಸಿದ್ದು, ಟಿವಿ ಮಾಧ್ಯಮದಲ್ಲಿ ನಿರೂಪಕರಾಗಿ ಕೆಲಸ ನಿರ್ವಹಿಸಿರುವ ಅನುಭವವೂ ಹೊಂದಿದ್ದಾರೆ. ಚೌಕ ಸಿನಿಮಾದಲ್ಲಿಯೂ ಸಣ್ಣದೊಂದು ಪಾತ್ರ ಮಾಡಿದ್ದರು.

ಅನುಭವಿ ತಂತ್ರಜ್ಞರ ತಂಡ
ವಿಜಯಾನಂದ ಚಿತ್ರಕ್ಕಾಗಿ ಸುಮಾರು ತಿಂಗಳಿನಿಂದ ಪೂರ್ವ ತಯಾರಿ ನಡೆದಿದೆ. ಅನುಭವಿ ಮತ್ತು ನುರಿತ ತಂತ್ರಜ್ಞರೊಂದಿಗೆ ವಿಜಯಾನಂದ ಚಿತ್ರ ಕೆಲಸ ಆರಂಭಿಸಲು ಸಜ್ಜಾಗಿದೆ. ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಕೆಲಸ ಮಾಡಿರುವ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಒದಗಿಸಲಿದ್ದಾರೆ. ಕಡಲ ತೀರದ ಭಾರ್ಗವ, ಮಹಿರಾ ಖ್ಯಾತಿಯ ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ. ಹೇಮಂತ್ ಕುಮಾರ್ ಡಿ ಸಂಕಲನ, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಹಾಗೂ ರಘು ನಿಡುವಳ್ಳಿ ಸಂಭಾಷಣೆ ಒಳಗೊಂಡಿದೆ. ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಲಾಗಿದ್ದು, 2022ರಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ಉದ್ಯಮಿ ಮಾತ್ರವಲ್ಲ, ರಾಜಕಾರಣಿ
ಕರ್ನಾಟಕದ ರಾಜಕೀಯದಲ್ಲಿ ವಿಜಯ ಸಂಕೇಶ್ವರ ಸಹ ಹಿರಿಯರು ಹಾಗೂ ಹಳಬರು. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಂಕೇಶ್ವರ ಬಿಜೆಪಿ ಬಿಟ್ಟು ಕನ್ನಡ ನಾಡು ಪಾರ್ಟಿ ಸ್ಥಾಪಿಸಿದ್ದರು. ನಂತರ ಕರ್ನಾಟಕ ಜನತಾ ಪಕ್ಷ ಸೇರಿದರು. ಆಮೇಲೆ ಯಡಿಯೂರಪ್ಪರ ಜೊತೆ ಬಿಜೆಪಿ ಸೇರಿದರು. ಇದುವರೆಗೂ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.


Click it and Unblock the Notifications











