ವಿಜಯಲಕ್ಷ್ಮಿ ದರ್ಶನ್ 2024ರಲ್ಲಿ ಕಲಿತ ಪಾಠಗಳೇನು? ಆಕೆಯ ಉತ್ತರ ಇದು
ತೂಗುದೀಪ ಕುಟುಂಬ ದೊಡ್ಡ ಸಂಕಷ್ಟದಿಂದ ಪಾರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಇದು ಕುಟುಂಬ ಸದಸ್ಯರು, ಆಪ್ತರು ಹಾಗೂ ಅಭಿಮಾನಿಗಳಿಗೆ ಸಂತಸ ತಂದಿದೆ. ಶೀಘ್ರದಲ್ಲೇ ದರ್ಶನ್ ಮೊದಲಿನಂತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ.
ಪತಿ ದರ್ಶನ್ ಅವರನ್ನು ಜೈಲಿನಿಂದ ಹೊರಗೆ ಕರೆತರಲು ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದ್ದರು. ಹೊರ ರಾಜ್ಯದ ದೇವಸ್ಥಾನಕ್ಕೂ ಹೋಗಿ ಬಂದಿದ್ದರು. ಮತ್ತೊಂದು ಕಡೆ ವಕೀಲರ ಮೂಲಕ ಕಾನೂನು ಹೋರಾಟ ನಡೆಸಿದ್ದರು. ಎಲ್ಲಾ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ.

ವಿಜಯಲಕ್ಷ್ಮಿ ದರ್ಶನ್ ಈಗ ನಿರಾಳರಾಗಿದ್ದಾರೆ. ದರ್ಶನ್ ಸದ್ಯ ಮೈಸೂರಿನ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದು ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದೂವರೆ ತಿಂಗಳ ಕಾಲ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ದರ್ಶನ್ ಬೆನ್ನು ನೋವಿನ ಸಮಸ್ಯೆ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ನ್ಯಾಯಾಲಯದ ಅನುಮತಿ ಪಡೆದು ಮೈಸೂರಿಗೆ ತೆರಳಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವಿಜಯಲಕ್ಷ್ಮಿ ದರ್ಶನ್ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ದರ್ಶನ್ ಜೈಲು ಸೇರಿದ ಮೇಲೆ ಅಕೌಂಟ್ ಡಿ ಆಕ್ಟಿವೇಟ್ ಮಾಡಿದ್ದರು. ಕೆಲ ದಿನಗಳ ಬಳಿಕ ಮತ್ತೆ ಆಕ್ಟೀವ್ ಮಾಡಿಕೊಂಡಿದ್ದರು. ಆದರೆ ಹೆಚ್ಚು ಪೋಸ್ಟ್ ಮಾಡುತ್ತಿರಲಿಲ್ಲ. ಪತಿ ಸಂಕಷ್ಟದಿಂದ ಪಾರಾಗಿ ಬಂದಮೇಲೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.
ತೂಗುದೀಪ ಕುಟುಂಬದ ಪಾಲಿಗೆ 2024 ಕರಾಳ ವರ್ಷ. ಈ ವರ್ಷ ಕಲಿತ ಪಾಠ ಏನು ಎಂದು ವಿಜಯಲಕ್ಷ್ಮಿ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ವೀಡಿಯೋ ಹಂಚಿಕೊಂಡಿದ್ದಾರೆ. ಯಾರದರೂ ಈ ವರ್ಷ ಕಲಿತ ಪಾಠ ಏನು? ಎಂದು ಕೇಳಿದರೆ ನನ್ನ ಉತ್ತರ ಇದು ಎಂದು ತಿಳಿಸಿದ್ದಾರೆ.
ಹುಳು ಚಿಟ್ಟೆಯಾಗಿ ಪರಿವರ್ತನೆಯಾಗುವುದಕ್ಕೆ ಎಷ್ಟೆಲ್ಲಾ ಕಷ್ಟ ಪಡಬೇಕು. ಎಷ್ಟು ಭಯವಾಗುತ್ತದೆ. ಆದರೆ ಆ ಬದಲಾವರಣೆಯೇ ನಿಜವಾದ ಬೆಳವಣಿಗೆ ಎಂದು ವಿಜಯಲಕ್ಷ್ಮಿ ದರ್ಶನ್ ತಿಳಿಸಿದ್ದಾರೆ. ಈ ವರ್ಷ ಸಂಕಷ್ಟಕ್ಕೆ ಪತಿಯನ್ನು ಒಬ್ಬೊಂಟಿಯಾಗಿ ಹೋರಾಡಿ ಪಾರು ಮಾಡಿದ್ದಾರೆ. ಅದನ್ನೇ ಪರೋಕ್ಷವಾಗಿ ಈ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ನೋವು ಅನುಭವಿಸುವ ಹೃದಯ ಕೊನೆಗೆ ವಜ್ರದಷ್ಟು ಗಟ್ಟಿಯಾಗುತ್ತದೆ ಎನ್ನುವ ಮತ್ತೊಂದು ಝಲಕ್ ಅನ್ನು ಹಂಚಿಕೊಂಡಿದ್ದಾರೆ. "ನೋವು ಜನರನ್ನು ಬದಲಿಸುತ್ತದೆ" ಎನ್ನುವ ಕ್ಯಾಪ್ಷನ್ ಅದಕ್ಕೆ ಇದೆ. ಇನ್ನು ನೀವು ಮುದುಡಿದ ಹೂವಿನಂತೆ ಇದ್ದು ಬಿಡಲು ಬಯಸುತ್ತೀರಿ. ಆದರೆ ದೇವರು ನಿಮ್ಮನ್ನು ಸುಂದರವಾದ ಹೂಗುಚ್ಛ ಮಾಡಲು ಬಯಸಿರುತ್ತಾನೆ ಎಂದು ಹೇಳುವಂತಹ ಫೋಟೊ ಕೂಡ ಅದರಲ್ಲಿದೆ. ಆ ಮೂಲಕ ತಮ್ಮ ಬದುಕು ಈಗ ಬದಲಾಗುತ್ತಿರುವ ಸಂಗತಿಯನ್ನು ವಿಜಯಲಕ್ಷ್ಮಿ ತಿಳಿಸಿದ್ದಾರೆ.
ತಮಿಳಿನ 'ರಾಯನ್' ಚಿತ್ರದ ಹಾಡಿನ ಬಿಜಿಎಂ ಈ ವೀಡಿಯೋದಲ್ಲಿದೆ. ಅಭಿಮಾನಿಗಳು ಪದೇ ಪದೆ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಕ್ಲಿಕ್ ಮಾಡಿ ನೋಡುತ್ತಿದ್ದಾರೆ. ಬಹಳ ದಿನಗಳಿಂದ ಯಾವುದೇ ಪೋಸ್ಟ್ ಮಾಡದೇ ಇದ್ದ ವಿಜಯಲಕ್ಷ್ಮಿ ಇತ್ತೀಚೆಗೆ ಫೋಟೊವೊಂದನ್ನು ಹಂಚಿಕೊಂಡಿದ್ದರು. ಕೇಸರಿ ಬಣ್ಣದ ಸಲ್ವಾರ್ನಲ್ಲಿ ಹೂಗುಚ್ಛಗಳ ಮುಂದೆ ನಿಂತ ಫೋಟೊ ಅದು. ಅದಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು.
ದರ್ಶನ್ ಸದ್ಯ 'ಡೆವಿಲ್' ಚಿತ್ರದಲ್ಲಿ ನಟಿಸಬೇಕಿದೆ. ಮಿಲನಾ ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಒಂದು ವಾರದ ಚಿತ್ರೀಕರಣ ಸಹ ಮುಗಿದೆ. ಫೆಬ್ರವರಿ ವೇಳೆಗೆ ಮತ್ತೆ ಸಿನಿಮಾ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











