ವರಮಹಾಲಕ್ಷ್ಮಿ ಹಬ್ಬಕ್ಕೆ ವಿಕ್ರಾಂತ್ ರೋಣ ಅಪ್ಡೇಟ್ ಕೊಟ್ಟ ಸುದೀಪ್
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪ್ರತಿಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಬಂದಿದೆ. ಸಿನಿಮಾ ಆರಂಭವಾದ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದೆ. ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಿರುವ ಅಭಿಮಾನಿಗಳು ಚಿತ್ರವನ್ನು ಆದಷ್ಟೂ ಬೇಗ ನೋಡಲು ಕಾತುರರಾಗಿದ್ದಾರೆ. ಹಾಗಾಗಿ, ವಿಕ್ರಾಂತ್ ರೋಣ ಯಾವಾಗ ಬಿಡುಗಡೆ ಮಾಡ್ತೀರಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಲೇ ಇದ್ದಾರೆ.
ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದೆ. ಸುದೀಪ್ ಸೇರಿದಂತೆ ಪ್ರಮುಖ ಕಲಾವಿದರು ಡಬ್ಬಿಂಗ್ ಮುಗಿಸಿದ್ದರು. ಇತ್ತೀಚಿಗಷ್ಟೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. 'ಗದಂಗ್ ರಕ್ಕಮ್ಮ'ನ ಎಂಟ್ರಿ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ, ಕೊರೊನಾ ಎರಡನೇ ಅಲೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಚಿತ್ರತಂಡ ಈಗ ಪುನಃ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸ್ಟೈಲಿಶ್ ಫೋಟೋ ಶೇರ್ ಮಾಡಿರುವ ಸುದೀಪ್ ಚಿತ್ರದ ಅಪ್ಡೇಟ್ ಕೊಟ್ಟಿದ್ದಾರೆ. ಮುಂದೆ ಓದಿ...

ವರಮಹಾಲಕ್ಷ್ಮಿ ಹಬ್ಬಕ್ಕೆ ಬರಬೇಕಿತ್ತು
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ವಿಕ್ರಾಂತ್ ರೋಣ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಗೆ ಬರಬೇಕಿತ್ತು. ಈ ಹಿಂದಿನ ಯೋಜನೆಯಂತೆ ಆಗಸ್ಟ್ 20ಕ್ಕೆ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ಎರಡನೇ ಅಲೆ, ಲಾಕ್ಡೌನ್ ಈ ಎಲ್ಲಾ ಯೋಜನೆಯನ್ನು ತಲೆಕೆಳಗಾಗಿಸಿತು. ಈ ಬಗ್ಗೆ ಸುದೀಪ್ ಸಹ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಸುದೀಪ್ ನಿರಾಸೆ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಪ್ರೊಡಕ್ಷನ್ ಆರಂಭ
ಕೊರೊನಾ ಎರಡನೇ ಲಾಕ್ಡೌನ್ ಹಾಗೂ ಮೂರನೇ ಅಲೆಯ ಭೀತಿಯಿಂದ ಚಿತ್ರದ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇದೀಗ, ಮತ್ತೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಕೊಡಲಾಗಿದೆ ಎಂದು ಸ್ವತಃ ಸುದೀಪ್ ಮಾಹಿತಿ ನೀಡಿದ್ದಾರೆ. ಸಮಸ್ತ ನಾಗರೀಕರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ತಿಳಿಸಿರುವ ಸುದೀಪ್ ವಿಕ್ರಾಂತ್ ರೋಣದ ಪೋಸ್ಟ್ ಪ್ರೊಡಕ್ಷನ್ ಪುನರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಹೊಸ ಫೋಟೋಶೂಟ್
ಹಬ್ಬಕ್ಕೆ ಶುಭಕೋರಿರುವ ಸುದೀಪ್ ಸ್ಟೈಲಿಶ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ''ಬಹಳ ದಿನಗಳ ನಂತರ ವೈಯಕ್ತಿಕವಾಗಿ ಮಾಡಿದ ಫೋಟೋಶೂಟ್'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಬಹಳ ಸುಂದರವಾಗಿ ಕಾಣ್ತಿದ್ದೀರಾ ಸರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ರಿಲೀಸ್ ಬಗ್ಗೆ ಸ್ಪಷ್ಟತೆ ಇಲ್ಲ
'ವಿಕ್ರಾಂತ್ ರೋಣ' ಚಿತ್ರಕ್ಕೂ ಮೊದಲು ಸುದೀಪ್ ನಟಿಸಿರುವ ''ಕೋಟಿಗೊಬ್ಬ-3' ಸಿನಿಮಾ ಬಿಡುಗಡೆಯಾಗಬೇಕಿದೆ. ಈ ಚಿತ್ರ ಸಂಪೂರ್ಣವಾಗಿ ರೆಡಿ ಇದೆ. ಥಿಯೇಟರ್ನಲ್ಲಿ 100 ಪರ್ಸೆಂಟ್ ಅನುಮತಿ ಸಿಕ್ಕಿಲ್ಲ ಎಂದು ಕಾಯುತ್ತಿದೆ. ಮೊದಲು ಈ ಚಿತ್ರ ಬರಲಿ ಎಂದು ಸುದೀಪ್ ಮತ್ತು ವಿಕ್ರಾಂತ್ ರೋಣ ಚಿತ್ರತಂಡವೂ ಕಾಂಪ್ರುಮೈಸ್ ಆಗಿರುವ ಹಿನ್ನೆಲೆ ಅನೂಪ್ ಭಂಡಾರಿ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿಲ್ಲ. 'ಕೋಟಿಗೊಬ್ಬ-3' ಚಿತ್ರದ ರಿಲೀಸ್ ಮೇಲೆ ವಿಕ್ರಾಂತ್ ರೋಣನ ಎಂಟ್ರಿ ನಿಂತಿದೆ.

ವಿಕ್ರಾಂತ್ ರೋಣ ಚಿತ್ರದ ಬಗ್ಗೆ
ಅನೂಪ್ ಭಂಡಾರಿ ನಿರ್ದೇಶಿಸಿರುವ ಈ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ತಯಾರಾಗಿದೆ.


Click it and Unblock the Notifications











