ಅಶ್ಲೀಲ ಕಾಮೆಂಟ್ಸ್; ಸ್ಕ್ರೀನ್ ಶಾಟ್ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ದೂರು ದಾಖಲು
ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಾಮೆಂಟ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಶ್ಲೀಲ ಪದಗಳನ್ನು ಬಳಸಿ ಬಾಯಿಗೆ ಬಂದಂತೆ ಕಾಮೆಂಟ್ ಮಾಡುವ ಕಿಡಿಗೇಡಿಗಳಿಗೆ ಬುದ್ಧಕಲಿಸಲು ವಿಜಯಲಕ್ಷ್ಮಿ ದರ್ಶನ್ ಮುಂದಾಗಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಗುಡುಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದವರ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಪ್ರತಿಕ್ರಿಯಿಸಿದ್ದಾರೆ. "ಕ್ಲಾಸ್ ಫ್ಯಾನ್ಸ್, ನಿಮ್ಮ ಸ್ಟ್ಯಾಂಡರ್ಡ್ ಏನು ಎಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು. ಈ ಖಾತೆಗಳ ವಿರುದ್ಧ ಪೊಲೀಸ್ ದೂರುಗಳು ದಾಖಲಾಗಿವೆ. ಕಿರುಕುಳವು ಇನ್ನು ಮುಂದೆ ಅಭಿಮಾನ ಎನ್ನುವುದಕ್ಕೆ ಸಾಧ್ಯವಿಲ್ಲ. ಕೆಟ್ಟ ಪದಗಳನ್ನು ಬಳಸುವ ಕ್ಲಾಸ್ ಹುಡುಗಿಯರಿಗೆ ಮತ್ತು ತಾಯಂದಿರು, ಸಭ್ಯತೆ ಬಿಟ್ಟು ಆಕಾಶದಿಂದ ನೇರವಾಗಿ ಬಿದ್ದಂತೆ ಕಾಣುವ ಕ್ಲಾಸಿ ಪುರುಷರಿಗೆ ಚಪ್ಪಾಳೆ" ಎಂದು ವಿಜಯಲಕ್ಷ್ಮಿ ವ್ಯಂಗ್ಯವಾಡಿದ್ದಾರೆ.

ಕೆಲ ಹೆಣ್ಣು ಮಕ್ಕಳು ಕೂಡ ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. "ನಾನು ಮೌನವಾಗಿ ಕುಳಿತು ಇದನ್ನು ಹೀಗೆ ಬಿಡುವುದಿಲ್ಲ. ಇದು ನಿಮ್ಮ ದಿನನಿತ್ಯದ ಕಾಯಕ ಆಗಿರಬಹುದು. ಮುಂದಿನ ದಿನಗಳಲ್ಲಿ ದೇವರು ನಿಮಗೆ ಒಳ್ಳೆಯದು ಮಾಡಲಿ. ಇದು ನನ್ನಿಂದ ಮಾತ್ರವಲ್ಲ, ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು ಎಂಬುದನ್ನು ಇದು ನೆನಪಿಸುತ್ತದೆ" ಎಂದು ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದಾರೆ.
ಹಲವು ಕಾಮೆಂಟ್ಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಬಳಸಿರುವ ಪದಗಳನ್ನು ಕೂಡ ಪ್ರಕಟಿಸಲು ಸಾಧ್ಯವಿಲ್ಲ. ಅಷ್ಟು ಕೆಟ್ಟ, ಕೊಳಕ ಭಾಷೆಯಲ್ಲಿ ಕೆಲವರು ಕಾಮೆಂಟ್ ಮಾಡಿದ್ದಾರೆ. ಕೆಟ್ಟದಾಗಿ ಮೀಮ್ಸ್ ಕ್ರಿಯೇಟ್ ಮಾಡಿ ವೈರಲ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಟಿ ರಮ್ಯಾ ಇದೇ ರೀತಿ ದೂರು ದಾಖಲಿಸಿದ್ದರು. ದರ್ಶನ್ ಅಭಿಮಾನಿಗಳೇ ನನಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ಆರೋಪಿದ್ದರು. ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಇಂತಹ ಕೆಟ್ಟ ಕಾಮೆಂಟ್ಸ್ ಹೊಸದೇನು ಅಲ್ಲ. ಎಲ್ಲಾ ನಟ, ನಟಿಯರು ಇದನ್ನು ಎದುರಿಸಿದ್ದಾರೆ. ಕೆಲವರು ನೋಡಿ ನೋಡದಂತೆ ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಹೀಗೆ ಧೈರ್ಯವಾಗಿ ಕಿಡಿಗೇಡಿಗಳಿಗೆ ಬುದ್ಧಿ ಕಲಿಸುವ ಪ್ರಯತ್ನ ಮಾಡುತ್ತಾರೆ.
ಈ ಹಿಂದೆ ಕೂಡ ವಿಜಯಲಕ್ಷ್ಮಿ ದರ್ಶನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ಸ್ ಹಾಕಿರುವ ಬಗ್ಗೆ ಸುದ್ದಿ ಆಗಿತ್ತು. ಈ ವಿಚಾರ ಮಹಿಳಾ ಆಯೋಗದ ಗಮನಕ್ಕೆ ಬಂದಿತ್ತು. ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. BNS ಸೆಕ್ಷನ್ 75, 79, ಐಟಿ ಆ್ಯಕ್ಟ್ 67, 66ರ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಆದರೆ ಆಗ ವಿಜಯಲಕ್ಷ್ಮಿ ಈ ಪ್ರಕರಣದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ.
ಇದೀಗ ವಿಜಯಲಕ್ಷ್ಮಿ ತಾವೇ ಖುದ್ದಾಗಿ ಸಿಸಿಬಿ ಸೈಬರ್ ಠಾಣೆಗೆ ತೆರಳಿ 150ಕ್ಕೂ ಅಧಿಕ ಸೋಶಿಯಲ್ ಮೀಡಿಯಾ ಕಾಮೆಂಟ್ಸ್ ಸ್ಕ್ರೀನ್ ಶಾಟ್ ಸಮೇತ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ 'ಯುದ್ಧ' ಮಾಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ದಾವಣಗೆರೆಯಲ್ಲಿ ಒಂದು ಹೇಳಿಕೆ ನೀಡಿದ್ದರು. ಆದರೆ ಅದನ್ನು ಒಂದಕ್ಕೊಂದು ಲಿಂಕ್ ಮಾಡಿ ಚರ್ಚೆ ಶುರುವಾಗಿತ್ತು. ಇದು ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ವಾರ್ಗೆ ಕಾರಣವಾಗಿತ್ತು.
ಕಿಡಿಗೇಡಿಗಳು ವಿಜಯಲಕ್ಷ್ಮಿ ಬಗ್ಗೆ ಕೆಟ್ಟದಾಗಿ ಪೋಸ್ಟ್, ಕಾಮೆಂಟ್ಸ್ ಮಾಡಿದ್ದರು. ಅಷ್ಟೇ ಅಲ್ಲ ಸುದೀಪ್ ಬಗ್ಗೆ ಕೂಡ ಕೆಲವರು ಅಶ್ಲೀಲ ಪದಗಳನ್ನು ಬಳಸಿ ಕಾಮೆಂಟ್ಸ್ ಮಾಡಿದ್ದರು. ಸುದೀಪ್ ಪತ್ನಿ, ಮಗಳ ಬಗ್ಗೆ ಕೂಡ ಅಸಭ್ಯ ಪದಗಳಿಂದ ದೂಷಿಸಿದ್ದರು.


Click it and Unblock the Notifications









