ಈ ವರ್ಷವೂ ಹುಟ್ಟುಹಬ್ಬಕ್ಕೆ ಸಿಗಲಿಲ್ಲ ತಂದೆಯ ದರ್ಶನ ; ಮರೆಯಬೇಡ ಮಗನೇ- ವಿನೀಶ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವವರು ದರ್ಶನ್ ಮತ್ತು ವಿಜಯಲಕ್ಷ್ಮಿ. ಒಮ್ಮೆ ಬೈದಾಡಿಕೊಂಡು ಆ ನಂತರ ಮತ್ತೆ ಒಂದಾಗಿ ಇನ್ಯಾವತ್ತೋ ಇನ್ಯಾವುದೋ ಕಾರಣಕ್ಕೆ ಮುನಿಸಿಕೊಳ್ಳುತ್ತಾ ಮತ್ತೆ ಒಂದಾಗುತ್ತಾನೇ...
ದರ್ಶನ್ ಜೊತೆ 22 ವರ್ಷ ಕಳೆದ ವಿಜಯಲಕ್ಷ್ಮಿ ಕಳೆದ ವರ್ಷ ತಮ್ಮ ಗಂಡನನ್ನು ಜೈಲಿಂದ ಹೊರ ತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ದರ್ಶನ್ ಜೈಲು ಪಾಲಾದ ಕ್ಷಣದಿಂದ ಹಿಡಿದು ಹೊರ ಬರುವ ತನಕ ವಿರಮಿಸದ ವಿಜಯಲಕ್ಷ್ಮಿ ಕೊಲ್ಲೂರಿಂದ ಹಿಡಿದು ಅಸ್ಸಾಂನ ಕಾಮಾಕ್ಯ ದೇವಸ್ಥಾನದವರೆಗೆ ಸುತ್ತಾಡಿದರು. ಪ್ರಾರ್ಥನೆ ಸಲ್ಲಿಸಿದರು. ಹರಕೆಯನ್ನು ಹೊತ್ತರು.

ವಿಜಯಲಕ್ಷ್ಮಿ ಅವರ ಈ ಪ್ರಾರ್ಥನೆಯ ಫಲ ಎಂಬಂತೆ ದರ್ಶನ್ ಜೈಲಿಂದ ಹೊರ ಬಂದರು ಕೂಡ.ಆ ನಂತರ ದರ್ಶನ್ ಜೈಲಿಂದ ಹೊರ ಬರುತ್ತಿದ್ದಂತೆಯೇ ಸಂಕಷ್ಟಗಳಿಂದ ಪಾರು ಮಾಡುವಂತೆ ಕೇರಳದ ಕಣ್ಣೂರಿನಲ್ಲಿರುವ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಕೂಡ ಹೋದ ವಿಜಯಲಕ್ಷ್ಮಿ ಶತ್ರು ಸಂಹಾರ ಪೂಜೆಯನ್ನು ಕೂಡ ಮಾಡಿಸಿದರು. ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟದಲ್ಲಿ ಹರಿಕೆಯನ್ನು ತೀರಿಸಿದ್ದರು. ಕಾಮಾಕ್ಯ ದೇವಸ್ಥಾನಕ್ಕೆ ಕೂಡ ತೆರಳಿ ಹರಕೆ ತೀರಿಸಿದರು.
ದರ್ಶನ್ ಇನ್ನು ಮತ್ತೆ ಜೈಲಿಗೆ ಹೋಗಲಾರರು ಎನ್ನುವ ನಂಬಿಕೆ ಸಹಜವಾಗಿ ವಿಜಯಲಕ್ಷ್ಮಿ ಅವರಲ್ಲಿತ್ತು. ಹೀಗಾಗಿಯೇ ಪತಿಯ ಜೊತೆ ನೆಮ್ಮದಿಯಿಂದ ವಿಜಯಲಕ್ಷ್ಮಿ ದರ್ಶನ್ ಇದ್ದರು. ಸಂಭ್ರಮದಿಂದ ಹಬ್ಬ ಹರಿದಿನಗಳನ್ನು ಆಚರಿಸಿದರು. ನೆರಳಿನಂತೆ ತಮ್ಮ ಪತಿಯನ್ನು ಹಿಂಬಾಲಿಸಿದರು.
ಆದರೆ ಈಗ ವಿಜಯಲಕ್ಷ್ಮಿ ನೆಮ್ಮದಿಗೆ ಮತ್ತೊಮ್ಮೆ ಬೆಂಕಿ ಬಿದ್ದಿದೆ. ದುರಾದೃಷ್ಟ ಮತ್ತೆ ಬೆನ್ನು ಹತ್ತಿದೆ. ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ನರಕಯಾತನೆ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಅಕ್ಷರಶ ಹೈರಾಣಾಗಿದ್ದಾರೆ.
ಇನ್ನು ಕಳೆದ ಬಾರಿಯಂತೆ ಈ ಬಾರಿ ಪರಿಸ್ಥಿತಿ ಇಲ್ಲ. ದರ್ಶನ್ ಅವರನ್ನು ಜೈಲಿಂದ ಹೊರಗಡೆ ಕರೆದುಕೊಂಡು ಬರುವುದು ಕೂಡ ಸುಲಭ ಅಲ್ಲ. ಇಷ್ಟೇ ಅಲ್ಲ ದರ್ಶನ್ ದರ್ಶನಕ್ಕಾಗಿ ಕೂಡ ವಿಜಯಲಕ್ಷ್ಮಿ ಹರಸಾಹಸ ಪಡುವಂತಾಗಿದೆ.

ಆದರೆ.. ಲೈಫ್ ಮಸ್ಟ್ ಗೋ ಆನ್. ಇಂದಲ್ಲ.. ನಾಳೆ.. ತಮ್ಮ ಪತಿ ದೈವ ದರ್ಶನ್ ಹೊರಗಡೆ ಬರುತ್ತಾರೆ ಎನ್ನುವ ವಿಶ್ವಾಸದಲ್ಲಿಯೇ ಬದುಕನ್ನು ದೂಡುತ್ತಿರುವ ವಿಜಯಲಕ್ಷ್ಮಿ, ದರ್ಶನ್ ಅವರ ಅನುಪಸ್ಥಿತಿಯಲ್ಲಿಯೇ ಈ ವರ್ಷ ಹಬ್ಬಗಳನ್ನು ಆಚರಿಸಿದ್ದಾರೆ. ತಮ್ಮ ಮುದ್ದಿನ ಮಗ ವಿನೀಶ್ಗೆ ಈ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಹೌದು, ಇಂದು (ಅಕ್ಟೋಬರ್ 31) ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮಗ ವಿನೀಶ್ಗೆ ಹುಟ್ಟುಹಬ್ಬದ ಸಂಭ್ರಮ. ಆದರೆ ಕಳೆದ ವರ್ಷದಂತೆ ಈ ವರ್ಷ ಕೂಡ ಈ ಸಂಭ್ರಮದ ಸಮಯದಲ್ಲಿ ವಿನೀಶ್ ಜೊತೆ ದರ್ಶನ್ ಇಲ್ಲ. ಈ ಕಷ್ಟದ ಸಮಯದಲ್ಲಿ ತಂದೆಯ ಅನುಪಸ್ಥಿತಿ ಕಾಡದಂತೆ ವಿನೀಶ್ ಅವರನ್ನು ನೋಡಿಕೊಳ್ಳುತ್ತಿರುವ ವಿಜಯಲಕ್ಷ್ಮಿ ತಮ್ಮ ಮಗನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿ, ಮಗನಿಗೆ ಕಿವಿಮಾತನ್ನು ಹೇಳಿದ್ದಾರೆ.
ಈ ಕುರಿತು ಬರೆದುಕೊಂಡಿರುವ ವಿಜಯಲಕ್ಷ್ಮಿ, ನಿನ್ನೆ.. ಮೊನ್ನೆಯಷ್ಟೇ.. ನಿನ್ನ ಪುಠಾಣಿ ಕೈಗಳನ್ನು ಹಿಡಿದಂತೆ ಭಾಸವಾಗುತ್ತಿದೆ. ಆದರೆ ಈಗ ಬಲಶಾಲಿ, ವಿನಯವಂತನಾಗಿ ಬೆಳೆದಿದ್ದೀಯಾ. ಕಳೆದ ವರ್ಷ ನೀನು ಧೈರ್ಯ ಮತ್ತು ಕಾಳಜಿಯಿಂದ ಪರಿಸ್ಥಿತಿಯನ್ನು ಎದುರಿಸಿ ನಿಂತಿರುವುದನ್ನು ನೋಡಿದರೆ ನನಗೆ ಹೆಮ್ಮೆ ಆಗುತ್ತೆ ಎಂದು ಹೇಳಿದ್ದಾರೆ. ನಾನು ಮತ್ತು ನಿನ್ನ ಅಪ್ಪ ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ ಎಂದು ಬರೆದುಕೊಂಡಿದ್ಧಾರೆ. ಈ ಮೂಲಕ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಮಗನಿಗೆ ವಿಜಯವಲಕ್ಷ್ಮಿ ಧೈರ್ಯವನ್ನು ಕೂಡ ತುಂಬಿದ್ದಾರೆ.


Click it and Unblock the Notifications











