"ಇಷ್ಟು ದಿನ ಎಲ್ಲಿದ್ದಪ್ಪಾ?" ಯುವ ಪತ್ನಿ ಪೋಸ್ಟ್ ಬಗ್ಗೆ ವಿನಯ್ ರಾಜ್ಕುಮಾರ್ ಪ್ರತಿಕ್ರಿಯೆ
ಡಿಬಾಸ್ ಅಭಿಮಾನಿಗಳು ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆ ಎಂದು ನಟಿ ರಮ್ಯಾ ಗರಂ ಆಗಿದ್ದು ದೂರು ನೀಡಿದ್ದು ಗೊತ್ತೇಯಿದೆ. ತಮಗೆ ಕಳುಹಿಸಿದ ಅಶ್ಲೀಲ ಮೆಸೇಜ್ಗಳ ಸ್ಕ್ರೀನ್ಶಾಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗ ನಟ ಶಿವರಾಜ್ಕುಮಾರ್ ದಂಪತಿ, ಯುವ ರಾಜ್ಕುಮಾರ್ ಸೇರಿ ಕೆಲವರು ಆಕೆಗೆ ಬೆಂಬಲ ಸೂಚಿಸಿದ್ದರು. ಈ ನಡುವೆ ಯುವ ಪತ್ನಿ ಶ್ರೀದೇವಿ ಬೈರಪ್ಪ ಪೋಸ್ಟ್ ಸಹ ವೈರಲ್ ಆಗಿತ್ತು.
ದೊಡ್ಮನೆ ಕುಡಿ ವಿನಯ್ ಜೊತೆ ರಮ್ಯಾಗೆ ಅವರಿಗೆ ಉತ್ತಮ ಒಡನಾಟವಿದೆ. ವಿನಯ್ ಅವರನ್ನು ಚಿಕ್ಕಂದಿನಿಂದ ರಮ್ಯಾ ನೋಡಿದ್ದಾರೆ. ತಮಗೆ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ರಮ್ಯಾ ಹೇಳುತ್ತಿದ್ದಂತೆ ವಿನಯ್ "ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು" ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ.

ನಟ ಶಿವರಾಜ್ಕುಮಾರ್ ಪೋಸ್ಟ್ ಮಾಡಿ "ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖ೦ಡನೀಯ. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ನಿಮ್ಮ ನಿಲುವು ಸರಿಯಿದೆ, ರಮ್ಯಾ, ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ" ಎಂದು ಬೆಂಬಲ ಸೂಚಿಸಿದ್ದರು. ಶಿವಣ್ಣ ದಂಪತಿ, ವಿನಯ್ ಹೀಗೆ ರಮ್ಯಾ ಪರ ಮಾತನಾಡುತ್ತಿದ್ದಂತೆ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದರು. ಬೇರೆ ಬೇರೆ ಸಂದರ್ಭಗಳಲ್ಲಿ ಮಾತನಾಡಲಿಲ್ಲ, ಈಗ ರಮ್ಯಾ ಪರ ಮಾತ್ರ ಮಾತನಾಡುತ್ತಿದ್ದೀರಾ? ಎಂದು ವ್ಯಂಗ್ಯವಾಡಿದ್ದರು. ಇದೇ ಪ್ರಶ್ನೆ ಯುವ ಪತ್ನಿ ಶ್ರೀದೇವಿ ಸಹ ಕೇಳಿದ್ದರು.
"ಮಾಧ್ಯಮಗಳಲ್ಲಿ ಮಹಿಳೆಯನ್ನು ಅವಮಾನಿಸುವುದರ ವಿರುದ್ಧ ಮಾತಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೆ ಸುಮ್ಮನೆ ಇದ್ರಲ್ಲ, ಆವಾಗ ನಿದ್ದೆ ಮಾಡ್ತಾ ಇದ್ರ ಎಲ್ಲಾ ?" ಎಂದು ಶ್ರೀದೇವಿ ಭೈರಪ್ಪ ಒಂದು ಪೋಸ್ಟ್ ಮಾಡಿದ್ದರು. ಇನ್ನು ವಿನಯ್ ಪೋಸ್ಟ್ ನೋಡಿ "ಇಷ್ಟು ದಿನ ಎಲ್ಲಿದ್ದಪ್ಪ" ಎಂದು ಬರೆದು ನಗುವ ಎಮೋಜಿ ಹಾಕಿ ಶ್ರೀದೇವಿ ವ್ಯಂಗ್ಯವಾಡಿದ್ದರು. ಸದ್ಯ ಶ್ರೀದೇವಿ ಅವರ ಈ ಪೋಸ್ಟ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ವಿನಯ್ ಪ್ರತಿಕ್ರಿಯಿಸಿದ್ದಾರೆ.

ವಿನಯ್ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಗ್ಯಾರಂಟಿ ನ್ಯೂಸ್ ಸಂದರ್ಶನದಲ್ಲಿ ಶ್ರೀದೇವಿ ವ್ಯಂಗ್ಯಭರಿತ ಪೋಸ್ಟ್ ಬಗ್ಗೆ ಕೇಳಿದ ಪ್ರಶ್ನೆಗೆ ವಿನಯ್ ಉತ್ತರಿಸಿದ್ದಾರೆ. "ರಮ್ಯಾ ಅವರ ಆ ಸನ್ನಿವೇಶಕ್ಕೆ ನಾನು ಪೋಸ್ಟ್ ಮಾಡಿದ್ದೆ ಅಲ್ವಾ? ಅದೇ ನನ್ನ ಉತ್ತರ. ಅದು ಬಿಟ್ಟು ಬೇರೆ ಏನು ಇಲ್ಲ" ಎಂದು ಹೇಳಿ ಸುಮ್ಮನಾಗಿದ್ದಾರೆ.
ಈಗಾಗಲೇ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಇಬ್ಬರೂ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. 2019ರಲ್ಲಿ ಯುವ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆ ಆಗಿದ್ದರು. ಶ್ರೀದೇವಿ ಮೈಸೂರು ಮೂಲದವರು. ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ. ಕೆಲ ಭಿನ್ನಾಭಿಪ್ರಾಯಗಳಿಂದ ಯುವ ರಾಜ್ಕುಮಾರ್ ದೂರಾಗಲು ಬಯಸಿದ್ದಾರೆ.


Click it and Unblock the Notifications











