ದರ್ಶನ್ ಡಿಸ್ಚಾರ್ಜ್ ಬಳಿಕ ಪತ್ನಿ ವಿಜಯಲಕ್ಷ್ಮಿ ಜಾಲಿ ಜಾಲಿ!
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ಪಡೆದು ನಿಟ್ಟುಸಿರು ಬಿಟ್ಟಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ ಇದೀಗ ಡಿಸ್ಚಾರ್ಜ್ ಆಗಿ ಮನೆಗೆ ತಲುಪಿದ್ದಾರೆ. ಹಾಗಾಗಿ ಪತ್ನಿ ವಿಜಯಲಕ್ಷ್ಮಿ ಕೂಡ ನಿರಾಳರಾಗಿದ್ದಾರೆ.
ಕಳೆದೆರಡು ದಿನಗಳಿಂದ ನಟ ದರ್ಶನ್ ತಮ್ಮ ಮೈಸೂರಿನ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬರೋಬ್ಬರಿ 6 ತಿಂಗಳ ಬಳಿಕ ತಮ್ಮ ನೆಚ್ಚಿನ ತಾಣದಲ್ಲಿ ಕಾಲ ಕಳೆಯುತ್ತಿದ್ದಾರೆ. ನಟ ದರ್ಶನ್ ತಮ್ಮ ಸಿನಿಮಾ ಶೂಟಿಂಗ್ ಬಿಟ್ಟು ಉಳಿದ ಬಹುತೇಕ ಸಮಯವನ್ನು ಫಾರ್ಮ್ಹೌಸ್ನಲ್ಲಿ ಕಳೆಯಲು ಇಷ್ಟಪಡುತ್ತಾರೆ. ಜಾಮೀನಿನ ಮೇಲೆ ಬಿಡುಗಡೆ ಆಗಿರುವ ದರ್ಶನ್ ಕೋರ್ಟ್ ಅನುಮತಿ ಪಡೆದು ಅಲ್ಲಿಗೆ ತೆರಳಿದ್ದಾರೆ.

ಮೈಸೂರಿನ ಟೀ. ನರಸೀಪುರ ಮುಖ್ಯರಸ್ತೆಯ ಕೆಂಪಯ್ಯನಹುಂಡಿ ಬಳಿ ದರ್ಶನ್ ಒಡೆತನದ ಫಾರ್ಮ್ಹೌಸ್ ಇದೆ. ಅಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದರ್ಶನ್ ಸಾಕಿ ಸಲಹುತ್ತಿದ್ದಾರೆ. ಚಿಕ್ಕಂದಿನಿಂದಲೂ ದರ್ಶನ್ಗೆ ಪ್ರಾಣಿ, ಪಕ್ಷಿ ಪ್ರೀತಿ. ಹಾಗಾಗಿ 'ಶಾಸ್ತ್ರಿ' ಚಿತ್ರದಿಂದ ಬಂದಿದ್ದ ಹಣದಲ್ಲಿ ಆ ಜಾಗ ಖರೀದಿಸಿದ್ದರು. ಅಂದಿನಿಂದ ಆಗಾಗ್ಗೆ ಅಲ್ಲಿಗೆ ಹೋಗಿ ಬರುತ್ತಾರೆ.
ಬೆನ್ನು ನೋವಿನಿಂದ ದರ್ಶನ್ ಇನ್ನು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಶಸ್ತ್ರ ಚಿಕಿತ್ಸೆಗಾಗಿ ದರ್ಶನ್ ಬಿಜಿಎಸ್ ಆಸ್ಪತ್ರೆ ಸೇರಿದ್ದರು. ಆದರೆ ಶಸ್ತ್ರ ಚಿಕಿತ್ಸೆ ಇಲ್ಲದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನು ನೋವಿಗೆ ತತ್ಕ್ಷಣ ಸರ್ಜರಿ ಬೇಕು ಎಂದು ಮಧ್ಯಂತರ ಜಾಮೀನು ಪಡೆದಿದ್ದರು. 6 ವಾರಗಳ ಬಳಿಕ ರೆಗ್ಯುಲರ್ ಜಾಮೀನು ಕೂಡ ಸಿಕ್ಕಿ ಬಿಗ್ ರಿಲೀಫ್ ಸಿಕ್ಕಂತಾಗಿತ್ತು.
ನಟ ದರ್ಶನ್ ಜೈಲಿಗೆ ಹೋದ ದಿನದಿಂದಲೂ ವಿಜಯಲಕ್ಷ್ಮಿ ಬಹಳ ಚಿಂತಾಕ್ರಾಂತರಾಗಿದ್ದರು. ಪತಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಸಾಕಷ್ಟು ಹೆಣಗಾಡಿದರು. ವಕೀಲರ ಮೂಲಕ ಕಾನೂನು ಹೋರಾಟ ನಡೆಸಿದರು. ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಹರಕೆ ಹೊತ್ತಿದ್ದರು, ಪೂಜೆ ಮಾಡಿಸಿದ್ದರು. ಉತ್ತರ ಭಾರತದಲ್ಲಿರುವ ದೇವಾಲಯಗಳಿಗೂ ಭೇಟಿ ನೀಡಿ ಬಂದಿದ್ದರು. ಆಕೆಯ ಪ್ರಾರ್ಥನೆಯಂತೆ ದರ್ಶನ್ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಡಿಪಿ ತೆಗೆದರು. ಬಳಿಕ ಡಿ ಆಕ್ಟಿವೇಟ್ ಮಾಡಿದ್ದರು. ಕೆಲ ದಿನಗಳ ಬಳಿಕ ಮತ್ತೆ ಅಕೌಂಟ್ ಆಕ್ಟೀವ್ ಆಗಿತ್ತು. ಆದರೆ ಹೆಚ್ಚಿಗೆ ಯಾವುದೇ ಪೋಸ್ಟ್ ಮಾಡಲಿಲ್ಲ. ದರ್ಶನ್ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾಗ ಭೇಟಿ ಮಾಡಿ ಬಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿ ಒಂದು ಪೋಸ್ಟ್ ಮಾಡಿದ್ದರು. ಆ ಬಳಿಯ ಯಾವುದೇ ಪೋಸ್ಟ್ ಮಾಡಲಿಲ್ಲ.
ಆಗಾಗ್ಗೆ ದೇವಸ್ಥಾನಗಳಿಗೆ ಹೋಗುತ್ತಿದ್ದ ವಿಜಯಲಕ್ಷ್ಮಿ ಅಲ್ಲಿಗೆ ಭೇಟಿ ನೀಡಿದಾಗ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೊ ಹಂಚಿಕೊಂಡಿದ್ದರು. ಇನ್ನು ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಾಗ ರೆಗ್ಯಲರ್ ಜಾಮೀನು ಸಿಕ್ಕಾಗಲೇ ದೇವರ ಪ್ರಾರ್ಥನೆಗೆ ಸಿಕ್ಕ ಫಲ ಎಂದು ಇನ್ಸ್ಟಾ ಸ್ಟೋರಿ ಹಾಕಿದ್ದರು. ಸದ್ಯ ವಿಜಯಲಕ್ಷ್ಮಿ ಹೊಸ ಇನ್ಸ್ಟಾಗ್ರಾಮ್ ಸ್ಟೋರಿ ಅಭಿಮಾನಿಗಳ ಗಮನ ಸೆಳೆದಿದೆ.
ಪತಿ ದರ್ಶನ್ ಜಾಮೀನು ಪಡೆದು ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಿ ಮನೆ ಸೇರಿದ ಬಳಿಕ ವಿಜಯಲಕ್ಷ್ಮಿ ಕೊಂಚ ನಿರುಮ್ಮಳರಾಗಿದ್ದಾರೆ. ಇದೀಗ ತಮ್ಮ ಪ್ರೀತಿಯ ನಾಯಿ ಜೊತೆಗೆ ಕ್ಲಿಕ್ಕಿಸಿರುವ ಫೋಟೊವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ದರ್ಶನ್ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಹೊರ ಬಂದಾಗ ಪತ್ನಿ ಜೊತೆಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗಲೂ ಜೊತೆ ಆಗಿದ್ದರು.
ವಿಜಯಲಕ್ಷ್ಮಿ ಕೆಲ ವರ್ಷಗಳಿಂದ ಹೊಸಕೆರೆಹಳ್ಳಿ ಬಳಿಯ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ನೆಲೆಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ದರ್ಶನ್ ಅದೇ ಫ್ಲಾಟ್ಗೆ ತೆರಳಿದ್ದರು. ಇನ್ನೆರಡು ತಿಂಗಳಲ್ಲಿ ದರ್ಶನ್ ಚೇತರಿಸಿಕೊಳ್ಳಲಿದ್ದಾರೆ. ಫೆಬ್ರವರಿ ವೇಳೆಗೆ ಮತ್ತೆ 'ಡೆವಿಲ್' ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











