ಕನ್ನಡದ ಸಿನಿಮಾದಲ್ಲಿ ನಟಿಸಿದ್ದಾಗ ನಡೆದಿದ್ದ ಘಟನೆ ನೆನಪಿಸಿಕೊಂಡ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ತಮಿಳಿನ ಅತ್ಯಂತ ಬ್ಯುಸಿ ನಟ. ಸಣ್ಣ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಸೇತುಪತಿ ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಬೇಡಿಕೆಯ ನಟರಾಗಿದ್ದಾರೆ.
ವಿಜಯ್ ಸೇತುಪತಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಮೊನ್ನೆಯಷ್ಟೆ ತಮಿಳು ಮಾಸ್ಟರ್ಶೆಫ್ ಶೋ ಉದ್ಘಾಟನೆಗೆ ರಾಮನಗರಕ್ಕೆ ಬಂದಿದ್ದ ವಿಜಯ್ ಸೇತುಪತಿ ಕನ್ನಡದ ಒಂದು ಸಿನಿಮಾದಲ್ಲಿ ತಾವು ನಟಿಸಿದ್ದು, ಹಾಗೂ ಅದರಿಂದ ತಮಗೆ ಸಿಕ್ಕ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದೊಂದಿಗಿನ ನಂಟು ನೆನಪಿಸಿಕೊಂಡಿರುವ ವಿಜಯ್ ಸೇತುಪತಿ, ''1998ರಲ್ಲಿ ನಾನು ಕೆಲವು ಗೆಳೆಯರೊಂದಿಗೆ ಬೆಂಗಳೂರಿಗೆ ಬಂದಿದ್ದೆ. ಆಗ ನಾನು ಕಬ್ಬನ್ ಪಾರ್ಕ್ಗೆ ಭೇಟಿ ನೀಡಿದ್ದೆ. ಅಲ್ಲಿ ಸಾಕಷ್ಟು ಯುವ ಜೋಡಿಗಳನ್ನು ನೋಡಿ ನಾವು ಹೊಟ್ಟೆ ಉರಿದುಕೊಂಡಿದ್ದೆವು, ನಮಗೆ ಯಾರೂ ಗರ್ಲ್ಫ್ರೆಂಡ್ ಇಲ್ಲವೆಂದು'' ಎಂದು ಹಳೆಯ ನೆನಪಿಗೆ ಜಾರಿದ್ದರು ವಿಜಯ್ ಸೇತುಪತಿ.

ನನ್ನ ರೂಮ್ನಿಂದ ಕಬ್ಬನ್ ಪಾರ್ಕ್ ಕಾಣುತ್ತದೆ: ವಿಜಯ್ ಸೇತುಪತಿ
ಈಗ ನಾನು ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಹೋಟೆಲ್ ರೂಮ್ಗೆ ಕಬ್ಬನ್ ಪಾರ್ಕ್ ಕಾಣುತ್ತದೆ. ಆಗಿನ ಸನ್ನಿವೇಶಕ್ಕೂ ಈಗಿನದಕ್ಕೂ ಬಹಳ ದೊಡ್ಡ ಅಂತರ ಇದೆ. ನಾನು ವ್ಯಕ್ತಿಯಾಗಿ ಸಾಕಷ್ಟು ಬೆಳೆದಿದ್ದೇನೆ. ಕಬ್ಬನ್ ಪಾರ್ಕ್ ಅನ್ನು ನನ್ನ ಹೋಟೆಲ್ ರೂಮ್ನ ಕಿಟಕಿಯಿಂದ ನೋಡುವಾಗ ಹಳೆಯದೆಲ್ಲ ನೆನಪಾಗಿ ಅದ್ಭುತ ಅನುಭವವಾಯಿಯಿತು'' ಎಂದಿದ್ದಾರೆ ವಿಜಯ್ ಸೇತುಪತಿ.

2008ರಲ್ಲಿ ನಾನು ಕನ್ನಡ ಸಿನಿಮಾದಲ್ಲಿ ನಟಿಸಿದ್ದೆ: ವಿಜಯ್
2008ರಲ್ಲಿ ನಾನು ಕನ್ನಡ ಚಿತ್ರರಂಗ ಸೇರಬೇಕೆಂಬ ಆಸೆಯಿಂದ ಒಂದು ಕನ್ನಡ ಸಿನಿಮಾದಲ್ಲಿ ನಟಿಸಲು ಆರಂಭಿಸಿದೆ. ಆಗ ಸತತವಾಗಿ ಮೂರು ತಿಂಗಳ ಕಾಲ ಇಲ್ಲಿಯೇ ಇದ್ದೆ. ಆದರೆ ದುರಾದೃಷ್ಟವಶಾತ್ ಆ ಸಿನಿಮಾ ನಿಂತು ಹೋಯಿತು'' ಎಂದು ನೆನಪು ಮಾಡಿಕೊಂಡಿದ್ದಾರೆ ವಿಜಯ್.

ಪ್ರತಿದಿನವೂ ಅಭ್ಯಾಸ ಮಾಡುತ್ತಿದ್ದೆ: ವಿಜಯ್ ಸೇತುಪತಿ
''ನಾನು ಪ್ರತಿದಿನ ಸೆಟ್ಗೆ ಬೇಗ ಬಂದು ನನ್ನ ಸಂಭಾಷಣೆಯನ್ನು ಅಭ್ಯಾಸ ಮಾಡುತ್ತಿದ್ದೆ. ತಮಿಳು ಹಾಗೂ ಕನ್ನಡ ಉಚ್ಛಾರಣೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುವ ಕಾರಣ ನನಗೆ ಭಾಷೆ ಕಷ್ಟವಾಗುತ್ತಿತ್ತು. ಹಾಗಾಗಿ ನಾನು ಪ್ರತಿದಿನವೂ ಸೆಟ್ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಸಿನಿಮಾ ನಿಂತು ಹೋದಾಗ ಆ ಸಿನಿಮಾದ ಮ್ಯಾನೇಜರ್ ಒಬ್ಬ ನನಗೆ ಹೇಳಿದ್ದ ಮಾತು ನಿಜವಾಯ್ತು'' ಎಂದಿದ್ದಾರೆ ವಿಜಯ್ ಸೇತುಪತಿ.

ಆ ಮ್ಯಾನೇಜರ್ ಹೇಳಿದ ಮಾತು ನಿಜವಾಯ್ತು: ವಿಜಯ್
''ಹಲವು ಸ್ಟಾರ್ ನಟರು ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕ ಅವರ ವೃತ್ತಿ ಜೀವನದಲ್ಲಿ ಏಳಿಗೆ ಕಂಡಿದ್ದಾರೆ. ಹಾಗೆಯೇ ನಿನ್ನ ನಟನಾ ವೃತ್ತಿಯೂ ಈ ಸಿನಿಮಾದ ಬಳಿಕ ಏಳಿಗೆಯಾಗುತ್ತದೆ ಎಂದು ಆ ಮ್ಯಾನೇಜರ್ ಹೇಳಿದ್ದ. ನಾನು ಆತನ ಮಾತು ನಂಬಿರಲಿಲ್ಲ. ಆದರೆ ನಂತರ ಅವನ ಮಾತು ನಿಜವಾಯ್ತು'' ಎಂದಿದ್ದಾರೆ ವಿಜಯ್ ಸೇತುಪತಿ.
Recommended Video

ಎರಡು ವರ್ಷದ ಹಿಂದೆ ಅವಕಾಶ ಬಂದಿತ್ತು: ವಿಜಯ್
''ಎರಡು ವರ್ಷದ ಹಿಂದೆ ಕನ್ನಡ ಸಿನಿಮಾರಂಗದಿಂದ ಅವಕಾಶ ಬಂದಿತ್ತು. ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟ ಇದ್ದರು. ಆದರೆ ಆಗ ನಾನು ಇತರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೆ. ಆ ದೊಡ್ಡ ನಟನನ್ನು ನನಗಾಗಿ ಕಾಯುವಂತೆ ಹೇಳಲು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ನಾನು ಆ ಸಿನಿಮಾ ಆಫರ್ ಕೈಬಿಡಬೇಕಾಯಿತು'' ಎಂದಿದ್ದಾರೆ ವಿಜಯ್ ಸೇತುಪತಿ.


Click it and Unblock the Notifications











