ತಮ್ಮದೇ ಸಿನಿಮಾದ ಟ್ರೈಲರ್ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿನೋದ್ ಪ್ರಭಾಕರ್: ಕಾರಣ ಅಪ್ಪು!
ತಮ್ಮ ಸಿನಿಮಾದ ಟ್ರೈಲರ್, ಟೀಸರ್, ಹಾಡುಗಳು ಕೆಟ್ಟದಾಗಿದ್ದರೂ ಸೂಪರ್ ಆಗಿವೆ. ಬಂಪರ್ ಆಗಿವೆ ಎಂದು ಹೊಗಳುವ ನಟ, ನಿರ್ದೇಶಕರು ಗಾಂಧಿ ನಗರದಲ್ಲಿ ತುಂಬಿದ್ದಾರೆ. ಆದರೆ ನಟ ವಿನೋದ್ ಪ್ರಭಾಕರ್ ತಮ್ಮದೇ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಟ್ರೈಲರ್ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ.
ವಿನೋದ್ ಪ್ರಭಾಕರ್ ಅವರು 'ವರದ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಟ್ರೈಲರ್ ನಿನ್ನೆ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ವಿನೋದ್ ಪ್ರಭಾಕರ್, ಮಾತನಾಡುವ ಅವಕಾಶ ಬಂದಾಗ ಸಿನಿಮಾದ ಟ್ರೈಲರ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.
''ನನ್ನ ಸಿನಿಮಾದ ಟ್ರೈಲರ್ ಬಗ್ಗೆ ನನಗೇ ಬೇಸರ ಇದೆ. ಇಡೀ ಟ್ರೈಲರ್ನಲ್ಲಿ ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಲಾಗಿಲ್ಲ. ಪುನೀತ್ ಅವರ ಚಿತ್ರವನ್ನು ಸಹ ಟ್ರೈಲರ್ನಲ್ಲಿ ಬಳಸಲಾಗಿಲ್ಲ. ಹಾಗಾಗಿ ನನಗೆ ಸಿನಿಮಾದ ಟ್ರೈಲರ್ ಇಷ್ಟವಾಗಲಿಲ್ಲ. ಹಾಗಾಗಿ ನಾನು ಈ ಟ್ರೈಲರ್ ಬಗ್ಗೆ ಏನೂ ಮಾತನಾಡುವುದಿಲ್ಲ'' ಎಂದಿದ್ದಾರೆ ವಿನೋದ್ ಪ್ರಭಾಕರ್.

''ಟ್ರೈಲರ್ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ'' ಎಂದ ವಿನೋದ್ ''ನನ್ನ ಬಗ್ಗೆ ಕೆಲ ಮಾತುಗಳನ್ನು ಆಡುತ್ತೇನೆ'' ಎಂದು ''ಒಬ್ಬ ಸ್ಟಾರ್ ಮಗನಾಗಿ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟೆ. ಹೀರೋ ಇಂದ ಜೀರೋ ಆದೆ. ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಪಾತ್ರಗಳಲ್ಲಿ ನಟಿಸಿ ಈಗ ಇಂಚಿಂಚಾಗಿ ಮುಂದೆಬರುತ್ತಿದ್ದೇನೆ. 'ಲಂಕಾಸುರ' ಎಂಬ ಸಿನಿಮಾಕ್ಕೆ ಕೈ ಹಾಕಿದ್ದೇನೆ. ಅದು ನನ್ನ ಕನಸು, ಕರ್ನಾಟಕದ ಜನರ ಮೇಲಿರುವ ವಿಶ್ವಾಸದಿಂದ ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿದ್ದೇನೆ'' ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
''ವರದ' ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ನಾನು ನಿರ್ದೇಶಕರ ನಟ. ನಿರ್ದೇಶಕರು ಏನು ಹೇಳುತ್ತಾರೋ ಹಾಗೆ ನಾನು ನಟಿಸುತ್ತೇನೆ. ಇದೇ 18ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ನಾನು ಸರಿ ಅಂದಿದ್ದೇನೆ. ಇಂದು ಸುದ್ದಿಗೋಷ್ಠಿ ಇದೆ ಎಂದರೆ ಅದಕ್ಕೆ ಬಂದೆ. ನಾನು ನನ್ನ 'ಲಂಕಾಸುರ' ಸಿನಿಮಾದಲ್ಲಿ ಕೊಂಚ ಬಿಜಿಯಿದ್ದೆ. ಅಲ್ಲಿ ತೊಡಗಿಸಿಕೊಂಡಿದ್ದ ಕಾರಣ ನಾನು ಇಲ್ಲಿ ಟ್ರೈಲರ್ ನೋಡಲು ಆಗಲಿಲ್ಲ. ದಯವಿಟ್ಟು ಕ್ಷಮೆ ಇರಲಿ. ಪುನೀತ್ ಸರ್ ಫೋಟೋ ಹಾಕಿಲ್ಲದಿರುವ ಕಾರಣ ನನಗೆ ತುಂಬಾನೇ ಬೇಜಾರಾಯಿತು'' ಎಂದು ವಿನೋದ್ ಪ್ರಭಾಕರ್ ಹೇಳಿದರು.
'ವರದ' ಸಿನಿಮಾವನ್ನು ಉದಯ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣವೂ ಅವರದ್ದೇ. ವಿನೋದ್ ಪ್ರಭಾಕರ್, ಅಮೃತಾ ರಂಗನಾಥ್, ಅನಿಲ್ ಸಿದ್ದು, ಚರಣ್ ರಾಜ್, ಅಶ್ವಿನಿ ಗೌಡ, ಉಮೇಶ್ ಬಣಕರ್ ಮುಂತಾದವರು ನಟಿಸಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ.
ಅಪ್ಪು ಬಗ್ಗೆ ಬಹಳ ಅಭಿಮಾನ, ಗೌರವ ಹೊಂದಿದ್ದ ನಟ ವಿನೋದ್ ಪ್ರಭಾಕರ್, ಡಿಸೆಂಬರ್ ತಿಂಗಳಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಅಪ್ಪು ಅಗಲಿಕೆಯ ನೋವು ಇರುವ ಕಾರಣ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಜೊತೆಗೆ ಅಭಿಮಾನಿಗಳು ಸಹ ಸಂಭ್ರಮಾಚರಣೆ ಮಾಡಬಾರದೆಂದು ಮನವಿ ಮಾಡಿದ್ದರು.


Click it and Unblock the Notifications











