"ದರ್ಶನ್ ಫ್ಯಾನ್ಸ್ ಅನಕ್ಷರಸ್ಥರು" ಎನ್ನುವವರಿಗೆ ವಿಜಯಲಕ್ಷ್ಮಿ ದರ್ಶನ್ ತಿರುಗೇಟು
ದರ್ಶನ್ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಚಿತ್ರತಂಡದ ಪರ ನಿಂತಿದ್ದಾರೆ. ಮೊದಲ ದಿನವೇ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ದರು. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ಪತಿಗೆ ವಿಜಯಲಕ್ಷ್ಮಿ ಮಾಹಿತಿ ತಲುಪಿಸಿದ್ದಾರೆ.
'ಡೆವಿಲ್' ಸಿನಿಮಾ ಪ್ರಚಾರದ ಭಾಗವಾಗಿ ವಿಜಯಲಕ್ಷ್ಮಿ ದರ್ಶನ್ ಸಂದರ್ಶನ ನೀಡಿದ್ದಾರೆ. ಡಿಕಂಪೆನಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಚಿತ್ರದ ನಾಯಕಿ ರಚನಾ ರೈ ಪ್ರಶ್ನೆಗಳಿಗೆ ವಿಜಯಲಕ್ಷ್ಮಿ ಉತ್ತರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಬಿಡುಗಡೆಯಾಗಿ ವೈರಲ್ ಆಗ್ತಿದೆ. ಸಾಕಷ್ಟು ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ವಿಜಯಲಕ್ಷ್ಮಿ ಮಾತನಾಡಿರುವುದು ಗೊತ್ತಾಗುತ್ತಿದೆ.

ದರ್ಶನ್ ಅಭಿಮಾನಿಗಳು, 'ಡೆವಿಲ್' ಸಿನಿಮಾ ಯಶಸ್ಸು, ಸೋಶಿಯಲ್ ಮೀಡಿಯಾ ಟ್ರೋಲ್ಸ್, ಮಾಧ್ಯಮಗಳ ಬರುವ ಸುದ್ದಿಗಳ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ದರ್ಶನ್ ಪತ್ನಿ ಆಗಿದ್ದರೂ ವಿಜಯಲಕ್ಷ್ಮಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಮಾಧ್ಯಮಗಳ ಸಂದರ್ಶನದಲ್ಲಿ ಭಾಗಿ ಆಗಿದ್ದು ಅಪರೂಪ ಅನ್ನಿಸುತ್ತದೆ. ಇದೇ ಮೊದಲ ಬಾರಿಗೆ ಹೀಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್, ಪರಸ್ಪರ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಈ ಬಗ್ಗೆ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಅನಕ್ಷರಸ್ಥರು ಎಂದು ಕೆಲವರು ಕಾಮೆಂಟ್ ಮಾಡಿರುವುದು ಇದೆ. ವಿಜಯಲಕ್ಷ್ಮಿ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. "ದರ್ಶನ್ ಅಭಿಮಾನಿಗಳಿಗೆ ಮಹಿಳೆಗೆ ಗೌರವ ಕೊಡುವುದು ಗೊತ್ತು. ಮಹಿಳೆಯರ ಜೊತೆ ಹೇಗೆ ವರ್ತಿಸಬೇಕು ಎನ್ನುವುದು ಗೊತ್ತು.. ನಮ್ಮ ಸೆಲೆಬ್ರೆಟಿಗಳ(ಅಭಿಮಾನಿಗಳ) ಬಳಿ ಹಣ ಸಂಗ್ರಹಿಸಿ ಒಂದು ಶಾಲೆ ಆರಂಭಿಸೋಣ. ಯಾರ್ಯಾರು ಅಭಿಮಾನಿಗಳನ್ನು ಅನಕ್ಷರಸ್ಥರು ಎನ್ನುತ್ತಾರೋ ಅವರನ್ನೇ ಕರೆತಂದು ಪಾಠ ಮಾಡೋಕೆ ಹೇಳೋಣ" ಎಂದು ವ್ಯಂಗ್ಯವಾಡಿದ್ದಾರೆ.
'ಡೆವಿಲ್' ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿ "ಬಹಳ ಖುಷಿಯಾಗುತ್ತಿದೆ. ದರ್ಶನ್ ಇಲ್ಲದೇ ಇದ್ರು ಅವ್ರ ಫ್ಯಾನ್ಸ್ ಚಿತ್ರವನ್ನು ಅವರನ್ನು ತಲೆಮೇಲೆ ಇಟ್ಕೊಂಡು ಮೆರೆಸುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ. ಆ ಸುದ್ದಿ ಗೊತ್ತಾದಾಗ ಅಚ್ಚರಿಯಾಗಿತ್ತು. ತಮ್ಮ ವೃತ್ತಿಯನ್ನು ದರ್ಶನ್ ದೇವರಿಗಿಂತ ಹೆಚ್ಚಾಗಿ ಪ್ರೀತಿಸ್ತಾರೆ. ಈ ಋಣ ತೀರಿಸೋಕೆ ಪದೇ ಪದೆ ಹುಟ್ಟಿ ಬರಬೇಕು ಅಂತಿರ್ತಾರೆ. ವಾರದಲ್ಲಿ 2 ಬಾರಿ ದರ್ಶನ್ ಫೋನ್ ಮಾಡ್ತಾರೆ. ಅವತ್ತು ಮುಖ್ಯವಾಗಿ 12 ಗಂಟೆಗೆ ಕರೆ ಮಾಡಿದ್ದರು. ಮೊದಲಿಗೆ ಕೇಳಿದ್ದು ವಿಜಿ ಹೇಗಿದೆ ಸಿನಿಮಾ? ಜನ ಮಜಾ ಮಾಡ್ತಿದ್ದಾರಾ? ಸಿನಿಮಾ ಹೆಂಗೆ ಬಂದಿದೆ? ನಿರ್ಮಾಪಕರು ಹ್ಯಾಪಿನಾ?" ಎಂದು ಕೇಳಿದ್ದಾಗಿ ವಿಜಯಲಕ್ಷ್ಮಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ನಾನು ಯಾವುದೇ ಕಾಮೆಂಟ್ಸ್ ಓದಲ್ಲ ಎಂದು ತಿಳಿಸಿದ್ದಾರೆ. "ನನ್ನ ಬಗ್ಗೆ ಮಾತಾಡಿದ್ರು ಅಫೆಕ್ಟ್ ಆಗಲ್ಲ.. ನನ್ನ ಮಗನ ಬಗ್ಗೆ ಮಾತನಾಡಿದ್ರು ಅಫೆಕ್ಟ್ ಆಗಲ್ಲ.. 90ರಷ್ಟು ಜನ ಪ್ರೀತಿ ತೋರಿಸುತ್ತಾರೆ. ಅಷ್ಟು ಸಾಕು.. ನೆಗೆಟಿವ್ ಕಾಮೆಂಟ್ಸ್ ಓದಲ್ಲ.. ಐ ಡೋಂಟ್ ಕೇರ್" ಎಂದು ವಿಜಯಲಕ್ಷ್ಮಿ ಹೇಳಿರುವುದು ವೈರಲ್ ಆಗ್ತಿದೆ.
ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ ಸಿನಿಮಾ 'ಡೆವಿಲ್'. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ಅಭಿಮಾನಿಗಳು ಚಿತ್ರವನ್ನು ಮೆರೆಸುತ್ತಿದ್ದಾರೆ. ಮೊದಲ ದಿನ 13 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಮಾಹಿತಿ ನೀಡಿದೆ. 2ನೇ ದಿನ, 3ನೇ ದಿನ ಕೂಡ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications











