"ಶಾಶ್ವತ ಬಂಧ".. ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್
ನಟ ದರ್ಶನ್ ಸಂಕಷ್ಟದಿಂದ ಹೊರಬಂದು ಮತ್ತೆ ಸಹಜ ಜೀವನದತ್ತ ಮುಖ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಕೂಡ ಭಾಗಿ ಆ ಆಗುತ್ತಿದ್ದಾರೆ. ಇತ್ತೀಚೆಗೆ ಆಪ್ತರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದ್ದರು.
ಸದ್ಯ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಪತಿಯ ಜೊತೆಗಿನ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು "ಶಾಶ್ವತ ಬಂಧ" ಎಂದು ಬರೆದುಕೊಂಡಿದ್ದಾರೆ. 22 ವರ್ಷಗಳ ಹಿಂದೆ ಮೇ 19, 2003ರಂದು ಧರ್ಮಸ್ಥಳದಲ್ಲಿ ಇಬ್ಬರ ಮದುವೆ ನಡೆದಿತ್ತು. ಚಿತ್ರರಂಗದ ಆಪ್ತರು ಕೂಡ ಮದುವೆ ಸಂಭ್ರಮದಲ್ಲಿ ಭಾಗಿ ಆಗಿದ್ದರು.

ಅಭಿಮಾನಿಗಳು ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಾರ್ಷಿಕೋತ್ಸವದ ಶುಭಾಶಯ ಕೋರುತ್ತಿದ್ದಾರೆ. ಕಳೆದ ವರ್ಷ ದುಬೈನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಜೋಡಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದರು. ಸದ್ಯ ವಿಜಯಲಕ್ಷ್ಮಿ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಕಾಮೆಂಟ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ.
ಸ್ಟೈಲಿಶ್ ಲುಕ್ನಲ್ಲಿ ಕ್ಲಿಕ್ಕಿಸಿರುವ ಫೋಟೊವನ್ನು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ. ಕಪ್ಪು ಬಣ್ಣದ ಟೀಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕನ್ನಡಕ ತೊಟ್ಟು ದರ್ಶನ್ ಕಾಣಿಸಿಕೊಂಡಿದ್ದಾರೆ. ಕೋ ಆರ್ಡ್ ಶರ್ಟ್-ಪ್ಯಾಂಟ್ ಸೆಟ್ ಧರಿಸಿ ವಿಜಯಲಕ್ಷ್ಮಿ ಮಿಂಚಿದ್ದಾರೆ. ಪತಿ ಸಂಕಷ್ಟದಿಂದ ಪಾರಾಗಿ ಬಂದ ಬಳಿಕ ವಿಜಯಲಕ್ಷ್ಮಿ ಬಹಳ ಸಂತಸದಿಂದ ಇದ್ದಾರೆ. ಸಾಕಷ್ಟು ಸಮಯವನ್ನು ಮೈಸೂರಿನ ಫಾರ್ಮ್ಹೌಸ್ನಲ್ಲಿ ಕಳೆಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದಾರೆ.ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ವಿಜಯಲಕ್ಷ್ಮಿ ಕಿರುತೆರೆ ನಿರೂಪಕಿ ಆಗಿಯೂ ಗುರ್ತಿಸಿಕೊಂಡಿದ್ದರು. ಸ್ನೇಹಿತರೊಬ್ಬರ ಬರ್ತ್ಡೇ ಪಾರ್ಟಿಯಲ್ಲಿ ಇಬ್ಬರೂ ಮೊದಲಿಗೆ ಭೇಟಿ ಆಗಿದ್ದರು ಎನ್ನಲಾಗುತ್ತಿದೆ. ಇನ್ನು ಸ್ವತಃ ಸಂದರ್ಶನವೊಂದರಲ್ಲಿ ಹೊಸ ಸಂಬಂಧ ವಿಜಯಲಕ್ಷ್ಮಿ ಅವರನ್ನು ಮದುವೆ ಆಗುತ್ತಿದ್ದೇನೆ ಎಂದು ಆಗ ಹೇಳಿಕೊಂಡಿದ್ದರು.
ನಟ ದರ್ಶನ್ ಈಗಾಗಲೇ 'ಡೆವಿಲ್' ಸಿನಿಮಾ ಚಿತ್ರೀಕರಣ ಪುನರಾರಂಭಿಸಿದ್ದಾರೆ. ರಾಜಸ್ಥಾನದಲ್ಲಿ ಒಂದು ಶೆಡ್ಯೂಲ್ ಬಳಿಕ ಬೆಂಗಳೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಯಿತು. ರಾಜಸ್ಥಾನದಲ್ಲಿ ನಡೆದ ಚಿತ್ರೀಕರಣಕ್ಕೆ ಪತ್ನಿ ವಿಜಯಲಕ್ಷ್ಮಿ ಕೂಡ ದರ್ಶನ್ ಜೊತೆ ಹೋಗಿ ಬಂದಿದ್ದರು. ಇನ್ನು ನಿನ್ನೆಯಷ್ಟೆ(ಮೇ 18) ಆಪ್ತರೊಬ್ಬರ ಮದುವೆ ಸಮಾರಂಭದಲ್ಲಿ ದರ್ಶನ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಕ್ಲೀನ್ ಶೇವ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.
'ಡೆವಿಲ್' ಚಿತ್ರಕ್ಕಾಗಿ ಈ ಲುಕ್ ಇರಬಹುದು ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಪ್ರಕಾಶ್ ನಿರ್ಮಿಸಿ ನಿರ್ದೇಶಿಸುತ್ತಿರುವ ಈ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಭಾರೀ ಸದ್ದು ಮಾಡ್ತಿದೆ. ಬಹಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಈ ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ.
ರಚನಾ ರೈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ಕೂಡ ಮುಖ್ಯವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಆಗಿ ದರ್ಶನ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಲೀಕ್ ಆಗಿದ್ದ ಸೆಟ್ ಫೋಟೊವೊಂದು ಇಂತಹ ಊಹಾಪೋಹಕ್ಕೆ ಕಾರಣವಾಗಿದೆ.
ಇನ್ನುಳಿದಂತೆ ಜೋಗಿ ಪ್ರೇಮ್ ನಿರ್ದೇಶನದ ಚಿತ್ರವೊಂದನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡಲಿದೆ. ಬಳಿಕ ಶೈಲಜಾ ನಾಗ್ ನಿರ್ಮಾಣದ 'ಸಿಂಧೂರ ಲಕ್ಷ್ಮಣ' ಚಿತ್ರದಲ್ಲಿ ನಟಿಸಬೇಕಿದೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











