'ವಿಕ್ರಾಂತ್ ರೋಣ' ಚಿತ್ರೀಕರಣ ಮುಕ್ತಾಯ: ಚಿತ್ರತಂಡಕ್ಕೆ ವಿದಾಯ ಹೇಳಿದ ಸುದೀಪ್
ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದ ಚಿತ್ರೀಕರಣ ನಿನ್ನೆ (ಜುಲೈ 15)ಕ್ಕೆ ಪೂರ್ಣಗೊಂಡಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಸಿನಿಮಾಕ್ಕಾಗಿ ತೊಡಗಿಸಿಕೊಂಡಿದ್ದ ಸುದೀಪ್ ಚಿತ್ರತಂಡಕ್ಕೆ ಭಾವುಕ ವಿದಾಯ ಹೇಳಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾ ಘೋಷಣೆ ಆದಾಗ ಹಂಚಿಕೊಂಡಿದ್ದ ಮೊದಲ ಚಿತ್ರವನ್ನು ಪುನಃ ಹಂಚಿಕೊಂಡಿರುವ ಸುದೀಪ್, ''ಈ ಚಿತ್ರದ ಮೂಲಕ ಸಿನಿಮಾ ಪ್ರಾರಂಭವಾಗಿತ್ತು. ಕಳೆದ ವರ್ಷ ಮಾರ್ಚ್ 02ಕ್ಕೆ ಸಿನಿಮಾ ಪ್ರಾರಂಭವಾಗಿತ್ತು. ಒಂದೂವರೆ ವರ್ಷದ ಬಳಿಕ ನಿನ್ನೆ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರತಂಡವನ್ನು ಹಾಗೂ ಸೆಟ್ಗೆ ಹೋಗುವುದನ್ನು ನಾನು ಬಹುವಾಗಿ ಮಿಸ್ ಮಾಡಿಕೊಳ್ಳಲಿದ್ದೇನೆ'' ಎಂದಿದ್ದಾರೆ ಸುದೀಪ್.
ಮತ್ತೊಂದು ಟ್ವೀಟ್ನಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಧನ್ಯವಾದ ಹೇಳಿರುವ ಸುದೀಪ್, ''ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನೀವು ಹೀಗೆ ಪ್ರೀತಿಯನ್ನು ಹಂಚುತ್ತಿರಿ. ನಿಮಗೆ ಶುಭವಾಗಲಿ'' ಎಂದಿದ್ದಾರೆ ಸುದೀಪ್.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ಹಾಡು ಸಿನಿಮಾದ ಮುಖ್ಯ ಅಂಶಗಳಲ್ಲಿ ಒಂದಾಗಿದೆ. ಮೇ ತಿಂಗಳಿನಲ್ಲಿಯೇ ಹಾಡಿನ ಚಿತ್ರೀಕರಣಕ್ಕೆ ಯೋಜನೆ ಹಾಕಲಾಗಿತ್ತು. ಆದರೆ ಲಾಕ್ಡೌನ್ ಆದ ಕಾರಣ ಹಾಡಿನ ಚಿತ್ರೀಕರಣ ತಡವಾಯ್ತು.
'ವಿಕ್ರಾಂತ್ ರೋಣ'ದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿದಿವೆ ಎನ್ನಲಾಗುತ್ತಿದೆ. ಎಡಿಟಿಂಗ್, ಡಬ್ಬಿಂಗ್, ವಿಎಫ್ಎಕ್ಸ್ ಕಾರ್ಯಗಳು ಸಹ ಮುಗಿದಿವೆ ಸಿನಿಮಾದ ಸೆನ್ಸಾರ್ ಬಾಕಿ ಇದ್ದು, ಚಿತ್ರಮಂದಿರಗಳು ತೆರೆದ ನಂತರ ಸೂಕ್ತ ಸಮಯ ನೋಡಿಕೊಂಡು ಸಿನಿಮಾ ಬಿಡುಗಡೆ ಆಗಲಿದೆ.
Recommended Video
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸುದೀಪ್ ಜೊತೆಗೆ ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ, ನೀತಾ ಅಶೋಕ್ ಹಾಗೂ ಇತರರು ನಟಿಸಿದ್ದಾರೆ. ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











