Vinish Darshan: ಬರ್ತ್ಡೇ ಸಂಭ್ರಮದಲ್ಲಿ ವಿನೀಶ್: ಮಗನ ಸ್ಯಾಂಡಲ್ವುಡ್ ಎಂಟ್ರಿ ಬಗ್ಗೆ ದರ್ಶನ್ ಏನಂತಾರೆ?
ಅಭಿಮಾನಿಗಳು ತಮ್ಮ ಹುಟ್ಟುಹಬ್ಬಕ್ಕೂ ಅಷ್ಟು ಸಂಭ್ರಮಿಸುತ್ತಾರೋ ಇಲ್ವೋ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅದ್ಧೂರಿಯಾಗಿ ಆಚರಿಸುತ್ತಾರೆ. ಒಮ್ಮೆ ಅಭಿಮಾನ ಅನ್ನೋದು ಬಂದುಬಿಟ್ಟರೆ ಮುಗೀತು. ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ. ನೆಚ್ಚಿನ ನಟನ ಸಂಭ್ರಮವೆಲ್ಲಾ ತಮ್ಮದೇ ಸಂಭ್ರಮ ಎಂದು ಖುಷಿಪಡುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ ಎಂಥದ್ದು ಅಂತ ಗೊತ್ತೇಯಿದೆ. ದರ್ಶನ್ ಹುಟ್ಟುಹಬ್ಬ ಬಂದ್ರೆ ಅಂದೇ ಅಭಿಮಾನಿಗಳಿಗೆ ದೀಪಾವಳಿ, ಯುಗಾದಿ ಸಂಭ್ರಮ. ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸವಕ್ಕೂ ಅಭಿಮಾನಿಗಳು ಶುಭ ಕೋರುತ್ತಾರೆ. ಇತ್ತೀಚೆಗೆ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬವನ್ನು ಕೂಡ ಆಚರಿಸುತ್ತಾ ಬರುತ್ತಿದ್ದಾರೆ.

ಈ ಬಾರಿ ವಿನೀಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಡಿಪಿ ರಿಲೀಸ್ ಮಾಡಿರುವ ಅಭಿಮಾನಿಗಳು ಕೇಕ್ ಕತ್ತರಿಸಿ, ಬಾಡೂಟ ಹಾಕಿ ಸಂಭ್ರಮಿಸಿದ್ದಾರೆ. ವಿನೀಶ್ ಬರ್ತ್ಡೇ ಸೆಲೆಬ್ರೇಷನ್ ಫೋಟೊ, ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇನ್ನು ವಿನೀಶ್ ಜೊತೆಗಿನ ದರ್ಶನ್ ವಿಡಿಯೋ, ಫೋಟೊಗಳು ಟ್ರೆಂಡಿಂಗ್ನಲ್ಲಿದೆ. 'ಐರಾವತ' ಹಾಗೂ 'ಯಜಮಾನ' ಚಿತ್ರದ ಸಣ್ಣ ಝಲಕ್ನಲ್ಲಿ ವಿನೀಶ್ ಕಾಣಿಸಿಕೊಂಡಿದ್ದನು.
ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟನ ಮಕ್ಕಳನ್ನು ತೆರೆಮೇಲೆ ನೋಡಲು ಬಯಸುತ್ತಾರೆ. ವಿನೀಶ್ ದರ್ಶನ್ ಚಿತ್ರರಂಗ ಎಂಟ್ರಿ ಬಗ್ಗೆ ಈಗಾಗಲೇ ದರ್ಶನ್ ಮಾತನಾಡಿದ್ದಾರೆ. 'ಯಜಮಾನ' ಸಿನಿಮಾ ಸಕ್ಸಸ್ ಮೀಟ್ನಲ್ಲೇ ಈ ಬಗ್ಗೆ ದರ್ಶನ್ಗೆ ಪ್ರಶ್ನೆ ಎದುರಾಗಿತ್ತು. ಆಗ ವಿನೀಶ್ ಸಿನಿಮಾ ಆಸಕ್ತಿ ಬಗ್ಗೆ ದರ್ಶನ್ ಮಾತನಾಡಿದ್ದರು.

"ಯಜಮಾನ' ಸಿನಿಮಾ ನೋಡಿ ಅವನ ಬಗ್ಗೆ ಬಿಟ್ಟು ಬೇರೆಯವರ ಬಗ್ಗೆ ಮಾತನಾಡಿದ. ಪ್ರತಿ ಬಾರಿ ಅವನು ಯಾವಾಗ ನೆಕ್ಟ್ ಸಿನಿಮಾ ಅಂತ ನನಗೆ ಕೇಳುತ್ತಾನೆ" ಎಂದಿದ್ದರು. ಆ ಮೂಲಕ ಚಿತ್ರರಂಗಕ್ಕೆ ಬರುವ ವಿನೀಶ್ ಆಸಕ್ತಿ ಬಗ್ಗೆ ದರ್ಶನ್ ಹೇಳಿದ್ದರು. ಇನ್ನು ನಿಮ್ಮ ಮಗ ವಿನೀಶ್ ಸಹ ಇಂಡಸ್ಟ್ರಿಗೆ ಬರುತ್ತಾರಾ? ಎಂಬ ಪ್ರಶ್ನೆಗೆ "ನನ್ನ ಮಗನನ್ನು ಸಹ ಖಂಡಿತ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೋದ ಮೇಲೆ ನಮ್ಮದೊಂದು ಬ್ರ್ಯಾಂಡ್ ಬೇಕಲ್ವಾ?" ಎಂದು ದರ್ಶನ್ ನಗುತ್ತಲೇ ಪ್ರತಿಕ್ರಿಯೆ ನೀಡಿದ್ದರು.
'ರಾಬರ್ಟ್' ಸಿನಿಮಾ ಪ್ರಚಾರದ ವೇಳೆ ನ್ಯೂಸ್ ಫಸ್ಟ್ ಸಂದರ್ಶನದಲ್ಲೂ ವಿನೀಶ್ ಸ್ಯಾಂಡಲ್ವುಡ್ ಎಂಟ್ರಿ ಬಗ್ಗೆ ದರ್ಶನ್ಗೆ ಪ್ರಶ್ನೆ ಎದುರಾಗಿತ್ತು. ಮಗನನ್ನು ಚಿತ್ರರಂಗಕ್ಕೆ ಯಾವಾಗ ಪರಿಚಯಿಸುತ್ತೀರಾ? ಎನ್ನುವ ಪ್ರಶ್ನೆಗೆ "ಮೊದಲು ಅವನು ಓದಲಿ. ಆಮೇಲೆ ಅವನಿಗೆ ಯಾವುದು ಸುಲಭವಾಗಿ ಸಿಗಬಾರದು. ಮೊದಲು ಕಸ ಹೊಡೆಯುವುದು ಕಲಿಯಲಿ. ಬಳಿಕ ಗಲ್ಲದ ಮೇಲೆ ಕೂರಲಿ. ಹೋಟೆಲ್ನಲ್ಲಿ ಮೊದಲು ಕಸ ಹೊಡೆಯವುದು ಕಲಿಯಬೇಕು. ಆಮೇಲೆ ಗಲ್ಲದ ಮೇಲೆ ಕೂರಬೇಕು. ನೇರವಾಗಿ ಗಲ್ಲದ ಮೇಲೆ ಕೂರಿಸಿದರೆ ಹೋಟೆಲ್ ಬೆಲೆ ಗೊತ್ತಾಗುವುದಿಲ್ಲ" ಎಂದಿದ್ದರು.
"ವಿನೀಶ್ ಮೊದಲು ಶೂಟಿಂಗ್ ಸೆಟ್ಗೆ ಬರಬೇಕು. ಲೈಟು, ಕ್ಯಾಮರಾ ಎಲ್ಲಾ ತಿಳಿದುಕೊಳ್ಳಬೇಕು. ನಾಲ್ಕು ಜನರ ಮುಂದೆ ಹೇಗೆ ಕ್ಯಾಮರಾ ಎದುರಿಸುವುದು ಅನ್ನೋದನ್ನು ಕಲಿತು ಬರಲಿ. ಈಗ ನನ್ನ ಅಕ್ಕನ ಮಗ ಚಂದು ರೆಡಿ ಆಗ್ತಿದ್ದಾನೆ. ಆವನನ್ನು ಕೂಡ ಶೂಟಿಂಗ್ ವೇಳೆ ಟೆಕ್ನಿಕಲ್ ಡಿಪಾರ್ಟ್ಮೆಂಟ್ಗೆ ಹಾಕ್ತೀನಿ. ಒಂದಷ್ಟು ದಿನ ಇಲ್ಲಿ ಮಣ್ಣು ಹೊರು ಅಂತ. ನನ್ನ ಜೊತೆ ಬರಂಗಿಲ್ಲ, ಕ್ಯಾರವಾನ್ ಬಳಸುವಂತಿಲ್ಲ. ಜೊತೆಗೆ ಊಟ ಮಾಡುವಂತಿಲ್ಲ. ಸಂಜೆ ಬಾಟ ಕೊಟ್ಟ ಮೇಲೆ ತಗೊಂಡು ಬರಬೇಕು. ಕ್ಯಾಮರಾ ಹಿಂದೆ ನಿಂತು ಏನು ಮಾಡುತ್ತಿದ್ದಾರೆ ಎಂದು ಕಲಿಯಬೇಕು. ನಾನು ಅದೇ ರೀತಿ ಕಲಿತು ಬಂದದ್ದು" ಎಂದು ಹೇಳಿದ್ದರು.
ಸದ್ಯ ಹೈಸ್ಕೂಲ್ನಲ್ಲಿ ಓದುತ್ತಿರುವ ವಿನೀಶ್ ದರ್ಶನ್ ಮುಂದೊಂದು ದಿನ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಅಭಿಮಾನಿಗಳು ಕೂಡ ಜ್ಯೂ. ದರ್ಶನ್ನ ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











