ಕನ್ನಡ ನಟಿ ವರ್ಣಶ್ರೀ ಅಲಿಯಾಸ್ ವಿಜಿ ಆತ್ಮಹತ್ಯೆ
ಎಂಬತ್ತರ ದಶಕದಲ್ಲಿ ಕನ್ನಡದ ಒಂದೆರಡು ವರ್ಣ ಚಿತ್ರಗಳಲ್ಲಿ ನಟಿಸಿದ್ದ ನಟಿ ವರ್ಣಶ್ರೀ ಚೆನ್ನೈನಲ್ಲಿ ನವೆಂಬರ್ 27ರ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1981ರಲ್ಲಿ ಅಬ್ಬಾಯಿ ನಾಯ್ಡು ಅವರ ‘ತಾಯಿಯ ಮಡಿಲಲ್ಲಿ ’ ಚಿತ್ರದಲ್ಲಿ ಸಹ ಕಲಾವಿದೆಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ವರ್ಣಶ್ರೀ, ಆನಂತರ ‘ಅಂದದ ಅರಮನೆ’ ಚಿತ್ರದಲ್ಲಿ ಅನಂತ್ನಾಗ್ಗೆ ನಾಯಕಿಯಾಗಿ ನಟಿಸಿದರು. ಇತರ ನಟಿಯರಂತೆ ಈಕೆಯೂ ತಮಿಳಿಗೆ ಪದಾರ್ಪಣೆ ಮಾಡಿದರು.
ತಮಿಳಿನಲ್ಲಿ ವರ್ಣಶ್ರೀ, ವಿಜಿ ಎಂಬ ನಾಮಾಂಕಿತದಿಂದ ಖ್ಯಾತರಾದರು. ‘ಕೋಳಿ ಕೂವುದು’ ಚಿತ್ರದ ಮೂಲಕ ತಮಿಳಿನಲ್ಲಿ ಮಿಂಚಿದರಾದರೂ ಕಷ್ಟಗಳು ಇವರ ಬೆನ್ನೇ ಬಿಡಲಿಲ್ಲ. ಷೂಟಿಂಗ್ ಸಂದರ್ಭದಲ್ಲಿ ಗಾಯಗೊಂಡ ವಿಜಿ ಅಲಿಯಾಸ್ ವರ್ಣಶ್ರೀ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ವೈದ್ಯರ ನಿರ್ಲಕ್ಷ್ಯದಿಂದ ವಿಜಿ ನಡೆದಾಡುವ ಶಕ್ತಿಯನ್ನೇ ಕಳೆದುಕೊಳ್ಳಬೇಕಾದ ಸ್ಥಿತಿಯೂ ಬಂದಿತ್ತು. ಛಲ ಬಿಡದ ವಿಜಿ ತಮಿಳುನಾಡು ಮುಖ್ಯಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಪತ್ರ ಬರೆದರು.
ಕರುಣಾನಿಧಿ ಅವರ ನೆರವಿನಿಂದ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಜಿ ಮತ್ತೆ ನಡೆದಾಡುವಂತಾದರಾದರೂ, ಚಲನಚಿತ್ರಗಳಲ್ಲಿ ಅವಕಾಶ ಇಲ್ಲದೆ ಕಿರುತೆರೆಗೆ ಧುಮುಕಿದರು. ಟಿ.ವಿಗೆ ಕಾಲಿಟ್ಟಿದ್ದೇ ವಿಜಿ ಅವಸಾನಕ್ಕೂ ಕಾರಣವಾಯಿತು. ಟೆಲಿ ಧಾರಾವಾಹಿಗಳ ನಿರ್ದೇಶಕ ಎ.ಆರ್. ರಮೇಶ್ ಅವರೊಂದಿಗೆ ವಿಜಿಗೆ ಪ್ರೇಮಾಂಕುರ. ರಮೇಶ್ ಮದುವೆಯಾಗುವುದಾಗಿಯೂ ಹೇಳಿದ್ದರು. ಕೊನೆಗೆ ಕೈಕೊಟ್ಟರು.
ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವಜಿ ಅಲಿಯಾಸ್ ಕನ್ನಡದ ವರ್ಣಶ್ರೀ - ರಮೇಶ್ರನ್ನು ಕರೆಸಿ ಮನಸ್ಸು ತೃಪ್ತಿಯಾಗುವಷ್ಟು ಬೈದು, ಕೊನೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ರಮೇಶ್ರೊಂದಿಗೆ ನಡೆದ ಸಂಪೂರ್ಣ ಸಂಭಾಷಣೆಯನ್ನು ವಿಜಿ ಧ್ವನಿಮುದ್ರಿಸಿಕೊಂಡಿದ್ದರು.
ವರ್ಣಮಯ ಬದುಕಿನ ಕನಸುಕಂಡು ರಜತ ಪರದೆ - ಕಿರುತೆರೆಗೆ ಕಾಲಿಟ್ಟ ವಿಜಿ ದುರಂತಾಂತ್ಯ ಕಾಣುವಂತಾಯ್ತು. ತಮ್ಮ ಸಾವಿಗೆ ರಮೇಶ್ನನ್ನೇ ಹೊಣೆ ಮಾಡಿ ವಿಜಿ ಪತ್ರವೊಂದನ್ನೂ ಬರೆದಿಟ್ಟಿದ್ದಾರೆ. ಅತ್ಯುತ್ತಮ ಡ್ಯಾನ್ಸರ್ ಆಗಿದ್ದ ಹಾಗೂ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಗಟ್ಟಿಗಿತ್ತಿ ಬೆಡಗಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸೂಕ್ಷ್ಮ ಎಂದು ಯಾರೂ ಎಣಿಸಿರಲಿಲ್ಲ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications