ಮಂಡ್ಯದಲ್ಲಿ ವಿಜಯಲಕ್ಷ್ಮಿ ದರ್ಶನ್ ಆ ಪದ ಹೇಳುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ನಿಧಾನವಾಗಿ ನಿರಾಳರಾಗುತ್ತಿದ್ದಾರೆ. ಮೊದಲಿಗೆ ಚಿಕಿತ್ಸೆಗಾಗಿ 6 ವಾರಗಳ ಮಧ್ಯಂತರ ಬೇಲ್ ಸಿಕ್ಕಿತ್ತು. ಬಳಿಕ ಪ್ರಕರಣದಲ್ಲಿ ರೆಗ್ಯುಲರ್ ಬೇಲ್ ಕೂಡ ಸಿಕ್ಕಿ ಮತ್ತಷ್ಟು ರಿಲೀಫ್ ಸಿಕ್ಕಂತಾಗಿತ್ತು. ಇತ್ತೀಚೆಗೆ ದೇಶಾದ್ಯಂತ ಓಡಾಡಲು ಕೋರ್ಟ್ನಿಂದ ಅನುಮತಿ ಸಿಕ್ಕಿದೆ. ಹಾಗಾಗಿ ನಿಧಾನದವಾಗಿ ಅವರ ಜೀವನ ಸಹಜಸ್ಥಿತಿಗೆ ಮರಳಿದೆ.
ನಟ ದರ್ಶನ್ ಜೈಲಿಗೆ ಹೋದ ದಿನದಿಂದ ಬೆಂಬಲವಾಗಿ ನಿಂತವರು ಪತ್ನಿ ವಿಜಯಲಕ್ಷ್ಮಿ. ಪತಿಗೆ ಜಾಮೀನು ಕೊಡಿಸಲು ಬಹಳ ಹೋರಾಟ ನಡೆಸಿದರು. ದೇವಸ್ಥಾನಗಳಿಗೆ ಹೋಗಿ ಪ್ರಾರ್ಥಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಕೇಳಿಕೊಂಡಿದ್ದರು. ಈ ವಿಚಾರದಲ್ಲಿ ಅಭಿಮಾನಿಗಳು ಅವರಿಗೆ ಜೈಕಾರ ಹಾಕುತ್ತಿದ್ದಾರೆ.

ವಿಜಯಲಕ್ಷ್ಮಿ ಸಾಮಾನ್ಯವಾಗಿ ಸಭೆ ಸಮಾರಂಭಗಳಿಂದ ದೂರ ಉಳಿಯುತ್ತಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದು ಬಹಳ ಕಮ್ಮಿ. ಇಂದು(ಮಾರ್ಚ್ 2) ಪಾಂಡವಪುರದ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ವಿಜಯಲಕ್ಷ್ಮಿ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಟ ಧನ್ವೀರ್ ಗೌಡ, ಹಾಸ್ಯನಟ ಚಿಕ್ಕಣ್ಣ ಸಹ ಸಾಥ್ ನೀಡಿದ್ದಾರೆ. ಒಟ್ಟು 24 ನವ ಜೋಡಿ ಈ ವೇದಿಕೆಯಲ್ಲಿ ಹೊಸ ಬಾಳಿಗೆ ಕಾಲಿಟ್ಟರು.
ಸ್ವತಃ ವಿಜಯಲಕ್ಷ್ಮಿ ದರ್ಶನ್ ನವ ಜೋಡಿಗೆ ಮಾಂಗಲ್ಯ ನೀಡಿ ಶುಭ ಹಾರೈಸಿದ್ದಾರೆ. ಅಂದಹಾಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ನಟ ಧನ್ವೀರ್ ಜೋಡಿಗೆ ಕೈಗಡಿಯಾರಗಳನ್ನು ವಿತರಿಸಿದರು. ಇನ್ನು ಹಾಸ್ಯನಟ ಚಿಕ್ಕಣ್ಣ ಸೀರೆ, ಪಂಚೆ-ಶರ್ಟ್ ವಿತರಣೆ ಮಾಡಿ ಎಲ್ಲರಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿಜಯಲಕ್ಷ್ಮಿ ಮಾತನಾಡಿ ಎಲ್ಲಾ ನವಜೋಡಿಗಳಿಗೆ ಶುಭ ಕೋರಿದರು. "ಎಲ್ಲಾ ನಮ್ಮ ಪ್ರೀತಿಯ ಸೆಲೆಬ್ರೆಟೀಸ್(ಅಭಿಮಾನಿಗಳು)ಗಳಿಗೆ ನಮಸ್ಕಾರ" ಎಂದು ಅವರು ಮಾತು ಆರಂಭಿಸಿದರು. ಸೆಲೆಬ್ರೆಟೀಸ್ ಎನ್ನುತ್ತಿದ್ದಂತೆ ದರ್ಶನ್ ಅಭಿಮಾನಿಗಳ ಸಂಭ್ರಮ ಮುಗಿಮುಟ್ಟಿತ್ತು. ಓಹ್ ಎಂದು ಹರ್ಷೋದ್ಘಾರ ಮಾಡಿ ಸಂಭ್ರಮಿಸಿದ್ದಾರೆ.
"ಸರಳ ವಿವಾಹ ಎನ್ನುವುದು ಬಹಳ ಒಳ್ಳೆಯ ನಿರ್ಧಾರ. ಇವತ್ತು ಮದುವ ಆಗಿರುವ ಎಲ್ಲಾ ಗಂಡು- ಹೆಣ್ಣಿನ ಜೀವನ ಚೆನ್ನಾಗಿರಲಿ, ಮುಂದೆ ಜೀವನ ಸುಖ ನೆಮ್ಮದಿಯಿಂದ ಇರಲಿ ಎಂದು ಹಾರೈಸುತ್ತೇನೆ. ಅದೇ ರೀತಿ ಇಲ್ಲಿ ಇರುವ ಎಲ್ಲಾ ರೈತರಿಗೂ, ರೈತರ ಮಕ್ಕಳಿಗೂ ಒಳ್ಳೆಯದಾಗಲಿ" ಎಂದು ವಿಜಯಲಕ್ಷ್ಮಿ ದರ್ಶನ್ ಹಾರೈಸಿದ್ದಾರೆ. ಹೀಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೊದಲ ಬಾರಿ ವಿಜಯಲಕ್ಷ್ಮಿ ಭಾಗವಹಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
ದರ್ಶನ್ ಜೈಲು ಸೇರುತ್ತಿದ್ದಂತೆ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಮತ್ತೆ ಆಕ್ಟೀವ್ ಆಗಿತ್ತು. ಆದರೆ ಹೆಚ್ಚು ಪೋಸ್ಟ್ ಮಾಡಿರಲಿಲ್ಲ. ಒಮ್ಮೆ ಮಾತ್ರ ಅಭಿಮಾನಿಗಳು ಶಾಂತ ರೀತಿಯಲ್ಲಿ ಇರುವಂತೆ ಪೋಸ್ಟ್ ಮಾಡಿದ್ದರು. ಬಳಿಕ ದೇವಸ್ಥಾನಗಳಿಗೆ ಭೇಟಿ ನೀಡಿದ ಬಗ್ಗೆ ಮಾಹಿತಿ ನೀಡುತ್ತಿದ್ದರು.
ದರ್ಶನ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮೇಲೆ ಪತ್ನಿ ವಿಜಯಲಕ್ಷ್ಮಿ ಕೂಡ ನಿಶ್ಚಿಂತರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು ಆಗಾಗ್ಗೆ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ. ಈ ಬಾರಿ ಮೈಸೂರಿನ ಫಾರ್ಮ್ಹೌಸ್ನಲ್ಲಿ ಪತಿ, ಪುತ್ರ ಹಾಗೂ ಕುಟುಂಬ ಸದಸ್ಯರ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ್ದರು. ದರ್ಶನ್ ತಮ್ಮ ಅಭಿಮಾನಿಗಳು ಸೆಲೆಬ್ರೆಟೀಸ್ ಎಂದು ಕರೆಯುವುದು ಗೊತ್ತೇಯಿದೆ. ವಿಜಯಲಕ್ಷ್ಮಿ ದರ್ಶನ್ ಕೂಡ ಅದನ್ನು ಅನುಸರಿಸುತ್ತಿದ್ದಾರೆ.


Click it and Unblock the Notifications











