ಆ ದುರಂತ ನಡೆಯುವ ಮುನ್ನ ವಿನಯ್ ಗುರೂಜಿ ಹೀಗೆ ಹೇಳಿದ್ದರು
ಕನ್ನಡ ಚಿತ್ರರಂಗ ಸುಲಭಕ್ಕೆ ಮರೆಯಲಾಗದ ದುರಂತ ನಟರಾದ ಅನಿಲ್ ಹಾಗೂ ಉದಯ್ ಚಿತ್ರೀಕರಣದ ವೇಳೆ ನೀರಲ್ಲಿ ಮುಳುಗಿ ಅಸುನೀಗಿದ್ದು.
2017 ರಲ್ಲಿ ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ನಿಂದ ನೀರಿಗೆ ಧುಮುಕಿದ ನಟ ಅನಿಲ್ ಹಾಗೂ ಉದಯ್ ಇಬ್ಬರೂ ಹೊರಗೆ ಬರಲೇ ಇಲ್ಲ. ದುನಿಯಾ ವಿಜಯ್ ಸಾವಿನಿಂದ ಪಾರಾದರು ಆದರೆ ಅನಿಲ್ ಹಾಗೂ ಉದಯ್ ನೀರಿನಲ್ಲಿಯೇ ಪ್ರಾಣ ಬಿಟ್ಟರು.
ಆದರೆ ಆ ದಿನ ಆ ಇಬ್ಬರೂ ಹೆಲಿಕಾಪ್ಟರ್ನಿಂದ ಕೆಳಗೆ ಹಾರುವ ಕೆಲವೇ ನಿಮಿಷಗಳ ಮುಂಚೆ ಅಲ್ಲಿಗೆ ವಿನಯ್ ಗುರೂಜಿ ಹೋಗಿದ್ದರು. ಅಂದು ಅವರು ಆಡಿದ್ದ ಮಾತು, ನಡೆದುಕೊಂಡಿದ್ದ ರೀತಿಯ ಬಗ್ಗೆ ಆ ಸಿನಿಮಾದ ಫೈಟ್ ಮಾಸ್ಟರ್ ಆಗಿದ್ದ ರವಿವರ್ಮ 'ನ್ಯೂಸ್ಫಸ್ಟ್'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

'ಕುಂಬಳಕಾಯಿ ಒಡೆಯಿರಿ ಎಂದರು ವಿನಯ್ ಗುರೂಜಿ'
ಹೆಲಿಕಾಪ್ಟರ್ನಿಂದ ಹಾರುವ ಶಾಟ್ಗೆ ಎಲ್ಲರೂ ರೆಡಿಯಾಗಿದ್ದೆವು. ಆ ವೇಳೆಗೆ ಅಲ್ಲಿಗೆ ವಿನಯ್ ಗುರೂಜಿ ಬಂದರು. ಇಲ್ಲಿ ಯಾಕೋ ಸರಿ ಹೋಗುತ್ತಿಲ್ಲ ಒಂದು ಕುಂಬಳಕಾಯಿ ತಂದು ಒಡೆಯಿರಿ ಎಂದು ಹೇಳಿದರು. ಕೂಡಲೇ ನಾವು ಕುಂಬಳಕಾಯಿ ತರಿಸಿ ಒಡೆಸಿದೆವು ಎಂದು ಅಂದು ನಡೆದ ಘಟನೆ ಬಿಚ್ಚಿಟ್ಟಿದ್ದಾರೆ ರವಿವರ್ಮ.

'ಸಾಯಿಬಾಬ ಮೂರ್ತಿಯನ್ನು ದುನಿಯಾ ವಿಜಯ್ಗೆ ಕೊಟ್ಟರು'
ಆ ವೇಳೆಗೆ ಇನ್ನೂ ಹೆಲಿಕಾಪ್ಟರ್ ಮೇಲೆ ಹಾರಿಸಿರಲಿಲ್ಲ. ಕೆಳಗೆ ಲ್ಯಾಂಡ್ ಮಾಡಿಯೇ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಿಕೊಂಡೆವು. ಆದರೆ ಯಾಕೋ ವಿನಯ್ ಗುರೂಜಿ ಅವರಿಗೆ ಅಲ್ಲಿರುವುದು ಸರಿಬರದೆ ಹೊರಡುತ್ತೇನೆಂದು ಹೊರಟುಬಿಟ್ಟರು. ಆದರೆ ಅವರ ಕಾರಿನಲ್ಲಿದ್ದ ಸಾಯಿಬಾಬ ಮೂರ್ತಿಯನ್ನು ತೆಗೆದುಕೊಂಡು ಬಂದು ದುನಿಯಾ ವಿಜಯ್ ಕೈಗೆ ಕೊಟ್ಟರು ಎಂದು ನೆನಪಿಸಿಕಂಡಿದ್ದಾರೆ ಫೈಟ್ ಮಾಸ್ಟರ್ ರವಿವರ್ಮ.

ನನಗೆ ಸಾಯಿಬಾಬ ಮೂರ್ತಿ ಕೊಡಲು ಹೇಳಿದ್ದರು: ರವಿವರ್ಮಾ
ದುನಿಯಾ ವಿಜಯ್ಗೆ ಕೈಗೆ ಸಾಯಿಬಾಬ ಮೂರ್ತಿ ಕೊಟ್ಟು ಅದನ್ನು ರವಿವರ್ಮಗೆ ಕೊಡಿ ಎಂದು ವಿನಯ್ ಗುರೂಜಿ ಹೇಳಿದರು. ಅದನ್ನು ದುನಿಯಾ ವಿಜಯ್ ನನಗೆ ಕೊಟ್ಟರು. ವಿನಯ್ ಗುರೂಜಿ ಕೊಟ್ಟಿದ್ದಾರೆ ನೀನೆ ಇಟ್ಟುಕೊಳ್ಳಬೇಕಂತೆ ಎಂದು ಅದನ್ನು ನನಗೆ ಕೊಟ್ಟರು ಎಂದು ಅಂದಿನ ದಿನ ನೆನಪು ಮಾಡಿಕೊಂಡಿದ್ದಾರೆ ರವಿವರ್ಮ.

ಅಂದು ದೊಡ್ಡ ದುರ್ಘಟನೆ ನಡೆಯಬೇಕಿತ್ತು: ವಿನಯ್
ಘಟನೆ ಎಲ್ಲ ಆಗಿ ನಾನು ಜೈಲಿಗೆ ಹೋಗಿ ಬಂದ ಮೇಲೆ ವಿನಯ್ ಗುರೂಜಿ ಬಳಿ ಬೇರೊಬ್ಬರಿಂದ ಘಟನೆ ಬಗ್ಗೆ ಕೇಳಿಸಿದೆ. ಅವರು ಹೇಳಿದರು, 'ಆ ದಿನ ಬಹಳ ದೊಡ್ಡ ದುರ್ಘಟನೆ ಆಗುವುದಿತ್ತು. ಕನಿಷ್ಟ 7 ಜನ ಸಾಯಬೇಕಿತ್ತು. ಆದರೆ ಮೂರಕ್ಕೇ ಮುಕ್ತಾಯವಾಗಿದೆ' ಎಂದು ಗುರೂಜಿ ಹೇಳಿದರು' ಎಂದಿದ್ದಾರೆ ರವಿವರ್ಮ.
Recommended Video

ಅನಿಲ್, ಉದಯ್ ಜೊತೆ ಇನ್ನೂ ಒಬ್ಬರು ಅಸುನೀಗಿದರು
ಅಂದು ಹೆಲಿಕಾಪ್ಟರ್ನಿಂದ ದುನಿಯಾ ವಿಜಯ್, ಅನಿಲ್ ಹಾಗೂ ಉದಯ್ ಮೂವರು ನೀರಿಗೆ ಬಿದ್ದರು. ಆದರೆ ದುನಿಯಾ ವಿಜಯ್ ಬಚಾವೇನೋ ಆದರು. ಆದರೆ ಅನಿಲ್ ಹಾಗೂ ಉದಯ್ ಅನ್ನು ಉಳಿಸಲು ಹೋದ ಒಬ್ಬ ಹಳ್ಳಿ ಯುವಕ ಅದೇ ನೀರಿನಲ್ಲಿ ಮುಳುಗಿ ಅಸುನೀಗಿದ್ದ.


Click it and Unblock the Notifications











