ಮಲೆನಾಡಿನ ಪರಿಸರ, ರಕ್ತದ ಹೊಳೆ, ವಿನಯ್ ರಾಜ್ ಕುಮಾರ್ ''ಪೆಪೆ'' ಬಿಡುಗಡೆ ಯಾವಾಗ..?
''ಸಿದ್ದಾರ್ಥ'' ಸಿನಿಮಾದ ಮೂಲಕ ವಿನಯ್ ರಾಜ್ ಕುಮಾರ್ ಲಾಂಚ್ ಆದಾಗ ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ವಲಯದಲ್ಲೂ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾನೇ ಅಂದುಕೊಂಡಂತೆ ಆಗಲಿಲ್ಲ. ಎರಡನೇದಾದರೂ ಕೈ ಹಿಡಿಯಬಹುದು ಅಂದುಕೊಂಡಿದ್ದರು. ಆದರೆ.. ''ರನ್ ಆಂಟನಿ'' ಕೂಡ ಗೆಲ್ಲಲಿಲ್ಲ. ಇದೇ ಹೊತ್ತಲ್ಲಿ ದೇವನೂರು ಚಂದ್ರು ನಿರ್ದೇಶನದ ''ಗ್ರಾಮಾಯಣ'' ಸಿನಿಮಾದ ಕಂಟೆಂಟು ಎಲ್ಲರನ್ನೂ ಆಕರ್ಷಿಸಿತು. ಆದರೆ ನಿರ್ಮಾಪಕರ ಅಕಾಲಿಕ ಮರಣದಿಂದ ಬಿಡುಗಡೆಯಾಗದೇ ಉಳಿಯಿತು. ಪುಷ್ಕರ್ ಮಲ್ಲಿಕಾರ್ಜುನ ನಿರ್ಮಾಣದ ʻ'ಟೆನ್'ʼ ಎನ್ನುವ ಸಿನಿಮಾ ಬಿಡುಗಡೆಯಾಗಿದ್ದು ಹೋಗಿದ್ದು ಗೊತ್ತಾಗಲೇ ಇಲ್ಲ.
ಹೀಗೆ ನಿರೀಕ್ಷೆಗಳೆಲ್ಲಾ ಕಮರಿಹೋಗಿದ್ದಾಗ ನಿಜಕ್ಕೂ ವಿನಯ್ ರಾಜ್ ಕುಮಾರ್ ಕೈ ಹಿಡಿದು ಮೇಲೆತ್ತಿದ್ದು ಸುಧೀರ್ ಶ್ಯಾನುಭೋಗ್ ನಿರ್ದೇಶನದ ''ಅನಂತು v/s ನುಸ್ರತ್'' ಎನ್ನುವ ಚೆಂದದ ಸಿನಿಮಾ. ವಿನಯ್ ಅವರಿಗಂತಲೇ ಸೃಷ್ಟಿಸಿದ ಸಿನಿಮಾ ಅದಾಗಿತ್ತು. ಕೆ.ಜಿ.ಎಫ್ ಅಬ್ಬರದ ಅಲೆಯ ನಡುವೆ ಕಳೆದುಹೋಯ್ತು ಅನ್ನೋದನ್ನು ಬಿಟ್ಟರೆ, ಈ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿದರು. ವಿಮರ್ಶಕರು ಕೊಂಡಾಡಿದ್ದರು. ಪ್ರಜ್ಞಾವಂತ ನಿರ್ದೇಶಕರ ಕಣ್ಣು ವಿನಯ್ ಮೇಲೆ ಬಿದ್ದಿದ್ದೇ ಆಗ. ಇದಕ್ಕೆ ಉದಾಹರಣೆ ಎಂಬಂತೆ ಕಸುಬುದಾರ ನಿರ್ದೇಶಕ ಸಿಂಪಲ್ ಸುನೀ ನಿರ್ದೇಶನದ ''ಒಂದು ಸರಳ ಪ್ರೇಮಕಥೆ'' ಚಿತ್ರಕ್ಕೆ ಬಣ್ಣ ಹಚ್ಚಿದರು. ಗೆಲುವಿನ ರುಚಿಯನ್ನೂ ಕಂಡರು.

ಹೀಗೆ ಚಿತ್ರದಿಂದ ಚಿತ್ರಕ್ಕೆ ತಾವೊಬ್ಬ ''ಕ್ಲಾಸ್'' ಆಕ್ಟರ್ ಅನ್ನುವುದನ್ನೂ ಸಾಬೀತು ಮಾಡ್ತಾನೇ ಬಂದ ವಿನಯ್ ರಾಜ್ ಕುಮಾರ್, ''ಪೆಪೆ'' ಚಿತ್ರದ ಮೂಲಕ ''ಮಾಸ್'' ಅವತಾರವನ್ನೂ ಎತ್ತಿದರು. ಆದರೆ, ಅದ್ಯಾಕೋ ಈ ಸಿನಿಮಾ ತಡವಾಗುತ್ತಾನೇ ಬಂತು. ಆದರೆ ಈಗ ವಿನಯ್ ಅವರ ರಗಡ್ ಲುಕ್ನ್ನ ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಇದರ ಸೂಚನೆ ಎಂಬಂತೆ ''ಪೆಪೆ'' ಚಿತ್ರ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ''ಪೆಪೆ''ಗೆ ''ಎ'' ಸರ್ಟಿಫಿಕೇಟ್ ಸಿಕ್ಕಿದೆ.
ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಈ ಚಿತ್ರದಲ್ಲಿ ಮಲೆನಾಡಿನೊಂದಿಗೆ ಸಂಬಂಧ ಇರುವ ಪಾತ್ರದಲ್ಲಿ ವಿನಯ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ.. ''ಪ್ರದೀಪ್'' ಇವರ ಪಾತ್ರದ ಹೆಸರು. ಈ ಪಾತ್ರದಿಂದಾಗಿಯೇ ''ಪೆಪೆ'' ಎಂಬ ಶೀರ್ಷಿಕೆ ಹುಟ್ಟಿದ್ದು ಎಂದು ಹಿಂದೊಮ್ಮೆ ವಿನಯ್ ಹೇಳಿಕೊಂಡಿದ್ದರು. ಇನ್ನೂ ''ಪೆಪೆ'' ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರ ಪಾತ್ರದ ಪರಿಚಯ ಮಾಸ್ ಆದರೂ ಸಿದ್ಧ ಸೂತ್ರಕ್ಕೆ ಜೋತು ಬಿದ್ದು ಮಾಡಿರುವ ಸಿನಿಮಾ ಇದಲ್ಲ. ಇಲ್ಲಿ ಒಂದೊಳ್ಳೆ ಕಥೆ ಇದೆ. ಮನರಂಜನೆ ಇದೆ. ಡ್ರಾಮಾ ಇದೆ. ಇನ್ನೂ ಚಿತ್ರತಂಡ ಖುದ್ದು ಹೇಳಿಕೊಂಡಂತೆ ಇಡೀ ಚಿತ್ರದ ಸೌಂಡ್ ಡಿಸೈನ್ ಬೇರೆ ರೀತಿಯಲ್ಲಿದೆ. ಒಂದು ರೀತಿ ಪರಿಪೂರ್ಣ ಮಿಶ್ರಣದ ಸಿನಿಮಾ ''ಪೆಪೆ''.

ಕಾಜಲ್ ಕುಂದರ್ ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್ ಹೀಗೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಅಭಿಷೇಕ್ ಜಿ. ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನವಿದೆ. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ ಸೆರೆ ಹಿಡಿಯಲಾಗಿದೆ. ಡಾ. ರವಿವರ್ಮ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಅವರ ಮಾರ್ಗದರ್ಶನದಲ್ಲಿ ವಿನಯ್ ರಾಜ್ ಕುಮಾರ್ ಇಲ್ಲಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ
ಒಟ್ನಲ್ಲಿ ಶುರುವಾದ ದಿನದಿಂದ ಇಲ್ಲಿಯವರೆಗೆ ಹತ್ತು ಹಲವು ಕಾರಣಗಳಿಂದ ಸದ್ದು ಮಾಡುತ್ತಾ, ಕುತೂಹಲ ಕೆರಳಿಸುತ್ತಾ ಬಂದ ''ಪೆಪೆ'' ಸದ್ಯ ಬಿಡುಗಡೆಗೆ ಸಂಪೂರ್ಣ ಸಿದ್ಧವಾಗಿದೆ. ಸೆನ್ಸಾರ್ ಅಂಗಳದಿಂದ ಎ ಸರ್ಟಿಫಿಕೇಟ್ ಪಡೆದ ''ಪೆಪೆ'' ಸದ್ಯದಲ್ಲಿಯೇ ಕರುನಾಡಿನೆಲ್ಲೆಡೆ ಬಿಡುಗಡೆಯಾಗಲಿದೆ.


Click it and Unblock the Notifications











