ಪತಿ ದರ್ಶನ್ ಬಿಡುಗಡೆಗೆ ಅಸ್ಸಾಂನಲ್ಲಿರುವ ಕಾಮಾಕ್ಯ ದೇವಿಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ...!
ಅ'ಪವಿತ್ರ ಸಂಬಂಧ'ಕ್ಕೆ ದರ್ಶನ್ ಹಾತೊರೆಯದಿದ್ದರೆ, ದರ್ಶನ್ ಇವತ್ತು ತಮ್ಮ ಅಭಿಮಾನಿಗಳ ನಡುವೆ ಇರುತ್ತಿದ್ದರು. ತಲೆ ಎತ್ತಿ ನಡೆಯುತ್ತಿದ್ದರು. ಇಷ್ಟೇ ಅಲ್ಲ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನ ಜೊತೆ ನೆಮ್ಮದಿಯಿಂದ ಇರುತ್ತಿದ್ದರು. ಆದರೆ, ಸಹವಾಸ ದೋಷ. ಇವತ್ತು ದರ್ಶನ್ ಕಂಬಿಯ ಹಿಂದೆ ಇದ್ದಾರೆ.
ಈ ಕಡೆ ಪತಿಯನ್ನೂ ಜೈಲಿನಿಂದ ಹೊರ ತರಲು ವಿಜಯಲಕ್ಷ್ಮಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ದೇವರ ಮೊರೆ ಹೋಗಿದ್ದಾರೆ. ದೈವ ಭಕ್ತೆಯಾಗಿರುವ ವಿಜಯಲಕ್ಷ್ಮಿ ದೇವರ ಮೇಲೆ ಅಕ್ಷರಶ ಬಾರ ಹಾಕಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ದರ್ಶನ್ ಜೈಲು ಪಾಲಾದ ದಿನದಿಂದ ವಿಚಲಿತಗೊಂಡ ವಿಜಯಲಕ್ಷ್ಮಿ ಇಲ್ಲಿಯವರೆಗೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ಕೊಲ್ಲೂರಿಗೆ ಈ ಹಿಂದೆ ತೆರಳಿ ನರಸಿಂಹ ಅಡಿಗ ಎಂಬುವವರ ಬಳಿ ನವಚಂಡಿಕಾ ಯಾಗ ಮಾಡಿಸಿದ್ದಾರೆ. ಹೋಮ ಹವನ ಮಾಡಿಸಿದ್ದಾರೆ. ಭೀಮನ ಅಮಾವಾಸ್ಯೆ ದಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಮಂತ್ರಾಲಯಕ್ಕೆ ತೆರಳಿ ಗುರು ರಾಘವೇಂದ್ರರ ಪಾದಾರವೃಂದಕ್ಕೆ ನಮಸ್ಕರಿಸಿ ಬಂದಿದ್ದಾರೆ.
ಇಂಥಾ ವಿಜಯಲಕ್ಷ್ಮೀ ಈಗ ಅಸ್ಸಾಂನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಪತಿಯ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ಧಾರೆ. ಅಂದ್ಹಾಗೇ ಅಸ್ಸಾಂನ ಗುವಾಹಟಿಯಲ್ಲಿರುವ ಈ ಕಾಮಾಕ್ಯ ದೇವಸ್ಥಾನ ಭಾರತದ 51 ಶಕ್ತಿಪೀಠಗಳ ಪೈಕಿ ಒಂದು. ಇಲ್ಲಿ ಬಂದು ಶ್ರದ್ದೆ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಹಲವು ಸಮಸ್ಯೆ ದೂರವಾಗುತ್ತವೆ ಎನ್ನುವ ಪ್ರತೀತಿ ಇದೆ. ದುಷ್ಟ ಶಕ್ತಿಗಳಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಅನೇಕರು ಭೇಟಿ ನೀಡುತ್ತಾರೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ ಚಿತ್ರರಂಗದ ಹಲವು ತಾರೆಯರು ಮತ್ತು ರಾಜಕಾರಣಿಗಳು ಕೂಡ ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಕರುನಾಡಿನ ಈಗಿನ ಉಪಮುಖ್ಯಮಂತ್ರಿ ಈ ಹಿಂದೆ ಐಟಿ, ಇಡಿ , ಮತ್ತು ಸಿಬಿಐ ಸಂಸ್ಥೆಗಳ ನಿರಂತರ ತನಿಖೆಗಳಿಂದ ಹೈರಾಣಾಗಿದ್ದಾಗ 2020ರಲ್ಲಿ ಈ ದೇವತೆಯ ಮೊರೆ ಹೋಗಿದ್ದರು. ವಿಶೇಷ ಪೂಜೆ ಸಲ್ಲಿಸಿದ್ದರು. ಇನ್ನೂ ಕನ್ನಡದಲ್ಲಿ ಜಗ್ಗೇಶ್, ಕಾವ್ಯಾ ಶಾಸ್ತ್ರಿ, ಕಾವ್ಯಾ ಶೆಟ್ಟಿ, ರಾಗಿಣಿ ದ್ವಿವೇದಿ, ನಿಶ್ವಿಕಾ ನಾಯ್ಡು ಕೂಡ ಕಾಮಾಕ್ಯ ದೇವಿಯ ದರ್ಶನ ಪಡೆದು ಪುನೀತರಾಗಿದ್ದರು. ಕೇವಲ ಕನ್ನಡ ಚಿತ್ರರಂಗದವರಷ್ಟೇ ಅಲ್ಲ ಕಂಗನಾ ರಣಾವತ್, ಸಾರಾ ಅಲಿ ಖಾನ್, ಸೇರಿ ಅನೇಕರು ಕೂಡ ಈ ದೇವಿಯ ದರ್ಶನವನ್ನು ಹಿಂದೆ ಮಾಡಿದ್ದಾರೆ. ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ಧಾರೆ. ಅನಂತ್ ಅಂಬಾನಿ ಮದುವೆ ಮುನ್ನ ಅಂಬಾನಿ ಕುಟುಂಬ ಕೂಡ ಈ ದೇವಾಲಯಕ್ಕೆ ಭೇಟಿ ನೀಡಿತ್ತು.

ಇನ್ನೂ ಮಕ್ಕಳಾಗದವರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ, ಸಂತಾನ ಭಾಗ್ಯವಾಗುತ್ತೆ ಎನ್ನುವ ನಂಬಿಕೆ ಕೂಡ ಇದೆ. ಕಾಮಾಕ್ಯ ದೇವಿಯ ವಿಶೇಷ ಎಂದರೆ ಇಲ್ಲಿ ಕಲ್ಲಿನಿಂದ ಕುಂಕುಮ ತಯಾರಿಸಲಾಗುತ್ತೆ. ಕಾಮಾಕ್ಯ ಸಿಂಧೂರ್ ಎಂದೇ ಪ್ರಸಿದ್ಧವಾಗಿರುವ ಈ ಕುಂಕುಮವನ್ನು ಮಹಿಳೆಯರು ಭಕ್ತಿ ಭಾವದಿಂದ ಹಣೆಗಿಟ್ಟುಕೊಳ್ಳುತ್ತಾರೆ.
ಹೀಗೆ ಹಲವು ಕಾರಣಗಳಿಂದ ವಿಶೇಷವಾಗಿರುವ, ಗುವಾಹಟಿ ನಗರದ ಪಶ್ಚಿಮದಲ್ಲಿರುವ ಬಹಳ ಶಕ್ತಿಯುತವಾದ ಕ್ಷೇತ್ರಕ್ಕೆ ಈಗ ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿದ್ದಾರೆ. ತಮ್ಮ ಪತಿ ದರ್ಶನ್ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸಿದ್ಧಾರೆ.
ಒಟ್ನಲ್ಲಿ ರಾಮನ ಬರುವಿಕೆಗಾಗಿ ಶಬರಿ ಕಾದಂತೆ, ದರ್ಶನ್ ಬರುವಿಕೆಗಾಗಿ ವಿಜಯಲಕ್ಷ್ಮಿ ಕಾಯುತ್ತಿದ್ದಾರೆ. ಆದರೆ, ದರ್ಶನ್ ಸೆರೆವಾಸದಿಂದ ಮುಕ್ತರಾಗಿ ಹೊರ ಬರುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಆ ದೇವರಿಗೆ ಗೊತ್ತು.


Click it and Unblock the Notifications











