ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ; ವಿಜಯಲಕ್ಷ್ಮಿ ದರ್ಶನ್ ವಿರಹ ವೇದನೆ
ರೇಣುಕಾಸ್ವಾಮಿ ಪ್ರಕರಣದಲ್ಲಿ 2ನೇ ಬಾರಿ ದರ್ಶನ್ ಕೇಂದ್ರ ಕಾರಾಗೃಹ ಸೇರಿ 3 ತಿಂಗಳು ಕಳೆದಿದೆ. ಸದ್ಯಕ್ಕೆ ಜಾಮೀನು ಸಿಗುವುದು ಅನುಮಾನ ಎನ್ನುವಂತಾಗಿದೆ. ಯಾವುದಕ್ಕೂ ಜಗ್ಗದೇ ಬಂದಿದ್ದನ್ನು ಎದುರಿಸೋಣ ಎಂದು ದರ್ಶನ್ ನಿರ್ಧರಿಸಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೂಡ ಅದೇ ಮಾತು ಹೇಳಿದ್ದಾರೆ ಎನ್ನಲಾಗ್ತಿದೆ.
ವಿಜಯಲಕ್ಷ್ಮಿ ದರ್ಶನ್ ಪದೇ ಪದೆ ಪತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಬಿಜಿಎಸ್ ಉತ್ಸವ 2025 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪುತ್ರ ವಿನೀಶ್ ಡ್ಯಾನ್ಸ್ ಪರ್ಫಾರ್ಮೆನ್ಸ್ ಕಣ್ತುಂಬಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ಇದೆಲ್ಲದರ ನಡುವೆ ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ ಅಭಿನಯದ ಸಿನಿಮಾ ಗೀತೆವೊಂದನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ವಿಜಯಲಕ್ಷ್ಮಿ ದರ್ಶನ್ ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ತಮ್ಮ ಮನಸ್ಸಿನ ಭಾವನೆಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಸದ್ಯ ದರ್ಶನ್ ನಟನೆಯ 'ಲಂಕೇಶ್ ಪತ್ರಿಕೆ' ಚಿತ್ರದ ಹಾಡು ಹಾಡಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸರಿಗಮಪ ಸೀಸನ್ 21ರ ಸ್ಪರ್ಧಿ ಭೂಮಿಕಾ ಗಡದ್ ಹಾಗೂ ಭರತ್ ಗುಂಡಿ ಹಾಡಿರುವ 'ಎಂದೋ ಕಂಡ ಕನಸು' ಹಾಡಿನ ಕವರ್ ವರ್ಷನ್ ವೀಡಿಯೋ ಇದು.
ಹಿಟ್ ಆಫ್ ಡಿ ಬಾಸ್ ಹೆಸರಿನಲ್ಲಿ ದರ್ಶನ್ ನಟನೆಯ ಸೂಪರ್ ಹಿಟ್ ಗೀತೆಗಳನ್ನು ಭೂಮಿಕಾ ಹಾಗೂ ಭರತ್ ಹಾಡಿ ವೀಡಿಯೋ ಮಾಡುತ್ತಿದ್ದಾರೆ. ಇದೀಗ 'ಲಂಕೇಶ್ ಪತ್ರಿಕೆ' ಪತ್ರಿಕೆ ಚಿತ್ರದ 2ನೇ ಹಾಡಿನ ಚರಣವನ್ನು ಹಾಡಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಹಾಕಿರುವ ವಿಜಯಲಕ್ಷ್ಮಿ ಲವ್ ಸಿಂಬಲ್ ಇಮೋಜಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅತ್ತ ದರ್ಶನ್ ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಮತ್ತೆ ಬೆನ್ನು ನೋವಿನ ಸಮಸ್ಯೆ ಬಗ್ಗೆ ನ್ಯಾಯಾಲದಲ್ಲಿ ದರ್ಶನ್ ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಚಳಿ ಹೆಚ್ಚಾಗಿದೆ, ಕಂಬಳಿ ಕೊಟ್ಟಿಲ್ಲ ಎಂದು ದರ್ಶನ್ ಹಾಗೂ ನಾಗರಾಜ್ ದೂರು ಸಲ್ಲಿಸಿದ್ದರು. ಈ ಸಂಬಂಧ ನವೆಂಬರ್ 20ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಎಲ್5 ಸಮಸ್ಯೆ ಇದ್ದರೂ ಫಿಸಿಯೋಥೆರಪಿ ನಿಲ್ಲಿಸಿದ್ದಾರೆ ಎಂದು ದರ್ಶನ್ ಹೇಳಿದ್ದರು. ಕಂಬಳಿ ಯಾಕೆ ನೀಡಿಲ್ಲ ಎಂದು ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಲಯ ಗರಂ ಆಗಿತ್ತು. ಫಿಸಿಯೋಥೆರಪಿಗೂ ಸೂಚಿಸಿದೆ.
ಈಗಾಗಲೇ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ಪ್ರಕ್ರಿಯೆ ಶುರುವಾಗಿದೆ. ಆರೋಪಿಗಳ ಮೇಲೆ ದೋಷಾರೋಪ ಹೊರಿಸಲಾಗಿದ್ದು ಅದನ್ನು ಯಾರೂ ಕೂಡ ಒಪ್ಪಿಕೊಂಡಿಲ್ಲ. ಹಾಗಾಗಿ ಸಾಕ್ಷಿಗಳ ವಿಚಾರಣೆ ಆರಂಭವಾಗಬೇಕಿದೆ. ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವೀಡಿಯೋಗಳು ವೈರಲ್ ಆಗಿ ವಿವಾದ ಸೃಷ್ಟಿಯಾಗಿದೆ. ವೀಡಿಯೋ ಲೀಕ್ ಆಗಿದ್ದು ಹೇಗೆ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟ ಧನ್ವೀರ್ ಗೌಡ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ವಿಜಯಲಕ್ಷ್ಮಿ ಅವರಿಗೆ ವೀಡಿಯೋ ಕಳುಹಿಸಿದ್ದಾರೆ ಧನ್ವೀರ್ ಹೇಳಿರವುದಾಗಿ ವರದಿಯಾಗಿದೆ. ಹಾಗಾಗಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಮತ್ತೊಂದು ಕಡೆ 'ಡೆವಿಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಭಿಮಾನಿಗಳು ಬ್ಯಾನರ್ ಕಟ್ಟಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 11ಕ್ಕೆ ತೆರೆಗೆ ಬರಲಿದೆ. ವಿಜಯಲಕ್ಷ್ಮಿ ಕೂಡ ಚಿತ್ರದ ಪ್ರಚಾರಕ್ಕೆ ಕೈಜೋಡಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ಗೆ ಈ ಸಿನಿಮಾ ಗೆಲುವು ಬಹಳ ಅನಿವಾರ್ಯ ಎನ್ನುವಂತಾಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.


Click it and Unblock the Notifications











