ಕರ್ಮಗಳೆಲ್ಲಾ ಇಲ್ಲೇ ಕೊನೆ; ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್
ರೇಣುಕಾಸ್ವಾಮಿ ಪ್ರಕರಣ ಮಹತ್ವದ ಹಂತಕ್ಕೆ ಬಂದು ನಿಂತಿದೆ. ಇಂದು(ನವೆಂಬರ್ 3) ಕೋರ್ಟ್ನಲ್ಲಿ ಪ್ರಕರಣದ ಟ್ರಯಲ್ ಆರಂಭವಾಗಬೇಕಿದೆ. ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿ ನಿಗದಿ ಪಡಿಸಲಿದ್ದಾರೆ. ಅದನ್ನು ಆರೋಪಿಗಳನ್ನು ಒಪ್ಪಿಕೊಳ್ಳುತ್ತಾರಾ? ಒಂದು ವೇಳೆ ಒಪ್ಪಿಕೊಂಡರೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್ ಆಗ್ತಿದೆ.
ವಿಜಯಲಕ್ಷ್ಮಿ ದರ್ಶನ್ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಸದ್ಯ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಸ್ಸಾಂನ ಗುಹಾಟಿಯಲ್ಲಿರುವ ಕಾಮಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೊ ಹಂಚಿಕೊಂಡಿದ್ದಾರೆ. "ಯಾವಾಗಲೂ ರಕ್ಷಣೆಗಾಗಿ ಪ್ರಾರ್ಥಿಸಿ, ಯಾಕಂದರೆ ನಾವು ನೋಡದೇ ಇರುವುದು ಸಾಕಷ್ಟಿದೆ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ಇನ್ನು ಪೋಸ್ಟ್ಗೆ "ಎಲ್ಲಿಗೆ ಓಡುವೆ ಓ ಮನುಜ, ಕರ್ಮಗಳೆಲ್ಲಾ ಇಲ್ಲೇ ಕೊನೆ. ಏತಕೆ ನೋಡುವೆ ಕದನವ ನೀನು, ಅಲ್ಲಿಯೂ ಯಾರೋ ಇರುವವನೆ" ಎಂದು ಶುರುವಾಗುವ ಹಾಡನ್ನು ಹಿನ್ನೆಲೆಯಲ್ಲಿ ಬಳಸಿದ್ದಾರೆ. ಡಿ ಗ್ಯಾಂಗ್ ವಿರುದ್ಧ ದೋಷಾರೋಪ ಪ್ರಕ್ರಿಯೆ ನಡೆಯಬೇಕಿದದ್ದು ಎಲ್ಲಾ 17 ಆರೋಪಿಗಳು ಕೋರ್ಟ್ಗೆ ಹಾಜರಾಗಬೇಕಿದೆ. ಈ ಸಂಬಂಧಿ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎರಡೂ ಕಡೆಯ ವಕೀಲರು ಒಪ್ಪಿದರೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ. ಈಗಾಗಲೇ ಜಡ್ಜ್ ದೋಷಾರೋಪಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆರೋಪಿಗಳ ಎದುರು ಓದಿ ತಿಳಿಸಲಿದ್ದಾರೆ. ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ನ್ಯಾಯಾಲಯ ಆರೋಪಿಗಳನ್ನು ಪ್ರಶ್ನಿಸಲಿದೆ. ಅದಕ್ಕೆ ಆರೋಪಿಗಳ ಪ್ರತಿಕ್ರಿಯೆ ಏನು ಎನ್ನುವುದನ್ನು ಆಧರಿಸಿ ವಿಚಾರಣೆ ಮುಂದುವರೆಯಲಿದೆ. ಆರೋಪ ಒಪ್ಪಿಕೊಳ್ಳದಿದ್ದರೆ ಸಾಕ್ಷ್ಯ ವಿಚಾರಣೆ ಶುರುವಾಗಲಿದೆ.
ಕಳೆದ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಮುಗಿಸಿ ದೋಷಾರೋಪ ನಿಗದಿಪಡಿಸುವ ದಿನ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.
ಕಳೆದ ವರ್ಷ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು. ನಟ ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ. ಹಾಗಾಗಿ ದರ್ಶನ್ ಸೂಚನೆ ಮೇರೆಗೆ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆಸಿ ಬುದ್ಧಿಕಲಿಸಲು ದರ್ಶನ್ ಮುಂದಾಗಿದ್ದರು ಎಂದು ವರದಿಯಾಗಿದೆ. ಪಟ್ಟಣಗೆರೆ ಶೆಡ್ನಲ್ಲಿ ಆತನನ್ನು ಕೂಡಿ ಹಾಕಿ ಥಳಿಸಲಾಗಿದ್ದು ಈ ವೇಳೆ ಆತನ ಪ್ರಾಣ ಹೋಗಿತ್ತು. ಬಳಿಕ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಸಹ ನಡೆದಿತ್ತು.
ಕಳೆದ ವರ್ಷ ಜೂನ್ 11ರಂದು ದರ್ಶನ್ ಸೇರಿ 17 ಮಂದಿ ಆರೋಪಿಗಳ ಬಂಧನವಾಗಿತ್ತು. ವಿಚಾರಣೆ ನಡೆಸಿ ಬಳಿಕ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ವಿಚಾರಣಾಧೀನ ಕೈದಿಗಳಾಗಿ ಆರೋಪಿಗಳು ಜೈಲು ಸೇರಿದ್ದರು. ಡಿಸೆಂಬರ್ ವೇಳೆಗೆ ಎಲ್ಲರೂ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಹಾಗಾಗಿ ಆರೋಪಿಗಳೆಲ್ಲಾ ಮತ್ತೆ ಜೈಲು ಸೇರಿದ್ದಾರೆ.
ಮೊದಲಿನಿಂದಲೂ ವಿಜಯಲಕ್ಷ್ಮಿ ದರ್ಶನ್ ತಮ್ಮ ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ಪತಿಯನ್ನು ಸಂಕಷ್ಟದಿಂದ ಪಾರು ಮಾಡಲು ಬಹಳ ಶ್ರಮಿಸಿದ್ದರು. ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದರ್ಶನ್ ಜಾಮೀನು ಪಡೆದು ಹೊರಬಂದ ಬಳಿಕ ಪತಿಯ ಜೊತೆ ಕೆಲ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದರು. ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಾಗ ನಿಟ್ಟುಸಿರು ಬಿಟ್ಟಿದ್ದರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ ಆಗಿತ್ತು. ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ವಿಜಯಲಕ್ಷ್ಮಿ ಪತಿಯನ್ನು ಭೇಟಿ ಮಾಡಿ ಬಂದಿದ್ದರು.


Click it and Unblock the Notifications











